ರಕ್ಷಿತಾ ಶೆಟ್ಟಿ
ಚಿತ್ರ:ಇನ್ಸ್ಟಾಗ್ರಾಮ್
ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟ ದಿನವೇ ಅಚ್ಚರಿ ಎಂಬಂತೆ ರಕ್ಷಿತಾ ಶೆಟ್ಟಿ ಎಲಿಮಿನೇಟ್ ಆಗಿದ್ದಾರೆ. ಬಿಗ್ಬಾಸ್ ಮನೆಯಿಂದ ಆಚೆ ಹೋಗುವ ಮುನ್ನ ಕೊನೆಯದಾಗಿ ರಕ್ಷಿತಾ ‘ನನಗೆ ಒಂದು ದಿನ ಇಲ್ಲಿಗೆ ಬರೋದಕ್ಕೆ ಅವಕಾಶ ಸಿಕ್ಕಿದೆ. ಎಲ್ಲರೂ ಇಲ್ಲಿಂದ ಹೋಗುತ್ತಾರೆ. ನಾನು ಒಂದು ದಿನ ಮುಂಚಿತವಾಗಿ ಹೋಗುತ್ತಿದ್ದೇನೆ’ ಎಂದರು. ಈ ಎಲಿಮಿನೇಷನ್ ಪ್ರಕ್ರಿಯೆ ಸ್ಪರ್ಧಿಗಳಿಗಷ್ಟೇ ಅಲ್ಲ, ವೀಕ್ಷಕರಿಗೂ ಅಚ್ಚರಿ ಮೂಡಿಸಿದೆ.
ಈ ಬಾರಿ ಬಿಗ್ಬಾಸ್ 12ನೇ ಆವೃತ್ತಿ ಭಾನುವಾರದಿಂದ ಆರಂಭಗೊಂಡಿದ್ದು, ಬಿಗ್ಬಾಸ್ ಅರಮನೆಗೆ ಎಂಟ್ರಿ ಕೊಟ್ಟ ಸ್ಪರ್ಧಿಗಳಿಗೆ ಮೊದಲ ದಿನವೇ ಅಚ್ಚರಿಯಾಗಿದೆ. ಬಿಗ್ಬಾಸ್ ಮನೆಯಲ್ಲಿ ಯಾವಾಗ ಏನು ಬೇಕಾದರೂ ಆಗಬಹುದು ಎಂಬುವುದಕ್ಕೆ ನಿನ್ನೆಯ (ಸೋಮವಾರ) ಸಂಚಿಕೆ ಸಾಕ್ಷಿಯಾಗಿದೆ.
ಹೌದು, ಬಿಗ್ಬಾಸ್ ಸೀಸನ್ 12ರಲ್ಲಿ ಒಂಟಿ ವರ್ಸಸ್ ಜಂಟಿ ಟಾಸ್ಕ್ ಮೂಲಕ ಅಸಲಿ ಆಟ ಶುರುವಾಗಿದೆ. ಯಾರು ಒಂಟಿಯಾಗಬೇಕು, ಯಾರು ಜಂಟಿಯಾಗಬೇಕು ಎಂಬುದನ್ನು ಕಾರ್ಯಕ್ರಮದಲ್ಲಿ ಪ್ರೇಕ್ಷಕರು ತೀರ್ಮಾನ ಮಾಡಿ ಕಳುಹಿಸಿದ್ದಾರೆ. ಅದರಂತೆ ಒಟ್ಟು 19 ಸ್ಪರ್ಧಿಗಳಲ್ಲಿ ಕಾಕ್ರೋಚ್ ಸುಧಿ, ಜಾಹ್ನವಿ, ಧ್ರುವಂತ್, ಮಲ್ಲಮ್ಮ, ಅಶ್ವಿನಿ ಗೌಡ ಹಾಗೂ ಧನುಷ್ ಗೌಡ ಅವರು ಒಂಟಿ ತಂಡದಲ್ಲಿದ್ದಾರೆ.
ಜಂಟಿ ತಂಡದಲ್ಲಿ ಕರಿಬಸಪ್ಪ - ಅಮಿತ್ ಪವಾರ್, ರಾಶಿಕಾ ಶೆಟ್ಟಿ - ಮಂಜು ಭಾಷಿಣಿ, ಸತೀಶ್ - ಚಂದ್ರಪ್ರಭ, ಗಿಲ್ಲಿ ನಟ - ಕಾವ್ಯ, ಅಶ್ವಿನಿ - ಅಭಿಷೇಕ್ ಇದ್ದಾರೆ. ಇನ್ನು ಕೊನೆಯದಾಗಿ ಜಂಟಿ ಸ್ಪಂದನಾ ಸೋಮಣ್ಣ, ರಕ್ಷಿತಾ ಶೆಟ್ಟಿ ಮತ್ತು ಮಾಳು ನಿಪನಾಳ ಅವರು ಜಂಟಿಯಾಗಿ ಉಳಿದುಕೊಂಡರು. ಈ ಮೂವರು ಜಂಟಿಯಾಗದೇ ಇರುವುದರಿಂದ, ಅವರಲ್ಲಿ ಒಬ್ಬರಿಗೆ ಮುಖ್ಯ ದ್ವಾರ ತೋರಿಸಿ ಎಂದು ಬಿಗ್ಬಾಸ್ ಒಂಟಿ ತಂಡದವರಿಗೆ ಆದೇಶ ನೀಡಿದ್ದರು.
ಅದಕ್ಕೂ ಮುನ್ನ ಒಂಟಿ ತಂಡದ ಮುಂದೆ ನಾವೇಕೆ ಈ ಮನೆಯಲ್ಲಿ ಇರಬೇಕು ಎಂದು ಈ ಮೂವರು ಕಾರಣ ನೀಡಿದರು. ಅಂತಿಮವಾಗಿ ಮನೆಯ ಸದಸ್ಯರು ಮಾಳು ನಿಪನಾಳ ಮತ್ತು ಸ್ಪಂದನಾ ಜೋಡಿಯನ್ನು ಉಳಿಸಿಕೊಂಡು, ಮನೆಯಿಂದ ಆಚೆ ಕಳುಹಿಸಲು ರಕ್ಷಿತಾ ಶೆಟ್ಟಿ ಹೆಸರನ್ನು ಆಯ್ಕೆ ಮಾಡಿದರು.
ರಕ್ಷಿತಾ ಶೆಟ್ಟಿ, ಮಾಳು ನಿಪನಾಳ ಮತ್ತು ಸ್ಪಂದನಾ
ಮಂಗಳೂರು ಮೂಲಕ ರಕ್ಷಿತಾ ಶೆಟ್ಟಿ ಬೇಸರದಿಂದಲೇ ಬಿಗ್ಬಾಸ್ ಮನೆಯಿಂದ ಆಚೆ ಹೋಗಿದ್ದಾರೆ. ಇದಕ್ಕೂ ಮುನ್ನ ರಕ್ಷಿತಾಗೆ ನಟಿ ಅಶ್ವಿನಿ ಗೌಡ ಅವರು ಸಮಾಧಾನ ಮಾಡಿದರು. ಆಗ ರಕ್ಷಿತಾ ಶೆಟ್ಟಿ, ‘ನನಗೆ ಒಂದು ದಿನ ಇಲ್ಲಿಗೆ ಬರೋದಕ್ಕೆ ಅವಕಾಶ ಸಿಕ್ಕಿದೆ. ಎಲ್ಲರೂ ಇಲ್ಲಿಂದ ಹೋಗುತ್ತಾರೆ. ಆದರೆ ನಾನು ಇವತ್ತು ಹೋಗುತ್ತಿದ್ದೇನೆ’ ಎಂದು ಹೇಳಿ ಬಿಗ್ಬಾಸ್ ಮುಖ್ಯ ದ್ವಾರದಿಂದ ಆಚೆ ಹೋಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.