ಬೆಂಗಳೂರು: ಬಿಗ್ ಬಾಸ್ ಓಟಿಟಿಯಲ್ಲಿ ಗಮನ ಸೆಳೆದಿದ್ದ ಆರ್ಯವರ್ಧನ್ ಗುರೂಜಿ ಟಿ.ವಿ ಸೀಸನ್–9ರಲ್ಲೂ ಅದೇ ಓಟ ಮುಂದುವರಿಸಿದ್ದಾರೆ.
ಸಹ ಸ್ಪರ್ಧಿಗಳು ನಾಚುವಂತೆ ಟಾಸ್ಕ್ಗಳಲ್ಲಿ ಗಮನ ಸೆಳೆಯುತ್ತಿರುವ ಅವರು, ಈ ವಾರ ಕ್ಯಾಪ್ಟನ್ಸಿ ಟಾಸ್ಕ್ ಗೆದ್ದು ಮನೆಯ ನಾಯಕರಾಗಿ ಹೊರಹೊಮ್ಮಿದ್ದಾರೆ. ಈ ಮೂಲಕ ತಮ್ಮ ಬಹುದಿನಗಳ ಆಸೆ ಈಡೇರಿಸಿಕೊಳ್ಳುವ ಜೊತೆಗೆ ಮುಂದಿನ ವಾರಕ್ಕೆ ಇಮ್ಯುನಿಟಿ ಸಂಪಾದಿಸಿದ್ದಾರೆ.
ಹಾದಿ ತಪ್ಪಿದ್ದ ಪ್ರಾಂಕ್:
ಹೌದು, ಮನೆಯ ಸದಸ್ಯರಿಗೆ ಕ್ಯಾಪ್ಟನ್ ಆಗಲು ಅರ್ಹತೆ ಗಿಟ್ಟಿಸಲು ಬಿಗ್ ಬಾಸ್ 4 ಟಾಸ್ಕ್ ಕೊಟ್ಟಿದ್ದರು. ಆ 4 ಟಾಸ್ಕ್ಗಳಲ್ಲಿ ಅನುಪಮಾ ಗೌಡ ಬಣ ಗೆದ್ದು ದೀಪಿಕಾ ದಾಸ್ ತಂಡಕ್ಕೆ ಸೋಲುಣಿಸಿತ್ತು. ಈ ಸಂದರ್ಭ ಕೊನೆಯ ಕ್ಯಾಪ್ಟನ್ಸಿ ಟಾಸ್ಕ್ಗೆ ಬಿಗ್ ಬಾಸ್ ನಮ್ಮ ತಂಡದ 8 ಜನರಲ್ಲಿ ನಾಲ್ವರನ್ನು ಆಯ್ಕೆ ಮಾಡಲು ಸೂಚಿಸಿದ್ದಾರೆ ಎಂದು ಅನುಪಮಾ ಬಣ, ಆರ್ಯವರ್ಧನ್ ಅವರಿಗೆ ಪ್ರಾಂಕ್ ಮಾಡಿತ್ತು. ಇದನ್ನೇ ಅಸ್ತ್ರವಾಗಿ ಬಳಸಿಕೊಂಡ ಬಿಗ್ ಬಾಸ್ ನೀವು ಆಯ್ಕೆ ಮಾಡಿದಂತೆ ಈ ನಾಲ್ವರೇ ಟಾಸ್ಕ್ ಆಡಲಿ ಎಂದು ಘೋಷಿಸಿಬಿಟ್ಟರು. ಇದರಿಂದ ವ್ಯಗ್ರರಾದ ಆರ್ಯವರ್ಧನ್ ಮನೆಯ ಸದಸ್ಯರ ಜೊತೆ ತೀವ್ರ ಜಗಳವಾಡಿದರು. ಕೊನೆಗೆ ಅನುಪಮಾ ಬಣದ ಎಲ್ಲ ಸದಸ್ಯರು ಕ್ಯಾಮೆರಾ ಮುಂದೆ ಬಂದು ಕ್ಷಮೆ ಕೇಳಿದರು.
ಆ ಬಳಿಕ, ಪೋಸ್ಟ್ ಕಾರ್ಡ್ ಕಳುಹಿಸಿದ ಬಿಗ್ ಬಾಸ್, ನಿಮ್ಮ ಪ್ರಾಂಕ್ಗೆ ನಾನೂ ಪ್ರಾಂಕ್ ಮಾಡಿದ್ದೆ. ಈಗ ಹೊಸದಾಗಿ 4 ಸದಸ್ಯರನ್ನು ಕ್ಯಾಪ್ಟನ್ಸಿ ಟಾಸ್ಕ್ಗೆ ಆಯ್ಕೆ ಮಾಡುವಂತೆ ಸೂಚಿಸಿದರು.
ನಿಟ್ಟುಸಿರು ಬಿಟ್ಟ ಸದಸ್ಯರು ಆರ್ಯವರ್ಧನ್, ಅಮೂಲ್ಯ, ದಿವ್ಯಾ ಉರುಡುಗ ಮತ್ತು ದರ್ಶ್ ಚಂದ್ರಪ್ಪ ಅವರನ್ನು ಆಯ್ಕೆ ಮಾಡಿದರು. ಚೆಂಡುಗಳನ್ನು ಬಳಸಿ ಅಂಕಿಗಳನ್ನು ಸೃಷ್ಟಿಸುವ ಆಟದಲ್ಲಿ ಗೆದ್ದು ಆರ್ಯವರ್ಧನ್ ನಾಯಕರಾದರು.
ತುಟಿ ನೋಡಿ ಭವಿಷ್ಯ:
ಈ ಮಧ್ಯೆ, ಮನೆಯಲ್ಲಿ ಒಂದು ಹಾಸ್ಯದ ವಾತಾವರಣ ನಿರ್ಮಾಣವಾಗಿತ್ತು. ಅಮೂಲ್ಯ ಅವರ ತುಟಿ ನೋಡಿ ಆರ್ಯವರ್ಧನ್ ಭವಿಷ್ಯ ನುಡಿದರು. ನಿಮ್ಮ ತುಟಿ ಚೂಪಾಗಿದೆ.ನಿಮ್ಮ ಹಿಂದೆ ಹುಡುಗರು ಬೀಳುತ್ತಾರೆ ಎಂದು ಹೇಳಿದರು. ಇದರಿಂದ ಬಿದ್ದು ಬಿದ್ದು ನಕ್ಕ ಅಮೂಲ್ಯ .. ಹೀಗೂ ಭವಿಷ್ಯ ಹೇಳ್ತಾರಾ ಎಂದು ತಮಾಷೆ ಮಾಡಿದರು. ಈ ಸಂದರ್ಭ ಮಧ್ಯಪ್ರವೇಶಿಸಿದ ರಾಕೇಶ್ ಅಡಿಗ, ನನ್ನ ತುಟಿ ನೋಡಿ ಭವಿಷ್ಯ ಹೇಳಿ ಎಂದು ದುಂಬಾಲು ಬಿದ್ದರು. ನಿನ್ನ ಹಿಂದೆ ಯಾರು ಬರುತ್ತಾರೆ. ನೀನೆ ಅವರ ಹಿಂದೆ ಹೋಗ್ತೀಯ ಎಂದು ಎಂದಿನಂತೆ ತಮ್ಮದೇ ಶೈಲಿಯಲ್ಲಿ ಆರ್ಯವರ್ಧನ್ ಉತ್ತರ ಕೊಟ್ಟರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.