
ಅಶ್ವಿನಿ ಗೌಡ
ಚಿತ್ರ: ಇನ್ಸ್ಟಾಗ್ರಾಮ್
ಕನ್ನಡದ ಬಿಗ್ಬಾಸ್ ಮನೆಗೆ ಅತಿಥಿಗಳಾಗಿ ಉಗ್ರಂ ಮಂಜು, ಚೈತ್ರಾ ಕುಂದಾಪುರ, ರಜತ್ ಕಿಶನ್, ಮೋಕ್ಷಿತಾ ಪೈ ಹಾಗೂ ತ್ರಿವಿಕ್ರಮ್ ಬಂದಿದ್ದಾರೆ. ಅತಿಥಿಗಳು ಏನೇ ಕೇಳಿದರೂ ಮನೆಮಂದಿ ಪ್ರಶ್ನಿಸದೇ ಉತ್ತರಿಸಬೇಕು, ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಬಿಗ್ಬಾಸ್ ಹೇಳಿದ್ದರು.
ಆದರೆ, ಈಗ ಅತಿಥಿಗಳ ಮುಂದೆ ‘ನನಗೆ ಬುದ್ದಿ ಇಲ್ಲ’ ಎಂಬ ಪದವನ್ನು ಹೇಳೋದಕ್ಕೆ ಹಿಂದೇಟು ಹಾಕಿದ್ದಾರೆ ಅಶ್ವಿನಿ ಗೌಡ. ಇದರಿಂದ ಇಡೀ ಮನೆಯವರಿಗೆ ಶಿಕ್ಷೆ ಆಗಲಿದೆ ಎಂದು ಎಚ್ಚರಿಕೆ ಕೊಟ್ಟರು ಕೂಡ ಅಶ್ವಿನಿ ಗೌಡ ಅವರು ಹಠ ಹಿಡಿದಿದ್ದಾರೆ.
ಕಲರ್ಸ್ ಕನ್ನಡ ಸಾಮಾಜಿಕ ಮಾಧ್ಯಮದಲ್ಲಿ ಪ್ರೊಮೋ ಒಂದನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಅತಿಥಿಯಾಗಿ ಬಂದಿದ್ದ ಚೈತ್ರಾ ಕುಂದಾಪುರ ಅವರು ಬಿಗ್ಬಾಸ್ ಮನೆಯಲ್ಲಿರುವ ಶಿಲಾಬಾಲಿಕೆಯ ಹೆಸರೇನು ಅಂತ ಕೇಳಿದ್ದಾರೆ. ಆಗ ಮನೆಯವರು ಸರಿಯಾಗಿ ಉತ್ತರಿಸಿಲ್ಲ. ಹೀಗಾಗಿ ಚೈತ್ರಾ ಕುಂದಾಪುರ ಅವರು ‘ನನ್ನ ಪ್ರಶ್ನೆಗೆ ಉತ್ತರ ಬಂದಿಲ್ಲ ಅಂದರೆ ನಾನು ತಿಂಡಿ ತಿನ್ನೋದಿಲ್ಲ’ ಅಂತ ಪಟ್ಟು ಹಿಡಿದಿದ್ದಾರೆ. ಅಲ್ಲದೇ ನಿಮ್ಮ ತಲೆಯಲ್ಲಿ ಬುದ್ದಿ ಇಲ್ಲ ಅಂತ ಒಪ್ಪಿಕೊಳ್ಳಿ ಎಂದಿದ್ದಾರೆ.
ಆಗ ಅಶ್ವಿನಿ ಗೌಡ ಅವರನ್ನು ಹೊರತುಪಡಿಸಿ ಎಲ್ಲರೂ ‘ನಮಗೆ ಬುದ್ದಿ ಇಲ್ಲ’ ಎಂದು ಒಪ್ಪಿಕೊಂಡಿದ್ದಾರೆ. ಆದರೆ ಅಶ್ವಿನಿ ಗೌಡ ಅವರು, ‘ನಿಮಗೆಲ್ಲ ಬುದ್ದಿ ಇಲ್ಲ ಅಂತ ನೀವು ಒಪ್ಪಿಕೊಳ್ಳಿ ನಾನೇಕೆ ಒಪ್ಪಿಕೊಳ್ಳಲಿ’ ಎಂದು ಗರಂ ಆಗಿದ್ದಾರೆ. ಇದಾದ ಬಳಿಕ ಏನಾಯಿತು ಎಂದು ಇಂದು ರಾತ್ರಿ 9.30ಕ್ಕೆ ಪ್ರಸಾರವಾಗುವ ಸಂಚಿಕೆಯಲ್ಲಿ ಗೊತ್ತಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.