ADVERTISEMENT

ಮಧುರ ನೆನಪು ಬಿಟ್ಟು ಹೋದ ಚಂದನವನದ ಹಸನ್ಮುಖಿ ನಟ ಚಿರಂಜೀವಿ ಸರ್ಜಾ

​ಪ್ರಜಾವಾಣಿ ವಾರ್ತೆ
Published 7 ಜೂನ್ 2020, 12:50 IST
Last Updated 7 ಜೂನ್ 2020, 12:50 IST
ಕುಟುಂಬ ಸದಸ್ಯರೊಂದಿಗೆ ನಟ ಚಿರಂಜೀವಿ ಸರ್ಜಾ
ಕುಟುಂಬ ಸದಸ್ಯರೊಂದಿಗೆ ನಟ ಚಿರಂಜೀವಿ ಸರ್ಜಾ   

ಚಿರಂಜೀವಿ ಸರ್ಜಾ ಕುಟುಂಬದ ಸದಸ್ಯರು ಮತ್ತು ಅಭಿಮಾನಿಗಳ ಪಾಲಿಗೆ ‘ಚಿರು’ ಎಂದೇ ಚಿರಪರಿಚಿತ. ಅವರ ತಾತ, ಅಪ್ಪ, ಮಾವ, ಅತ್ತೆ, ಸೋದರ ಎಲ್ಲರೂ ಕನ್ನಡ ಚಿತ್ರರಂಗಕ್ಕೆ ದುಡಿದವರೇ. ಸಿನಿಮಾ ಕುಟುಂಬದಲ್ಲಿಯೇ ಜನಿಸಿ, ಸಿನಿಮಾದೊಂದಿಗೆ ಬೆಳೆದು, ಸಿನಿಮಾದಲ್ಲಿ ನಟಿಸುತ್ತಿರುವ ಕಾಲದಲ್ಲೇ ತೀರಿಹೋದ ಚಿರು ಬಿಟ್ಟುಹೋಗಿರುವ ಮಧುರ ನೆನಪುಗಳಿಗೆ ಬರವಿಲ್ಲ. ಚಂದನವನದಲ್ಲಿ ಸದಾ ನೆನಪಿನಲ್ಲಿ ಉಳಿಯುವ ‘ಹಸನ್ಮುಖಿ ಮುಖ’ ಅವರದ್ದು.

ಚಿರು ಹುಟ್ಟಿದ್ದು ಬೆಂಗಳೂರಿನಲ್ಲಿಯೇ (1980ರ ಅಕ್ಟೋಬರ್ 17ರಂದು). ಬಾಲ್ಡ್‌ವಿನ್‌ ಬಾಲಕರ ಹೈಸ್ಕೂಲ್‌ನಲ್ಲಿ ವಿದ್ಯಾಭ್ಯಾಸ ಮಾಡಿದರು. ನಂತರ ಪದವಿ ಶಿಕ್ಷಣಗಾಗಿ ವಿಜಯ ಕಾಲೇಜಿಗೆ ಸೇರಿದರು. ಆದರೆ, ಅವರ ಮನಸ್ಸು ಸದಾ ಬಣ್ಣದಲೋಕದತ್ತಲೇ ವಾಲುತ್ತಿತ್ತು. ಮನೆಯಲ್ಲಿದ್ದ ಸಿನಿಮಾದ ವಾತಾವರಣವೇ ಇದಕ್ಕೆ ಕಾರಣವಾಗಿತ್ತು. ತಾನು ಕೂಡ ಬೆಳ್ಳಿತೆರೆಯಲ್ಲಿ ಕೆಲಸ ಮಾಡಬೇಕೆಂದು ಸೋದರ ಮಾವ ಅರ್ಜುನ್‌ ಸರ್ಜಾ ಬಳಿ ಆಸೆ ತೋಡಿಕೊಂಡರು. ಕೊನೆಗೆ, ಅವರೊಟ್ಟಿಗೆ ನಾಲ್ಕು ವರ್ಷಗಳ ಕಾಲ ಸಹ ನಿರ್ದೇಶಕನಾಗಿ ದುಡಿದರು. ಅವರು ನಟನೆಯ ಪಟ್ಟುಗಳನ್ನು ಕಲಿತಿದ್ದು ಅಲ್ಲಿಯೇ.

ಚಿರು ಕ್ಯಾಮೆರಾ ಎದುರಿನ ನಟನೆಯ ಪಯಣ ಆರಂಭಿಸಿದ್ದು, ‘ವಾಯುಪುತ್ರ’ ಸಿನಿಮಾದ ಮೂಲಕ. ಇದು ತೆರೆಕಂಡಿದ್ದು 2009ರಲ್ಲಿ. ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರೂ ಅವರಿಗೆ ನಿರೀಕ್ಷಿತ ಯಶಸ್ಸು ಸಿಗಲಿಲ್ಲ. ಗಲ್ಲಾಪೆಟ್ಟಿಗೆಯಲ್ಲಿ ಈ ಸಿನಿಮಾ ಹೆಚ್ಚಿನ ಸದ್ದು ಮಾಡಲಿಲ್ಲ. ಆದರೆ, ಅವರ ನಟನೆಯು ಬಹುಬೇಗ ಸಿನಿಪ್ರಿಯರ ಮನ ಸೆಳೆಯಿತು. ಈ ಚಿತ್ರದ ಬಳಿಕ ಅವರು ‘ಗಂಡೆದೆ’ ಚಿತ್ರದಲ್ಲಿ ನಟಿಸಿದರು. ಈ ಸಿನಿಮಾವೂ ಅವರಿಗೆ ಅಷ್ಟೊಂದು ಖ್ಯಾತಿ ತಂದುಕೊಡಲಿಲ್ಲ. ಹಾಗೆಂದು ಅವರು ಸುಮ್ಮನೇ ಕೂರಲಿಲ್ಲ.

ADVERTISEMENT

2010ರಲ್ಲಿ ತೆರೆಗೆ ಬಂದ ‘ಚಿರು’ ಸಿನಿಮಾ ಅವರೊಳಗಿನ ಪ್ರತಿಭೆಗೆ ಕನ್ನಡಿ ಹಿಡಿಯಿತು. ಆ ಚಿತ್ರದಲ್ಲಿನ ಮನೋಜ್ಞ ನಟನೆಯಿಂದಾಗಿ ಅವರು ಕನ್ನಡ ಚಿತ್ರರಂಗದಲ್ಲಿ ನಾಯಕ ನಟನಾಗಿ ಗುರುತಿಸಲ್ಪಟ್ಟರು. ಅದಾದ ಬಳಿಕ ಒಂದಾದ ಮೇಲೊಂದರಂತೆ ಸಿನಿಮಾಗಳಲ್ಲಿ ನಟಿಸಿದರು. ಆರಂಭದಲ್ಲಿ ಅವರು ಲವ್‌ ಸ್ಟೋರಿ ಸಿನಿಮಾಗಳಲ್ಲಿ ನಟಿಸಿದ್ದು ಹೆಚ್ಚು. ಬಳಿಕ ಆ್ಯಕ್ಷನ್‌ ಜಾಡಿಗೆ ಹೊರಳಿದರು. ಸಾಫ್ಟ್‌ ಹಾಗೂ ಅಂಡರ್‌ ಫ್ಲೇ ಇರುವಂತಹ ಪಾತ್ರಗಳಲ್ಲಿಯೇ ನಟಿಸುತ್ತಿದ್ದ ಚಿರು, ಕಳೆದ ವರ್ಷ ‘ಸಿಂಗ’ ಸಿನಿಮಾದ ಮೂಲಕ ಹೈವೋಲ್ಟೇಜ್‌ನ ಪಾತ್ರದತ್ತಲೂ ಹೊರಳಿದರು. ಇದರಲ್ಲಿನ ಅವರ ಆ್ಯಂಗ್ರಿ ಯಂಗ್‌ಮನ್‌ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದರು. ಅವರು ನಟಿಸಿರುವ ‘ರಾಜಮಾರ್ತಾಂಡ’, ‘ರಣಂ’ ಸಿನಿಮಾಗಳು ಬಿಡುಗಡೆಯ ಹಂತದಲ್ಲಿವೆ.

ಸುದೀಪ್‌ ಜೊತೆಗೂ ನಟನೆ

ಅಯ್ಯಪ್ಪ ಪಿ. ಶರ್ಮ ನಿರ್ದೇಶನದ ‘ವರದನಾಯಕ’ ಸಿನಿಮಾ ತೆರೆಕಂಡಿದ್ದು 2013ರಲ್ಲಿ. ಇದರಲ್ಲಿ ನಟ ಸುದೀಪ್‌ ಜೊತೆಗೆ ಚಿರಂಜೀವಿ ಸರ್ಜಾ ಕೂಡ ನಟಿಸಿದ್ದರು. ‘ಹರಿ’ಯ ಪಾತ್ರದ ಮೂಲಕ ಗಮನ ಸೆಳೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.