ಕೆಜಿಎಫ್ ರೂವಾರಿ ಪ್ರಶಾಂತ್ ನೀಲ್ ಟಾಲಿವುಡ್ ಯಂಗ್ ಟೈಗರ್ ಎನ್ಟಿಆರ್ ಜೊತೆ ಸಿನಿಮಾ ಮಾಡುವುದಾಗಿ ಸುದ್ದಿಯಾಗಿತ್ತು. ಆದರೆ ಸದ್ಯದ ಸುದ್ದಿಯಪ್ರಕಾರ ಪ್ರಶಾಂತ್ ಸಿನಿಮಾಕ್ಕೆ ಬಾಹುಬಲಿಯ ಖ್ಯಾತಿಯ ಪ್ರಭಾಸ್ ನಾಯಕ ಎನ್ನಲಾಗುತ್ತಿದೆ. ಹಾಗಾದರೆ ಎನ್ಟಿಆರ್ ಜೊತೆ ಸಿನಿಮಾ ಮಾಡುವುದನ್ನು ನಿಲ್ಲಿಸಿದ್ರಾ ಪ್ರಶಾಂತ್ ಎಂದರೆ ಇಲ್ಲ ಎನ್ನುತ್ತಿದೆ ಟಾಲಿವುಡ್. ಹಾಗಾದ್ರೆ ಇದರ ಹಿಂದಿನ ಕತೆ ಏನು?
ಪ್ರಶಾಂತ್ ನೀಲ್ಗೆ ಹೆಚ್ಚು ಖ್ಯಾತಿ ತಂದು ಕೊಟ್ಟಿದ್ದು ಕೆಜಿಎಫ್ ಸಿನಿಮಾ. ಹೊಂಬಾಳೆಫಿಲ್ಮ್ಸ್ ಈ ಸಿನಿಮಾ ನಿರ್ಮಾಣ ಮಾಡಿತ್ತು. ಅಲ್ಲದೇ ಕೆಜಿಎಫ್ ನಿರ್ಮಾಪಕರ ಜೊತೆ ತಮ್ಮ ಮುಂದಿನ ಚಿತ್ರ ಮಾಡುವುದಾಗಿಯೂ ಪ್ರಶಾಂತ್ ಹೇಳಿದ್ದರು. ಜೊತೆಗೆ ಈ ಸಂಸ್ಥೆಗೆ ಪ್ರಶಾಂತ್ ಬದ್ಧರಾಗಿರುವ ಕಾರಣ ಮುಂದಿನ ಸಿನಿಮಾ ಹೊಂಬಾಳೆ ಫಿಲ್ಮ್ಸ್ ಜೊತೆ ಮಾಡುವ ಸಾಧ್ಯತೆ ಹೆಚ್ಚಿದೆ.
ಹೀಗಿರುವಾಗ ಕೆಜಿಎಫ್ ನಿರ್ಮಾಣ ಸಂಸ್ಥೆ ಪ್ರಭಾಸ್ ಅವರನ್ನು ತಮ್ಮ ಮುಂದಿನ ಚಿತ್ರಕ್ಕೆ ನಾಯಕನನ್ನಾಗಿಸುವ ಯೋಚನೆಯಲ್ಲಿದೆ. ಪ್ರಭಾಸ್ ಕೂಡ ಪ್ರಶಾಂತ್ ಜೊತೆ ಕೆಲಸ ಮಾಡುವ ಆಸಕ್ತಿ ತೋರಿದ್ದರು. ಹಾಗಾಗಿ ಪ್ರಶಾಂತ್ ಎನ್ಟಿಆರ್ ಹಾಗೂ ಪ್ರಭಾಸ್ ಈ ಇಬ್ಬರಲ್ಲಿ ಯಾರ ಸಿನಿಮಾವನ್ನು ಮೊದಲು ಕೈಗೆತ್ತಿಕೊಳ್ಳಬಹುದು ಎಂದು ಮಾತನಾಡಿಕೊಳ್ಳುತ್ತಿದೆ ಟಾಲಿವುಡ್.
ಪ್ರಶಾಂತ್ ನಿರ್ದೇಶನ ಎನ್ಟಿಆರ್ ಸಿನಿಮಾಕ್ಕೆ ಮೈತ್ರಿ ಮೂನಿ ಮೇಕರ್ಸ್ ಸಂಸ್ಥೆ ಹಣ ಹೂಡಿಕೆ ಮಾಡಿದೆ. ಅಲ್ಲದೇ ಈ ಸಂಸ್ಥೆ ಪ್ರಶಾಂತ್ಗೆ ಮುಂಗಡ ಹಣವನ್ನು ನೀಡಿದೆ ಎಂಬ ಸುದ್ದಿಯೂ ಇದೆ.
ವೈಜಯಂತಿ ಮೂವೀಸ್ ನಿರ್ಮಾಣದಲ್ಲಿ ನಾಗ್ ಅಶ್ವಿನ್ ಜೊತೆ ಪ್ರಭಾಸ್ ನಟಿಸುವುದು ಪಕ್ಕಾ ಆಗಿದೆ. ಒಂದು ವೇಳೆ ಪ್ರಶಾಂತ್ ಪ್ರಭಾಸ್ ಜೊತೆ ಕೆಲಸ ಮಾಡುವುದು ಪಕ್ಕಾ ಆದರೆ ಅವರು ಈ ಪ್ರಭಾಸ್ಗಾಗಿ ಎರಡು ವರ್ಷಗಳ ಕಾಲ ಕಾಯಬೇಕು ಅಥವಾ ಪ್ರಭಾಸ್ ನಾಗ್ ಅಶ್ವಿನ್ ಚಿತ್ರವನ್ನು ಮುಂದಕ್ಕೆ ಹಾಕಬೇಕು. ಪ್ರಭಾಸ್ ಇದನ್ನು ಹೇಗೆ ನಿಭಾಯಿಸುತ್ತಾರೆ ಕಾದು ನೋಡ ಬೇಕಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.