ADVERTISEMENT

ದಿ ರೈಸ್‌ ಆಫ್‌ ಅಶೋಕ ಸಿನಿಮಾ ವಿಮರ್ಶೆ: ಸಿದ್ಧಸೂತ್ರದಲ್ಲಿ ಸಾಗುವ ಕ್ರಾಂತಿಯ ಕಥೆ

ಅಭಿಲಾಷ್ ಪಿ.ಎಸ್‌.
Published 27 ಫೆಬ್ರುವರಿ 2026, 9:40 IST
Last Updated 27 ಫೆಬ್ರುವರಿ 2026, 9:40 IST
ಸಪ್ತಮಿ ಗೌಡ, ಸತೀಶ್‌ ನೀನಾಸಂ 
ಸಪ್ತಮಿ ಗೌಡ, ಸತೀಶ್‌ ನೀನಾಸಂ    

ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಕೃತಿಯಲ್ಲಿನ ‘ಇಲ್ಲಿ ಯಾರೂ ಮುಖ್ಯರಲ್ಲ ಯಾರೂ ಅಮುಖ್ಯರಲ್ಲ’ ಎನ್ನುವ ತತ್ವವೇ ಸಿನಿಮಾದ ಜೀವಾಳ. ಇತ್ತೀಚೆಗೆ ತೆರೆಕಂಡ ‘ಹೆಬ್ಬುಲಿ ಕಟ್‌’, ‘ಲ್ಯಾಂಡ್‌ಲಾರ್ಡ್‌’ ರೀತಿಯೇ ದಬ್ಬಾಳಿಕೆ, ಅಸ್ಪೃಶ್ಯತೆ, ದೌರ್ಜನ್ಯ ಮುಂತಾದ ಅಂಶಗಳ ಸುತ್ತ ಸುತ್ತುವ ಕ್ರಾಂತಿಯ ಕಥೆ ಇಲ್ಲಿದೆ.  

70ರ ದಶಕ. ಆವರತ್ತಿ ಎಂಬ ಗ್ರಾಮದಲ್ಲಿ ತಮಿಳು ಮೂಲದ ‘ಕುಟ್ಟಿಬಾಬ್ಜಿ’(ಸಂಪತ್‌) ಎಂಬಾತ ದೇವಸ್ಥಾನದಲ್ಲಿ ಹರಕೆಯಾಗಿ ಕೊಡುವ ತಲೆಕೂದಲಿನ ವ್ಯಾಪಾರದ ಕೋಟೆ ಕಟ್ಟಿಕೊಂಡಿದ್ದಾನೆ. ಇಂತಹ ಕೋಟೆಯೊಳಗಿನ ಮುಡಿಕಟ್ಟೆಯಲ್ಲಿ ನಾಲ್ಕಾಣೆಗೆ ದುಡಿಯುವ ಕ್ಷೌರಿಕ ‘ಗಂಗಣ್ಣ’(ಬಿ.ಸುರೇಶ). ಈತ ತನ್ನ ಮಗ ‘ಅಶೋಕ’(ಸತೀಶ್‌ ನೀನಾಸಂ) ತನ್ನ ವೃತ್ತಿಗೆ ಬಾರದೆ ಸರ್ಕಾರಿ ನೌಕರನಾಗಬೇಕು ಎಂದು ಹಂಬಲಿಸಿ ನಗರಕ್ಕೆ ಓದಲು ಕಳುಹಿಸಿದ್ದಾನೆ. ಪದವಿ ಪಡೆದು ಊರಿಗೆ ಮರಳುವ ‘ಅಶೋಕ’ನಿಗೆ ‘ಕುಟ್ಟಿಬಾಬ್ಜಿ’ಯ ದಬ್ಬಾಳಿಕೆ, ತನ್ನ ಸಮುದಾಯ ಎದುರಿಸುತ್ತಿರುವ ಅಸ್ಪೃಶ್ಯತೆ, ದೌರ್ಜನ್ಯದ ಅರಿವಾಗುತ್ತದೆ. ‘ಅಂಬಿಕಾ’ಳ(ಸಪ್ತಮಿ ಗೌಡ) ಪ್ರೀತಿ ಜೊತೆಗೆ ಕ್ರಾಂತಿಯ ಹಾದಿಯಲ್ಲಿ ‘ಅಶೋಕ’ ಹೆಜ್ಜೆ ಇಟ್ಟಾಗ ಕಥೆ ತೆರೆದುಕೊಳ್ಳುತ್ತದೆ.

ಹರಕೆಯ ಕೂದಲಿನ ವ್ಯಾಪಾರವೆಂಬ ಭಿನ್ನ ವಿಷಯಡಿ ಮೊದಲಾರ್ಧ ತೆರೆದುಕೊಳ್ಳುತ್ತದೆ. ಇಲ್ಲಿ ಹಳ್ಳಿಯಲ್ಲಿ ಮಗನ ಬರುವಿಕೆಗಾಗಿ ಅಪ್ಪನ ಕಾತರ, ಊರ ಹಬ್ಬ, ಅನ್ಯೋನ್ಯತೆ, ಖಳನಾಯಕನ ದಬ್ಬಾಳಿಕೆ ಮುಂತಾದ ವಿಷಯಗಳನ್ನು ಚೆನ್ನಾಗಿ ಬರೆದು, ಚಿತ್ರಿಸಲಾಗಿದೆ. ಆದರೆ ದ್ವಿತೀಯಾರ್ಧಕ್ಕೆ ಹೆಜ್ಜೆ ಇಡುತ್ತಿದ್ದಂತೆಯೇ ಚಿತ್ರಕಥೆಯ ವಿನ್ಯಾಸ, ಬರವಣಿಗೆ ಸೊರಗಿರುವುದು ಸ್ಪಷ್ಟವಾಗಿ ತೆರೆಯ ಮೇಲೆ ಗೋಚರಿಸುತ್ತದೆ. ಗಳಿಸಿದ ಶಿಕ್ಷಣವನ್ನೇ ಬಳಸಿಕೊಂಡು ಸಂವಿಧಾನದ ಪ್ರಕಾರವೇ ಬದಲಾವಣೆ ತರಲು ಸಾಧ್ಯ ಎನ್ನುವ ಅಂಶವನ್ನು ಕಥೆಯಲ್ಲಿ ಅಳವಡಿಸಿಕೊಳ್ಳಬಹುದಿತ್ತು. ಆದರೆ ‘ಎಲ್ಲಾ ಯುದ್ಧಗಳು ಯುದ್ಧಭೂಮಿಯಲ್ಲಿ ಮಾತ್ರ ನಡೆಯುವುದಿಲ್ಲ’ ಎಂಬ ಅಡಿಬರಹವನ್ನಿಟ್ಟುಕೊಂಡ ಈ ಸಿನಿಮಾ ಅದಕ್ಕೆ ತದ್ವಿರುದ್ಧವಾಗಿ ಸಾಗುತ್ತದೆ. ‘ಕೋಪದ ಕೈಗೆ ಬುದ್ಧಿ ಕೊಡಬೇಡ’ ಎಂಬ ದನಿ ಹಿನ್ನೆಲೆಯಲ್ಲಿ ಬರುತ್ತಿದ್ದರೆ ನಾಯಕ ಆವೇಶದಿಂದ ಪ್ರತೀಕಾರಕ್ಕೆ ಸಜ್ಜಾಗುತ್ತಾನೆ! ‘ಸಂವಿಧಾನ’ವನ್ನು ಉಲ್ಲೇಖಿಸುವ ಸಿನಿಮಾ ಕಥೆಯಲ್ಲಿ ಕಾನೂನು ಕೈಗೆತ್ತಿಕೊಳ್ಳುವಂಥ ಹಲವು ದೃಶ್ಯಗಳನ್ನು ಅಡಕ ಮಾಡಿದೆ!

ADVERTISEMENT

ಸಿದ್ಧಸೂತ್ರದಲ್ಲೇ ಸಾಗುವ ಕಥೆ ಸಿನಿಮಾದಲ್ಲಿದೆ. ತನ್ನ ತಂದೆ, ಊರು ಎದುರಿಸುತ್ತಿರುವ ಸಮಸ್ಯೆಯ ಬಗ್ಗೆ ಪದವಿ ಪಡೆದು ಮರಳುವವರೆಗೂ ನಾಯಕನಿಗೆ ಮಾಹಿತಿಯೇ ಇರಲಿಲ್ಲವೇ? ಪೊಲೀಸ್‌ ವ್ಯವಸ್ಥೆ ಎಲ್ಲಿತ್ತು? ಡ್ರ್ಯಾಗನ್‌ ಮಂಜು ಪಾತ್ರವೇನು? ಎನ್ನುವ ಪ್ರಶ್ನೆಗಳಿಗೆ ಉತ್ತರವಿಲ್ಲ. ನಟನೆಯಲ್ಲಿ ಬಿ.ಸುರೇಶ ‘ಅಪ್ಪ’ನ ಪಾತ್ರದಲ್ಲಿ ಕಾಡುತ್ತಾರೆ. ಸತೀಶ್‌, ಸಪ್ತಮಿ ಗೌಡ, ಸಂಪತ್‌ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ‘ಏಳೋ ಮಾದೇವ’ ಹಾಡು ಚೆನ್ನಾಗಿದೆ. ಸಾಹಸ ದೃಶ್ಯಗಳ ಸಂಯೋಜನೆ ಕೃತಕವಾಗಿದೆ. ಮೊದಲಾರ್ಧದಲ್ಲಿ ಬರುವ ‘ಮುಂಜಾನೆ..’ ಹಾಡು ತೆರೆ ಅವಧಿ ಹೆಚ್ಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.