ಕರಾವಳಿಯ ದೈವ ನರ್ತನದ ಕ್ಲೈಮ್ಯಾಕ್ಸ್ನಿಂದಲೇ ಗಮನ ಸೆಳೆದ ಚಿತ್ರ ‘ಕಾಂತಾರ’. ಕಾಡಿನಂಚಿನ ಬುಡಕಟ್ಟು ಜನರು ಮತ್ತು ಉಳ್ಳವರು, ಅಧಿಕಾರಿಗಳ ನಡುವಿನ ದೈವ ಸಂಘರ್ಷ ಚಿತ್ರಜಗತ್ತಿನಲ್ಲೊಂದು ಹೊಸ ಲೋಕ ತೆರೆದಿಟ್ಟಿತ್ತು. ಹೀಗಾಗಿ ‘ಕಾಂತಾರ: ಚಾಪ್ಟರ್ 1’ ಮೇಲೆ ಸಾಕಷ್ಟು ನಿರೀಕ್ಷೆಯಿತ್ತು. ಕರಾವಳಿ, ಮಲೆನಾಡು ಭಾಗಗಳಲ್ಲಿ ದೈವ, ಭೂತ, ಚೌಡಿ, ಪಂರ್ಜುಲಿ...ಹೀಗೆ ನೂರಾರು ದೈವಗಳನ್ನು ಆರಾಧಿಸುತ್ತಾರೆ. ರಕ್ತ, ಮಾಂಸ ಬೇಡುವ ಈ ದೈವಗಳನ್ನು ದೇವರ ಸ್ಥಾನದಲ್ಲಿ ಕೂರಿಸುವುದಿಲ್ಲ. ಬದಲಿಗೆ ಶಿವಗಣಗಳೆಂದು ನಂಬುತ್ತಾರೆ. ಅಂಥದ್ದೇ ಶಿವಗಣಗಳ ಸಾಮ್ರಾಜ್ಯ ‘ಕಾಂತಾರ’ದ ಕಾಡು. ಆ ಕಾಡಿನಲ್ಲಿ ವಿರೋಧಿಗಳಿಂದ ದೈವವನ್ನು ಕಾಯುವವನು ಕಥಾನಾಯಕ ‘ಬೆರ್ಮೆ’.
ಕ್ರಿ.ಶ.4-5 ಶತಮಾನದ ಕದಂಬರ ಆಳ್ವಿಕೆಯ ಸಮಯವನ್ನು ಹಿನ್ನೆಲೆಯಾಗಿಟ್ಟುಕೊಂಡು ಸೃಷ್ಟಿಯಾದ ಮಾಯಾವಿಲೋಕವಿದು. ಕಾಡಿನಿಂದ ಹೊರಬಂದು ಸರಿಯಾಗಿ ಊರನ್ನೇ ನೋಡದ, ಮನುಕುಲದ ಸಂಪರ್ಕವೇ ಇಲ್ಲದ ‘ಬೆರ್ಮೆ’ ಮತ್ತವನ ಸಂಗಡಿಗರು ಬಾಂಗ್ರಾ ರಾಜ್ಯಕ್ಕೆ ಕಾಲಿಡುತ್ತಾರೆ. ಬಾಂಗ್ರಾ ರಾಜ ಮನೆತನದ ಅರಸ ರಾಜಶೇಖರ ಮತ್ತು ಆತನ ಮಗ ಕುಲಶೇಖರನಿಗು ಹಾಗೂ ಈ ಕಾಂತಾರದ ಕಾಡಿಗೂ ಒಂದು ನಂಟಿದೆ. ಅಜ್ಜನ ಕಾಲದಿಂದಲೂ ದ್ವೇಷವಿದೆ. ಈಶ್ವರನ ಹೂದೋಟ ಎಂಬ ಸಣ್ಣ ಭಯವೂ ಇದೆ. ಬಾಂಗ್ರಾ ರಾಜ್ಯದ ಪರಿಚಯ, ಅಲ್ಲಿನ ಪಾತ್ರಗಳು, ಅವರ ಹಿನ್ನೆಲೆ, ವ್ಯಾಪಾರ, ‘ಬೆರ್ಮೆ’ ಮತ್ತವನ ಸಂಗಡಿಗರು ಈ ರಾಜ್ಯಕ್ಕೆ ಬಂದು ಇಲ್ಲಿನ ವೈಭವವನ್ನು ತುಂಬಿಕೊಳ್ಳುವ ಹೊತ್ತಿಗೆ ಚಿತ್ರದ ಮೊದಲಾರ್ಧ ಮುಗಿದಿರುತ್ತದೆ. ‘ಕಾಂತಾರ’ದ ಕ್ಲೈಮ್ಯಾಕ್ಸ್ ದೃಶ್ಯವೇ ಈ ಚಿತ್ರದ ಇಂಟರ್ವಲ್. ‘ಬೆರ್ಮೆ’ ದೈವದ ಮಗ ಎಂಬುದು ಇಲ್ಲಿ ಗೊತ್ತಾಗುತ್ತದೆ. ಈತನನ್ನು ಯಾರಿಂದಲೂ ಮುಟ್ಟಲು ಸಾಧ್ಯವಿಲ್ಲ ಎಂಬುದೂ ಇಲ್ಲಿಯೇ ಸ್ಪಷ್ಟವಾಗಿ, ದ್ವಿತೀಯಾರ್ಧದ ಕಥೆಗೂ ಒಂದು ರೀತಿ ಇಲ್ಲಿಯೇ ಕ್ಲೈಮ್ಯಾಕ್ಸ್ ಸಿಕ್ಕಿರುತ್ತದೆ!
ಇಡೀ ಚಿತ್ರದ ಹೈಲೆಟ್ ಎಂದರೆ ಮೇಕಿಂಗ್. ಸಾಕಷ್ಟು ಫ್ರೇಮ್ಗಳು ರಾಜಮೌಳಿಯ ‘ಬಾಹುಬಲಿ’, ಸಂಜಯ್ ಲೀಲಾ ಬನ್ಸಾಲಿಯ ‘ಪದ್ಮಾವತ್’ ಚಿತ್ರಗಳನ್ನು ನೆನಪಿಸುತ್ತವೆ. ಚಿತ್ರದಲ್ಲಿನ ‘ದೈವ’ವೆಂಬ ಅಂಶದ ಹೊರತಾಗಿ ಮಾಸ್ ಆ್ಯಕ್ಷನ್ ಸಿನಿಮಾ ಎನಿಸಿಕೊಳ್ಳಲು ಬೇಕಾದ ಎಲ್ಲ ಸಿದ್ಧಸೂತ್ರಗಳೂ ಇವೆ! ವಿಪರೀತ ಹೊಡೆದಾಟ, ಅಕ್ರಮ ಸಂಬಂಧ ಕುರಿತಾದ ಮಾತುಗಳು, ಬಲವಂತದ ಹಾಸ್ಯ ಸನ್ನಿವೇಶಗಳು ಹಿಂದಿನ ‘ಕಾಂತಾರ’ ಭಕ್ತಿಪ್ರಧಾನ ಚಿತ್ರವಾಗಿತ್ತು, ನಮ್ಮ ಮಣ್ಣಿನ ಸೊಗಡಿನ ಕಥೆಯಾಗಿತ್ತು ಎಂಬುದನ್ನು ಮರೆಸುವಂತಿವೆ. ಚಿತ್ರದ ಕೊನೆಯಲ್ಲಿ ‘ಅಧ್ಯಾಯ–2’ ಬರಲಿದೆ ಎಂಬ ಸುಳಿವು ನೀಡಲಾಗಿದೆ.
ಸಾಕಷ್ಟು ಕಡೆ ತಾಳ್ಮೆ ಪರೀಕ್ಷಿಸುವ ಮೊದಲಾರ್ಧಕ್ಕಿಂತ ದ್ವಿತೀಯಾರ್ಧದ ಕಥೆ ವೇಗವಾಗಿದೆ. ಆದರೆ ಈ ಭಾಗದ ಅರ್ಧದಷ್ಟು ಕಥೆಯನ್ನು ಆ್ಯಕ್ಷನ್ ಮಾಸ್ಟರ್ ನುಂಗಿ ಹಾಕಿದ್ದಾರೆ! ಕ್ಲೈಮ್ಯಾಕ್ಸ್ನಲ್ಲಿ ಹಿಂದಿನ ಭಾಗದಂತೆ ನಿರೀಕ್ಷಿತ ದೈವ ನರ್ತನ, ಶತ್ರುಗಳ ಸಂಹಾರ. ಕೊನೆಗೆ ಕಣ್ಣನಲ್ಲಿ ಉಳಿಯುವುದು ‘ಬೆರ್ಮೆ’ಯಾಗಿ ರಿಷಬ್ ಶೆಟ್ಟಿ ನಟನೆ, ಅಬ್ಬರಗಳು ಮಾತ್ರ. ದೈವ ನಿಜವಾಗಿಯೂ ಮೈಮೇಲೆ ಬಂದಿದೆ ಎಂಬಂತೆ ನಟಿಸಿದ್ದಾರೆ. ಸಾಕಷ್ಟು ಕಡೆ ರಿಸ್ಕ್ ತೆಗೆದುಕೊಂಡು ತಾವು ಯಾವ ಆ್ಯಕ್ಷನ್ ನಾಯಕನಿಗೂ ಕಮ್ಮಿಯಿಲ್ಲ ಎಂಬುದನ್ನು ನಿರೂಪಿಸಿದ್ದಾರೆ.
ಕನಕವತಿಯಾಗಿ ರುಕ್ಮಿಣಿ ವಸಂತ್ ಇಷ್ಟವಾಗುತ್ತಾರೆ. ಬಾಂಗ್ರಾ ರಾಜ ಮನೆತನದ ಅರಸರಾಗಿ ಜಯರಾಮ್ ಮತ್ತು ಅವರ ಮಗ ಕುಲಶೇಖರನಾಗಿ ಗುಲ್ಶನ್ ದೇವಯ್ಯ ಕಾಣಿಸಿಕೊಂಡಿದ್ದಾರೆ. ಸೈನಿಕನಾಗಿ ಪ್ರಕಾಶ್ ತೂಮ್ಮಿನಾಡು ಹಾಗೂ ದೀಪಕ್ ರೈ ಕೆಲವೆಡೆ ನಗಿಸುತ್ತಾರೆ. ಅಜನೀಶ್ ಲೋಕನಾಥ್ ಹಿನ್ನೆಲೆ ಸಂಗೀತ ದೃಶ್ಯಗಳ ವೈಭವವನ್ನು ಇನ್ನಷ್ಟು ಹೆಚ್ಚಿಸಿದೆ. ಆದರೆ ಹಾಡುಗಳು ನೆನಪಿನಲ್ಲಿ ಉಳಿಯುವುದಿಲ್ಲ. ಅರವಿಂದ್ ಕಶ್ಯಪ್ ಛಾಯಾಚಿತ್ರಗ್ರಹಣ ಇಡೀ ಚಿತ್ರದ ಮತ್ತೊಂದು ಹೈಲೆಟ್. ಕ್ಲೈಮ್ಯಾಕ್ಸ್ನಲ್ಲಿ ಬರುವ ಬ್ರಹ್ಮರಾಕ್ಷಸನ ಪಾತ್ರವಂತೂ ಬಾಲಿವುಡ್, ಹಾಲಿವುಡ್ ಮಂದಿಯ ದೈವದ ಕಥೆಯನ್ನು ನೋಡಿಕೊಂಡು ಬಂದೆವು ಎಂಬ ಅನುಭವ ನೀಡಿ ಕಳುಹಿಸುತ್ತದೆ!
ನೋಡಬಹುದಾದ ಚಿತ್ರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.