
ಸಿಹಿ ಕಹಿ ಚಂದ್ರು
ಕನ್ನಡ ಕಿರುತೆರೆಯ ಪ್ರಮುಖ ಅಡುಗೆ ಶೋಗಳಲ್ಲಿ ಒಂದಾಗಿರುವ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ 'ಬೊಂಬಾಟ್ ಭೋಜನ' 1500ಕ್ಕೂ ಹೆಚ್ಚು ಸಂಚಿಕೆಗಳನ್ನು ದಾಟಿ ಹೊಸ ಮೈಲಿಗಲ್ಲು ಸೃಷ್ಟಿಸಿದೆ. ಈ ಶೋ ಈಗಾಗಲೇ 5 ಸೀಸನ್ಗಳನ್ನು ಯಶಸ್ವಿಯಾಗಿ ಪೂರೈಸಿದ್ದು, ಇದೀಗ ಇನ್ನಷ್ಟು ಹೊಸತನವನ್ನೊಳಗೊಂಡು 6ನೇ ಆವೃತ್ತಿಯೊಂದಿಗೆ ವೀಕ್ಷಕರ ಮುಂದೆ ಬರಲು ಸಜ್ಜಾಗಿದೆ.
ಈ ಬಾರಿ 'ಬೊಂಬಾಟ್ ಭೋಜನ ಸೀಸನ್–6' ರ ಪ್ರಮುಖ ಆಕರ್ಷಣೆ ಎಂದರೆ ‘ಜನರಿಂದ, ಜನರಿಗಾಗಿ, ಜನರಿಗೋಸ್ಕರ’ ಎನ್ನುವ ಪರಿಕಲ್ಪನೆಯೊಂದಿಗೆ ಆರಂಭವಾಗುತ್ತಿದೆ. ಈ ಸೀಸನ್ನ ಪ್ರತಿಯೊಂದು ಸಂಚಿಕೆಯಲ್ಲೂ ಜನರು ಇರುತ್ತಾರೆ. ಒಟ್ಟಿನಲ್ಲಿ ಈ ಸೀಸನ್ ಜನರಿಗೋಸ್ಕರ ಅರ್ಪಣೆ ಮಾಡಲಾಗುತ್ತಿದೆ. ಅಷ್ಟೇ ಅಲ್ಲದೆ ಸಿಗಂದೂರು ಚೌಡೇಶ್ವರಿ ದೇವಿಯ ಆಶೀರ್ವಾದದೊಂದಿಗೆ ಮೊದಲ ಸಂಚಿಕೆ ಅಲ್ಲಿಂದಲೇ ಆರಂಭವಾಗಲಿದೆ. ಜೊತೆಗೆ ಈ ಸೀಸನ್ನಲ್ಲಿ ಏನೆಲ್ಲಾ ಇರಲಿದೆ ಎಂಬುವುದರ ಬಗ್ಗೆ ಕೆಳಗಡೆ ಉಲ್ಲೇಖಿಸಲಾಗಿದೆ.
ಸಿಹಿ ಕಹಿ ಚಂದ್ರು
1. ವಿಶೇಷ ಭೋಜನ : ಸಿಹಿ ಕಹಿ ಚಂದ್ರು ಅವರು ರುಚಿ-ರುಚಿಯಾದ ಅಡುಗೆಯನ್ನು ತಿಳಿಸುತ್ತಾರೆ. ಜೊತೆಗೆ ಪತ್ರ ಹಾಗೂ ಕರೆಯ ಮೂಲಕ ಬಂದಿರುವ ಅಭಿಮಾನಿಗಳ ಅಡುಗೆ ಕೋರಿಕೆಯನ್ನು ಈಡೇರಿಸಲಾಗುತ್ತದೆ.
2. ಆರೋಗ್ಯ ಭೋಜನ : ಡಾ. ಗೌರಿ ಸುಬ್ರಮಣ್ಯರವರು ಜನರಿಗೆ ಉಪಯುಕ್ತವಾದ ಮನೆಮದ್ದುಗಳನ್ನು ತಿಳಿಸಿಕೊಡುತ್ತಾರೆ.
3. ಸ್ಪೆಷಲ್ ಭೋಜನ : ಬೇರೆ ಬೇರೆ ಜಿಲ್ಲೆಗಳಲ್ಲಿರುವ ಲೇಡೀಸ್ ಕ್ಲಬ್ಗಳಿಗೆ ಹೋಗಿ ಅಲ್ಲಿನ ಜನರೊಂದಿಗೆ ಬೆರೆತು, ಅಡುಗೆ ಮಾಂತ್ರಿಕ ಸಿಹಿ ಕಹಿ ಚಂದ್ರು ಅವರು ವಿಭಿನ್ನ ಅಡುಗೆಗಳನ್ನು ತಯಾರಿಸುತ್ತಾರೆ.
4. ಹಿತ ಭೋಜನ : ಜನಸಾಮಾನ್ಯರು / ಸೆಲೆಬ್ರಿಟಿಸ್ ಗಳು ಬಂದು ವಿವಿಧ ರೀತಿಯ ಕೈರುಚಿಯನ್ನು ತಿಳಿಸುವುದು.
5. ಭೂರಿ ಭೋಜನ : ಕರ್ನಾಟಕದಾದ್ಯಂತ ಚಲಿಸಿ, ಹೋಟೆಲ್ಗಳಿಗೆ ಧಾವಿಸಿ ಅಲ್ಲಿನ ಜನಪ್ರಿಯ ತಿನಿಸುಗಳನ್ನು ಸವಿದು ಜನರಿಗೆ ತಿಳಿಸುವುದು. ಜೊತೆಗೆ ಅಲ್ಲಿನ ಜನರ ಅಭಿಪ್ರಾಯವನ್ನು ತೆಗೆದುಕೊಳ್ಳಲಾಗುತ್ತದೆ.
6. ಸಹ ಭೋಜನ : ಒಬ್ಬರ ಮನೆಗೆ ಅಚ್ಚರಿಯ ರೀತಿಯಲ್ಲಿ ಆಗಮಿಸಿ, ಅವರು ತಯಾರಿಸಿರುವ ಅಡುಗೆಯ ರುಚಿಯನ್ನು ಸವಿದು, ಕೈತುತ್ತನ್ನು ನೀಡಿ ಅವರೊಂದಿಗೆ ಮಾತುಕತೆ ನಡೆಸುವುದು. ಜೊತೆಗೆ ಸ್ಥಳದಲ್ಲೇ ಫೋಟೋ ತೆಗೆದು ಪ್ರಮಾಣಪತ್ರ ನೀಡಲಾಗುವುದು.
7. ಗೃಹ ಭೋಜನ : ಸಿಹಿ ಕಹಿ ಚಂದ್ರು ಅವರು ಜಿಲ್ಲೆಯಾದ್ಯಂತ ಸಂಚರಿಸುತ್ತಾ, ವೀಕ್ಷಕರ ಮನೆಗಳಿಗೆ ಹೋಗಿ ತಮ್ಮ ಕೈಯಾರೆ ಮಾಡಿದ ರುಚಿಯಾದ ಅಡುಗೆ ಉಣಬಡಿಸೋದು ಹಾಗೂ ತಾವು ತೆರಳಿದ ಮನೆಯಲ್ಲಿ ದೇವಿ ಸದಾ ನೆಲೆಸಲೆಂದು ಮನೆ ಮಂದಿಗೆ ಶ್ರೀ ಸಿಗಂದೂರು ಚೌಡೇಶ್ವರಿ ದೇವಾಲಯದಿಂದ ದೈವಾನುಗ್ರಹಗೊಂಡ ದೇವಿಯ ವಿಗ್ರಹವನ್ನು ಉಡುಗೊರೆಯಾಗಿ ನೀಡಲಿದ್ದಾರೆ.
8. ಬಾಲ ಭೋಜನ : ಇದು ಪ್ರತೀ ಶುಕ್ರವಾರದಂದು ಮಕ್ಕಳಿಗಾಗಿ ಮಾಡಿರೋ ಹೊಸ ವಿಭಾಗ. ಮಕ್ಕಳ ಜೊತೆ ಪೋಷಕರು ಭಾಗಿಯಾಗಿ ರುಚಿ-ರುಚಿಯಾದ ಅಡುಗೆ ಹೇಳಿ ಕೊಡಲಾಗುತ್ತದೆ.
ಸಾಮಾನ್ಯ ಜನರಿಗೆ ಸೆಲೆಬ್ರಿಟಿ ಅನ್ನೋ ಅನುಭವ ಕೊಡಲು 'ಸಿಹಿ-ಸಹಿ' ಎಂಬ ಬೋರ್ಡ್ ಇರಿಸಲಾಗಿದೆ. ಇದೆಲ್ಲದರ ಜೊತೆಗೆ ಎಂದಿನಂತೆ ಪ್ರತೀ ಶನಿವಾರ ಮಧ್ಯಾಹ್ನ 12 ಗಂಟೆಗೆ ಮಾಂಸ ಪ್ರಿಯರಿಗಾಗಿ ಆದರ್ಶ್ ತಟಪತಿ ಸಾರಥ್ಯದ 'ಬೊಂಬಾಟ್ ಬಾಡೂಟ' ಕಾರ್ಯಕ್ರಮ ಪ್ರಸಾರವಾಗಲಿದೆ. ಈ ಕಾರ್ಯಕ್ರಮ ಸಿಹಿ ಕಹಿ ಚಂದ್ರುರವರ ನೇತೃತ್ವದಲ್ಲಿ ಬರ್ತಿದೆ 'ಬೊಂಬಾಟ್ ಭೋಜನ ಸೀಸನ್ 6' ಇದೇ ಅಕ್ಟೋಬರ್ 27ರಿಂದ ಮಧ್ಯಾಹ್ನ 12 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.