ನಟ, ನೃತ್ಯ ನಿರ್ದೇಶಕ ನಾಗೇಂದ್ರ ಪ್ರಸಾದ್ ಸಿನಿಮಾ ನಿರ್ದೇಶನದತ್ತ ಮನಸ್ಸು ವಾಲಿಸಿದ್ದಾರೆ. ಮೊದಲ ಬಾರಿಗೆ ಆ್ಯಕ್ಷನ್ ಕಟ್ ಹೇಳುತ್ತಿರುವ ನಾಗೇಂದ್ರ ಅವರ ಸಿನಿಮಾದಲ್ಲಿ ಚಂದನವನದ ಸ್ಟಾರ್ ನಟರು ನಟಿಸುತ್ತಿದ್ದಾರೆ ಎಂಬ ಮಾಹಿತಿ ಇದೆ. ಆಂಗ್ಲ ಮಾಧ್ಯಮವೊಂದರ ವರದಿಯ ಪ್ರಕಾರ ಈ ಸಿನಿಮಾದಲ್ಲಿ ಲವ್ ಮಾಕ್ಟೇಲ್ ಖ್ಯಾತಿ ಡಾರ್ಲಿಂಗ್ ಕೃಷ್ಣ ಹಾಗೂ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ತೆರೆ ಹಂಚಿಕೊಳ್ಳಲಿದ್ದಾರಂತೆ. ಕೃಷ್ಣ ನಾಯಕನಾಗಿ ನಟಿಸುತ್ತಿರುವ ಈ ಚಿತ್ರದಲ್ಲಿ ಪುನೀತ್ ಮುಖ್ಯಪಾತ್ರವೊಂದರಲ್ಲಿ ನಟಿಸಲಿದ್ದಾರಂತೆ.
ತಮಿಳಿನ ಓ ಮೈ ಕಾಡುವಲೆ ಚಿತ್ರದಿಂದ ಸ್ಫೂರ್ತಿ ಪಡೆದು ಈ ಸಿನಿಮಾವನ್ನು ಮಾಡಲಾಗುತ್ತಿದೆಯಂತೆ. ಕನ್ನಡ ಅವತರಣಿಕೆಯಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆಯಂತೆ. ಫ್ಯಾಂಟಸಿ ರೊಮ್ಯಾಂಟಿಕ್ ಕಥೆ ಹೊಂದಿರುವ ಈ ಚಿತ್ರದ ಮೂಲಕ ಚಂದನವನದಲ್ಲಿ ನಿರ್ದೇಶಕನ ಪಟ್ಟಕ್ಕೇರಲಿದ್ದಾರೆ ನಾಗೇಂದ್ರ ಪ್ರಸಾದ್. ಇವರು ಖ್ಯಾತ ನೃತ್ಯನಿರ್ದೇಶಕ ಮೂಗೂರ್ ಸುಂದರ್ ಅವರ ಪುತ್ರ. ಖ್ಯಾತ ನೃತ್ಯನಿರ್ದೇಶಕ ನಟ ಪ್ರಭುದೇವ ಹಾಗೂ ನಿರ್ಮಾಪಕ ರಾಜು ಸುಂದರ್ರಾಮ್ ಅವರ ಸಹೋದರ. ಇವರು ಇತ್ತೀಚೆಗೆ ವಿಜಯ್ ಸೇತುಪತಿ ನಟನೆಯ ಲಾಭಂ ಚಿತ್ರದಲ್ಲಿ ನಟಿಸಿದ್ದರು.
ಈ ಚಿತ್ರಕ್ಕೆ ಸಂಬಂಧಿಸಿ ಚಿತ್ರತಂಡದಿಂದ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಪುನೀತ್ ರಾಜ್ಕುಮಾರ್ ಈ ಸಿನಿಮಾದಲ್ಲಿ ನಟಿಸಲು ಒಪ್ಪಿದ್ದಾರಾ ಇಲ್ಲವಾ ಎಂಬುದು ಸ್ಪಷ್ಟವಾಗಿಲ್ಲ. ಸದ್ಯ ಪುನೀತ್ ಯುವರತ್ನ ಚಿತ್ರದ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಅಲ್ಲದೇ ಚೇತನ್ ಕುಮಾರ್ ನಿರ್ದೇಶನದ ಜೇಮ್ಸ್ ಚಿತ್ರದ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ.
ಕೃಷ್ಣ ಲವ್ ಮಾಕ್ಟೇಲ್ 2 ಹಾಗೂ ಶ್ರೀಕೃಷ್ಣ@ಜಿಮೇಲ್ ಡಾಟ್ ಕಾಮ್ ಚಿತ್ರಗಳ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಇವರ ಶುಗರ್ ಫ್ಯಾಕ್ಟರಿ ಚಿತ್ರದ ಶೂಟಿಂಗ್ ಈ ತಿಂಗಳ ಅಂತ್ಯದಿಂದ ಆರಂಭವಾಗಲಿದೆ. ಫೆಬ್ರುವರಿ 14ಕ್ಕೆ ಇವರು ನಟಿ ಮಿಲನಾ ನಾಗರಾಜ್ ಜೊತೆ ಸಪ್ತಪದಿ ತುಳಿಯಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.