ಬೆಂಗಳೂರು: ಅನಾರೋಗ್ಯದ ಕಾರಣದಿಂದಾಗಿ, ಇದೇ ಮೊದಲ ಬಾರಿಗೆ ಬಿಗ್ಬಾಸ್ ರಿಯಾಲಿಟಿ ಶೋನ ವಾರಾಂತ್ಯದ ಸಂಚಿಕೆಗಳಲ್ಲಿ ನಟ ಸುದೀಪ್ ಭಾಗವಹಿಸುತ್ತಿಲ್ಲ. ಕಳೆದ ಎಂಟು ಆವೃತ್ತಿಗಳಲ್ಲಿ ಹೀಗಾಗುತ್ತಿರುವುದು ಇದೇ ಮೊದಲಾಗಿದೆ. ಹೀಗಾಗಿ ಸುದೀಪ್ ಅನುಪಸ್ಥಿತಿಯಲ್ಲಿ ಈ ವಾರದ ಎಲಿಮಿನೇಶನ್ ಹೇಗೆ ನಡೆಯಲಿದೆ ಎಂಬ ಕುತೂಹಲ ಎಲ್ಲರಲ್ಲಿ ಮೂಡಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಲರ್ಸ್ ಕನ್ನಡ ಕ್ಲಸ್ಟರ್ ಹೆಡ್ ಹಾಗೂ ಬಿಗ್ ಬಾಸ್ ಶೋನ ನಿರ್ದೇಶಕ ಪರಮೇಶ್ವರ
ಗುಂಡ್ಕಲ್, ‘ಕಿಚ್ಚ ಸುದೀಪ್ ಅವರು ಇಲ್ಲದೆಯೇ ವಾರಾಂತ್ಯದ ಎಪಿಸೋಡ್ಗಳನ್ನು ಚಿತ್ರೀಕರಿಸುವುದು ಸವಾಲು. ಈ ವಾರ ಆದರೆ ಎರಡೂ ಸಂಚಿಕೆಗಳು ಎಂದಿನಂತೆ ರಾತ್ರಿ ಒಂಬತ್ತು ಗಂಟೆಗೆ ಪ್ರಸಾರವಾಗಲಿವೆ. ಅತಿ ಕಡಿಮೆ ವೋಟ್ಗಳಿಸಿದ ಒಬ್ಬ ಸ್ಪರ್ಧಿ ಮನೆಯಿಂದ ಹೊರಬೀಳುವುದು ಖಚಿತ. ಈ ವಾರದ ಎಲಿಮಿನೇಷನ್ ಪ್ರಕ್ರಿಯೆಯು ಕುತೂಹಲಕಾರಿಯಾಗಿರಲಿದೆ ಹಾಗೂ ಹಲವು ತಿರುವುಗಳನ್ನು ಹೊಂದಿರಲಿದೆ’ ಎಂದಿದ್ದಾರೆ.
‘ಬಿಡುವಿರದ ಚಿತ್ರೀಕರಣವಿದ್ದಾಗಲೂ ಸುದೀಪ್ ಈ ಸಂಚಿಕೆಗಳನ್ನು ಒಮ್ಮೆಯೂ ತಪ್ಪಿಸಿಕೊಂಡ ಉದಾಹರಣೆಗಳಿರಲಿಲ್ಲ.
ಆದರೆ ಅನಿವಾರ್ಯವಾಗಿ ಎದುರಾಗಿರುವ ಈ ಸವಾಲಿಗೆ ಕಲರ್ಸ್ ಕನ್ನಡದ ಬಿಗ್ ಬಾಸ್ ತಂಡ ಸಜ್ಜಾಗುತ್ತಿದೆ’ ಎಂದು ಗುಂಡ್ಕಲ್ ಹೇಳಿದ್ದಾರೆ. ಆದರೆ ಹೆಚ್ಚಿನ ಗುಟ್ಟನ್ನು ಅವರು ಬಿಟ್ಟುಕೊಟ್ಟಿಲ್ಲ, ‘ನೀವು ಸಂಚಿಕೆಗಳನ್ನು ನೋಡಿಯೇ ತಿಳಿದುಕೊಳ್ಳಬೇಕು’ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.