ADVERTISEMENT

ಆತ್ಮಹತ್ಯೆಯ ಸುದ್ದಿಗಳನ್ನು ಸಂಗೀತ ಕ್ಷೇತ್ರದಿಂದಲೂ ಕೇಳಬಹುದು: ಸೋನು ನಿಗಂ

ಖ್ಯಾತ ಗಾಯಕ ಸೋನು ನಿಗಂ

​ಪ್ರಜಾವಾಣಿ ವಾರ್ತೆ
Published 19 ಜೂನ್ 2020, 14:15 IST
Last Updated 19 ಜೂನ್ 2020, 14:15 IST
ಸೋನು ನಿಗಮ್
ಸೋನು ನಿಗಮ್   

'ಆತ್ಮಹತ್ಯೆಯ ಸುದ್ದಿಗಳನ್ನುಶೀಘ್ರದಲ್ಲಿಯೇಸಂಗೀತ ಕ್ಷೇತ್ರದಿಂದಲೂ ಕೇಳಬಹುದು‘–ಹೀಗೊಂದು ಆಘಾತಕಾರಿ ಸಂಗತಿಯನ್ನು ಹೇಳಿದವರು ಖ್ಯಾತ ಗಾಯಕ ಸೋನು ನಿಗಮ್. ಅವರು ಈ ಬಗ್ಗೆತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಸುದೀರ್ಘ ವಿಡಿಯೊವೊಂದನ್ನು ಪೋಸ್ಟ್‌ ಮಾಡಿದ್ದಾರೆ.

ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ನಂತರ ಬಾಲಿವುಡ್‌ನಲ್ಲಿ ಕೇಳಿಬರುತ್ತಿರುವ ಸ್ವಜನಪಕ್ಷಪಾತ ವಿರೋಧಿ ಬೆಳವಣಿಗೆಯನ್ನು ಗಮನಿಸುತ್ತಿರುವ ಅವರು ‘ಇಂತಹ ನಡವಳಿಕೆ ಸಿನಿಮಾ ಕ್ಷೇತ್ರದಲ್ಲಿ ಮಾತ್ರವಲ್ಲ,ಸಂಗೀತ ಕ್ಷೇತ್ರದಲ್ಲೂ ಇದೆ. ಇಲ್ಲಿ ಹೊಸಬರಿಗೆ ಸರಿಯಾದ ಅವಕಾಶವಿಲ್ಲ. ಇದು ಯುವ ಉತ್ಸಾಹಿಗಳನ್ನು ಕುಗ್ಗಿಸಬಹುದು, ಮಾನಸಿಕ ಖಿನ್ನತೆಗೆ ದೂಡಬಹುದು‘ ಎಂದು ವಿಡಿಯೊದಲ್ಲಿ ವಿವರಿಸಿದ್ದಾರೆ.

’ಈಗ ಇಡೀ ಭಾರತ ಮಾನಸಿಕ, ಭಾವನಾತ್ಮಕ ಒತ್ತಡದಲ್ಲಿದೆ. ಸುಶಾಂತ್ ಸಿಂಗ್ ಸಾವು ಒಂದಾದರೆ,ಮತ್ತೊಂದು ಭಾರತೀಯ ಸೈನಿಕರ ಹತ್ಯೆ. ನಮ್ಮ ಕಣ್ಣ ಮುಂದೆಯೇ ಚಿಕ್ಕ ಹುಡುಗ ಮರಣ ಹೊಂದಿದ್ದು ಸಣ್ಣ ವಿಷಯ ಅಲ್ಲ. ಯಾರಾದರೂ ಭಾವುಕರಾಗುತ್ತಾರೆ‘ ಎಂದು ಸೋನು ಹೇಳಿದ್ದಾರೆ.

ADVERTISEMENT

’ಇಂದು ಸುಶಾಂತ್ ಸತ್ತಿದ್ದಾರೆ. ನಾಳೆ ಗಾಯಕ, ಸಂಗೀತ ನಿರ್ದೇಶಕ, ಗೀತ ರಚನೆಕಾರನ ಸಾವಿನ ಬಗ್ಗೆ ಕೇಳಬಹುದು. ಸಿನಿಮಾಕ್ಕಿಂತ ದೊಡ್ಡ ಮಾಫಿಯಾ ಸಂಗೀತ ಕ್ಷೇತ್ರದಲ್ಲಿ ಇದೆ. ಇಲ್ಲೂ ಸ್ವಜನಪಕ್ಷಪಾತ, ಹೊಸಬರನ್ನು ಅವಮಾನ ಮಾಡುವಂತಹ ಕೆಲಸಗಳು ನಡೆಯುತ್ತಿವೆ. ನಾನು ಅದೃಷ್ಟವಂತ. ಹಿಂದಿನ ಕಾಲದಲ್ಲಿಯೇ ಇಲ್ಲಿಗೆ ಬಂದು ಬಚಾವಾದೆ. ಆದರೆ ಈಗ ಬರುವ ಹೊಸ ಹುಡುಗರು ಇಂತಹ ಕಷ್ಟಗಳನ್ನು ಅನುಭವಿಸಬೇಕು. ಅವರಿಗೆ ಬಹಳ ಕಷ್ಟವಿದೆ‘ ಎಂದು ಸಂಗೀತ ಕ್ಷೇತ್ರದಲ್ಲೂ ಇರುವ ಧೋರಣೆಯನ್ನು ಹೊರಹಾಕಿದ್ದಾರೆ.

ಅವಕಾಶಕ್ಕಾಗಿ ಕಾಯುತ್ತಿರುವ ಯುವ ಗಾಯಕರ ತೊಳಲಾಟವನ್ನು ಅವರು ಬಿಚ್ಚಿಟ್ಟಿದ್ದಾರೆ. ‘ಅನೇಕ ಯುವ ಗಾಯಕರು ನನ್ನ ಬಳಿ ಅವರ ಸಂಕಟ ಹೇಳಿಕೊಂಡಿದ್ದಾರೆ. ‘ಸೋನು ಭಯ್ಯಾ, ಮ್ಯೂಸಿಕ್ ಕಂಪೆನಿಗಳು ನನಗೆ ಅವಕಾಶ ಕೊಡುವುದಾಗಿ ಹೇಳಿ, ಕೊನೆ ಕ್ಷಣದಲ್ಲಿ ನಿರಾಕರಿಸುತ್ತಾರೆ’ ಎಂದು ಹೇಳುವ ಹೊಸ ಸಂಗೀತ ನಿರ್ದೇಶಕರು, ಗೀತರಚನೆಕಾರರ ಕಣ್ಣುಗಳಲ್ಲಿ, ಮಾತುಗಳಲ್ಲಿ ತೀವ್ರವಾದ ಹತಾಶೆಯನ್ನು ನಾನು ಕಂಡಿದ್ದೇನೆ‘ಎಂದಿದ್ದಾರೆ.

ಈ ಕಾಲದ ಧೋರಣೆಗಳನ್ನೂ ಹೇಳುತ್ತಾ, ಇಪ್ಪತ್ತೈದು ವರ್ಷಗಳಲ್ಲಿ ಸಂಗೀತ ಕ್ಷೇತ್ರದಲ್ಲಿ ತಾವು ಅನುಭವಿಸಿದ ಸಂಕಷ್ಟಗಳನ್ನೂ ಉಲ್ಲೇಖಿಸಿದ್ದಾರೆ.

’ಆರಂಭದಲ್ಲಿ ನಾನು ತುಂಬ ಹಾಡುಗಳನ್ನು ಹಾಡಿದ್ದೇನೆ. ಅವುಗಳಲ್ಲಿಟ್ರ್ಯಾಕ್ ಅಷ್ಟೇ ಉಳಿಸಿ ಬೇರೆಯವರಿಂದ ಹಾಡಿಸಿದ್ದಾರೆ. ಅದನ್ನು ಹೇಳಲು ಮುಜುಗರವಾಗುತ್ತದೆ. ಇದು ಅವಮಾನ. ಕೆಲಸ ಕೊಡಿ ಎಂದು ನಾನು ಯಾರಿಗೂ ಕೇಳಿರಲಿಲ್ಲ. ಆದರೆ ಅವರೇ ಕರೆಸಿ ನನ್ನಿಂದ ಹಾಡು ಹಾಡಿಸಿ ಕೊನೆಗೆ ಬೇರೆಯವರಿಂದ ಡಬ್ ಮಾಡಿಸಿದ್ದಾರೆ.ಇದೇ ರೀತಿ ಆರ್ಜಿತ್ ಸಿಂಗ್‌ಗೂ ಆಗಿದೆ‘ ಎಂದು ತಾವು ಅನುಭವಿಸಿದ ಕಷ್ಟಗಳನ್ನು ಸೋನು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.