ಹನುಮಂತ
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 11ರ ವಿಜೇತ ಅಭ್ಯರ್ಥಿ ಹಾವೇರಿ ಜಿಲ್ಲೆಯ ಜಾನಪದ ಕಲಾವಿದ, ಕುರಿಗಾಹಿ ಹನುಮಂತ ಅವರಿಗೆ ಕಲರ್ಸ್ ಕನ್ನಡ ವಾಹಿನಿಯ ಪ್ರತಿಸ್ಪರ್ಧಿ ಜೀ ಕನ್ನಡ ವಾಹಿನಿಯು ಶುಭಾಶಯ ಕೋರಿದೆ.
ಹನುಮಂತ ಅವರು ಜೀ ಕನ್ನಡ ವಾಹಿನಿಯ ಜನಪ್ರಿಯ ಸರಿಗಮಪ ಹಾಗೂ ಡಿಕೆಡಿ ರಿಯಾಲಿಟಿ ಶೋಗಳ ಮೂಲಕ ಬೆಳಕಿಗೆ ಬಂದಿದ್ದರು.
ಹೀಗಾಗಿ ಜೀ ವಾಹಿನಿಯು ಸಾಮಾಜಿಕ ತಾಣಗಳಲ್ಲಿ ಪ್ರತಿಸ್ಪರ್ಧಿ ವಾಹಿನಿಯ ರಿಯಾಲಿಟಿ ಶೋನಲ್ಲಿ ಜಯಗಳಿಸಿದ ಹನುಮಂತಗೆ ಶುಭಾಶಯ ಕೋರಿ ನಿಮ್ಮಂಥ ನೆಲಮೂಲದ ಪ್ರತಿಭೆಯನ್ನು ಹುಡುಕಿ, ಬೆಳಕಿಗೆ ತಂದ ಜೀ಼ ಕನ್ನಡ ನಿಮ್ಮ ಗೆಲುವನ್ನು ಸಂಭ್ರಮಿಸುತ್ತದೆ. ಹನುಮಂತ ಅವರೇ ನಿಮ್ಮ ಗೆಲುವಿಗೆ ಹಾರ್ದಿಕ ಅಭಿನಂದನೆಗಳು!
ಜೀ ವಾಹಿನಿಯ ಈ ಪೋಸ್ಟ್ ಸಾಕಷ್ಟು ಚರ್ಚೆಗೂ ಒಳಗಾಗಿದೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಬಿಗ್ ಬಾಸ್’ 11ನೇ ಆವೃತ್ತಿಯ ರಿಯಾಲಿಟಿ ಶೋನಲ್ಲಿ ಜಿಲ್ಲೆಯ ಸವಣೂರು ತಾಲ್ಲೂಕಿನ ಚಿಲ್ಲೂರು ಬಡ್ನಿ ಗ್ರಾಮದ ನಿವಾಸಿ ಹನುಮಂತ ಲಮಾಣಿ ಅವರು ವಿಜಯಶಾಲಿಯಾದರು
ವೀಕ್ಷಕರಿಂದ 5.23 ಕೋಟಿ ಮತಗಳನ್ನು ಪಡೆದಿದ್ದ ಹನುಮಂತ, ಬಿಗ್ ಬಾಸ್ ರಿಯಾಲಿಟಿ ಶೋ ಇತಿಹಾಸದಲ್ಲಿಯೇ ಅತ್ಯಧಿಕ ಮತ ಪಡೆದ ಸ್ಪರ್ಧಿ ಎಂಬ ದಾಖಲೆ ಬರೆದಿದ್ದಾರೆ. ಅವರು ಸ್ಪರ್ಧೆಗೆ ವೈಲ್ಡ್ಕಾರ್ಡ್ ಮೂಲಕ ಪ್ರವೇಶ ಪಡೆದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.