ADVERTISEMENT

‘ಭಾರ್ಗವಿ LLB’ಯಲ್ಲಿ ಮಹಾ ತಿರುವು: ಚಿತೆಯ ಮುಂದೆ ಪ್ರತಿಜ್ಞೆ ಮಾಡಿದ ವಕೀಲಿನ ಮಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಫೆಬ್ರುವರಿ 2026, 11:48 IST
Last Updated 13 ಫೆಬ್ರುವರಿ 2026, 11:48 IST
<div class="paragraphs"><p>ಭಾರ್ಗವಿ LLB ನಟಿ</p></div>

ಭಾರ್ಗವಿ LLB ನಟಿ

   

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಯಶಸ್ವಿಯಾಗಿ ಪ್ರಸಾರವಾಗುತ್ತಿರುವ ‘ಭಾರ್ಗವಿ LLB’ ಧಾರಾವಾಹಿ ಈಗ ರೋಚಕ ಘಟ್ಟಕ್ಕೆ ಬಂದು ತಲುಪಿದೆ. ವಿಶಿಷ್ಟ ಕಥಾಹಂದರದ ಮೂಲಕ ವೀಕ್ಷಕರಿಂದ ಭರ್ಜರಿ ಬಹುಪರಾಕ್ ಪಡೆಯುತ್ತಿರುವ ಈ ಧಾರಾವಾಹಿ, ಈಗ ಕಥೆಯ ದಿಕ್ಕನ್ನೇ ಬದಲಿಸುವ ತಿರುವಿನಲ್ಲಿದೆ. ವಕೀಲೆಯಾಗಿ ಅನ್ಯಾಯದ ವಿರುದ್ಧ ಸಿಡಿದೇಳುತ್ತಿದ್ದ ಭಾರ್ಗವಿಯ ಬದುಕಿನಲ್ಲಿ ವಿಧಿಯಾಟ ಭೀಕರ ಸಂಚಲನ ಮೂಡಿಸಿದೆ. ಈ ಮೂಲಕ ವೀಕ್ಷಕ ವಲಯದಲ್ಲಿಯೂ ಹತ್ತಾರು ಪ್ರಶ್ನೆಗಳನ್ನು ಹುಟ್ಟುಹಾಕುವಂತೆ ಮಾಡಿದೆ.

ಪ್ರಭಾವಿ ವಕೀಲ ಜೆ.ಪಿ. ಪಾಟೀಲ್‌ನಿಂದ ವಕೀಲಿಕೆ ತ್ಯಜಿಸಿದ್ದ ತನ್ನ ತಂದೆ ರವೀಂದ್ರ ಭಟ್ಕಳ್‌ನನ್ನು ಮತ್ತೆ ಅದೇ ಕೋರ್ಟ್‌ಗೆ ಕರೆತರುವ ದಿಟ್ಟ ಗುರಿ ಹೊಂದಿದ್ದಳು ಭಾರ್ಗವಿ. ಅಂದುಕೊಂಡಂತೆ ಆ ಕನಸನ್ನೂ ಭಾರ್ಗವಿ ಸಾಕಾರ ಮಾಡಿಕೊಂಡಿದ್ದಳು. ಆದರೆ, ಇದೀಗ ಆ ದೊಡ್ಡ ಗೆಲುವನ್ನು ಸಂಭ್ರಮಿಸೋಕೆ ಅವಳ ಜೊತೆಗೆ ಅಪ್ಪನೇ ಇಲ್ಲ! ಇದು ಅವಳ ಸಾಧನೆಗೆ ಸಂದ ಸೋಲಾ ಅಥವಾ ವಿಧಿಯಾಟವಾ?

ADVERTISEMENT

ಭಾರ್ಗವಿ LL.B

ಇದುವರೆಗೆ ಕಥೆಯಲ್ಲಿ ಧೈರ್ಯದ ಸಂಕೇತವಾಗಿದ್ದ ಭಾರ್ಗವಿಗೆ ಈಗ ಆಕಾಶವೇ ತಲೆ ಮೇಲೆ ಬಿದ್ದಂತಾಗಿದೆ. ಭೀಕರ ರಸ್ತೆ ಅಪಘಾತದಲ್ಲಿ ತಂದೆ ರವೀಂದ್ರ ಭಟ್ಕಳ್ ಅವರ ಅಕಾಲಿಕ ಸಾವು ಇಡೀ ಕುಟುಂಬವನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ಈ ಸಾವು ಕೇವಲ ಅಪಘಾತವೋ ಅಥವಾ ಭಾರ್ಗವಿಯ ವೃತ್ತಿ ವೈರಿಗಳು ಮಾಡಿದ ಸುಪ್ತ ಸಂಚೋ ಎಂಬ ಸಂಶಯ ಈಗ ವೀಕ್ಷಕರಲ್ಲಿ ಮನೆಮಾಡಿದೆ.

ತಂದೆಯ ಸಾವಿನಿಂದ ಕಂಗಾಲಾಗಿರುವ ತಾಯಿ, ಅಪ್ಪನ ಸಾವಿಗೆ ಕಾರಣವಾದ ಈ ಲಾಯರ್‌ ಕೆಲಸ ಬಿಡುವಂತೆ ಭಾರ್ಗವಿಗೆ ತಾಕೀತು ಮಾಡಿದ್ದಾರೆ. ತಾಯಿಯ ನೋವಿಗೆ ಸ್ಪಂದಿಸಿದ ಭಾರ್ಗವಿ, ಅಪ್ಪನ ಚಿತೆಯ ಮುಂದೆಯೇ ಕಠಿಣ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾಳೆ. ಅಮ್ಮನೇ ಹೇಳುವವರೆಗೂ ವಕೀಲಿಕೆಯ ಕೋಟ್‌ ಧರಿಸುವುದಿಲ್ಲ ಎಂದು ಶಪಥ ಮಾಡಿದ್ದಾಳೆ. ಈ ಮೂಲಕ ಭಾರ್ಗವಿ ತನ್ನ ವೃತ್ತಿಜೀವನಕ್ಕೆ ಅಂತ್ಯ ಹಾಡಲು ಮುಂದಾಗಿದ್ದಾಳೆ.

ಲಾಯರ್‌ ಕೋಟ್‌ ಕಳಚಿಟ್ಟು ಭಾರ್ಗವಿ ಮುಂದೆ ಮಾಡೋದಾದ್ರೂ ಏನು? ವಕೀಲೆ ಪಟ್ಟ ಕಳಚಿಟ್ಟ ಭಾರ್ಗವಿ ಈಗ ಸಾಮಾನ್ಯ ಯುವತಿಯಾಗಿ ಹೇಗೆ ಬದುಕುತ್ತಾಳೆ? ರವೀಂದ್ರ ಭಟ್ಕಳರ ಸಾವು ಪೂರ್ವನಿಯೋಜಿತ ಕೊಲೆಯಾಗಿದ್ದರೆ, ಅದರ ಹಿಂದಿರುವ ಅಸಲಿ ಮುಖವಾಡಗಳು ಯಾರು? ಕೋರ್ಟ್ ಮೆಟ್ಟಿಲೇರದೇ ಭಾರ್ಗವಿ ತನ್ನ ತಂದೆಯ ಸಾವಿಗೆ ನ್ಯಾಯ ಒದಗಿಸಲು ಸಾಧ್ಯವೇ? ಈ ಮಹಾ ತಿರುವುಗಳನ್ನು ನೋಡಿದರೆ, ಕಥೆ ಇಲ್ಲಿಗೆ ಮುಗಿಯಿತೇ ಅಥವಾ ಇದು ಹೊಸ ಅಧ್ಯಾಯದ ಆರಂಭವೇ ಎನ್ನುವ ಕುತೂಹಲ ವೀಕ್ಷಕರಲ್ಲಿ ಮೂಡಿದೆ.

ಈ ಎಲ್ಲಾ ಪ್ರಶ್ನೆಗಳಿಗೆ ಮುಂದಿನ ಸಂಚಿಕೆಗಳಲ್ಲಿ ಎಳೆ ಎಳೆಯಾಗಿ ಉತ್ತರ ಸಿಗಲಿದೆ. ಭಾರ್ಗವಿಯ ಈ ಹೊಸ ಅವತಾರ ಮತ್ತು ಕಥೆಯ ಹೊರಳುವಿಕೆ ವೀಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಸಾಮಾಜಿಕ ಕಳಕಳಿ ಮತ್ತು ಕೌಟುಂಬಿಕ ಭಾವನಾತ್ಮಕ ಮೂಲಕ ವೀಕ್ಷಕರ ಮನಗೆದ್ದಿರುವ 'ಭಾರ್ಗವಿ LLB', ಸೋಮವಾರದಿಂದ ಶುಕ್ರವಾರದವರೆಗೆ ಬದಲಾದ ಸಮಯದಲ್ಲಿ ರಾತ್ರಿ 9:30ಕ್ಕೆ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.