ADVERTISEMENT

ಡ್ರಗ್ಸ್‌ ಪ್ರಕರಣ: ತರುಣ್ ಹೇಳಿಕೆ ಆಧರಿಸಿ ನಿರೂಪಕಿ ಅನುಶ್ರೀ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2020, 6:06 IST
Last Updated 25 ಸೆಪ್ಟೆಂಬರ್ 2020, 6:06 IST
ನಿರೂಪಕಿ ಅನುಶ್ರೀ
ನಿರೂಪಕಿ ಅನುಶ್ರೀ   

ಮಂಗಳೂರು: ಮಾದಕ ದ್ರವ್ಯ ಜಾಲದ ನಂಟಿನ ಕುರಿತು ವಿಚಾರಣೆ ತೀವ್ರಗೊಳಿಸಿರುವ ಸಿಸಿಬಿ ಪೊಲೀಸರು, ಮಾಹಿತಿ ಆಧರಿಸಿ, ಒಬ್ಬೊಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಆರಂಭದಲ್ಲಿ ಕಿಶೋರ್ ಶೆಟ್ಟಿ ಬಂಧಿಸಿದ್ದ ಪೊಲೀಸರಿಗೆ ಆ್ಯಂಕರ್ ಕಂ ನಟಿಯೊಬ್ಬರು ಡ್ರಗ್ಸ್ ಪಾರ್ಟಿಯಲ್ಲಿ ಭಾಗವಹಿಸಿದ್ದ ಮಾಹಿತಿ ದೊರೆತಿತ್ತು. ಆದರೆ, ಅದನ್ನು ಸಾಬೀತುಪಡಿಸಲು ಯಾವುದೇ ಆಧಾರಗಳು ಇರಲಿಲ್ಲ. ಗುರುವಾರ ಕಿಶೋರ್ ಸ್ನೇಹಿತ ತರುಣ್ ರಾಜ್ ನನ್ನು ಬಂಧಿಸಿದ್ದ ಪೊಲೀಸರು ಆತನನ್ನು ವಿಚಾರಣೆಗೆ ಒಳಪಡಿಸಿದ್ದರು.

ತರುಣ್ ಕೂಲಂಕಷವಾಗಿ ಹೇಳಿಕೆ ನೀಡಿದ್ದು, ಆ್ಯಂಕರ್ ಅನುಶ್ರೀ ಕೂಡ ಡ್ರಗ್ಸ್ ಪಾರ್ಟಿಯಲ್ಲಿ ಭಾಗವಹಿಸಿದ್ದರು ಎಂದು ತಿಳಿಸಿದ್ದ. ಅಲ್ಲದೇ ಈ ಹೇಳಿಕೆಯನ್ನು ಪುಷ್ಠೀಕರಿಸುವ ದಾಖಲೆಗಳು ಪೊಲೀಸರಿಗೆ ದೊರೆತಿವೆ. ಹಾಗಾಗಿಯೇ ಅನಿಶ್ರೀಗೆ ನೋಟಿಸ್ ಜಾರಿ ಮಾಡಲಾಗಿತ್ತು.

ADVERTISEMENT

ತರುಣ್ ರಾಜ್, ಅನುಶ್ರೀಗೆ ಡ್ಯಾನ್ಸ್ ಕಲಿಸಿಕೊಟ್ಟಿದ್ದ. ಲಾಕ್ ಡೌನ್ ಗೂ ಮೊದಲು ನಡೆಸಿದ್ದ ಡ್ರಗ್ಸ್ ಪಾರ್ಟಿಯಲ್ಲಿ ಅನುಶ್ರೀ ಭಾಗವಹಿಸಿದ್ದರು ಎನ್ನುವ ಮಾಹಿತಿ ಪೊಲೀಸರಿಗೆ ದೊರೆತಿದೆ.

ಈ ಎಲ್ಲ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಅನುಶ್ರೀ ವಿಚಾರಣೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಇದಕ್ಕಾಗಿ ಡಿಸಿಪಿ ವಿನಯ್ ಗಾಂವ್ಕರ್ ನೇತೃತ್ವದಲ್ಲಿ 14 ಜನರ ತಂಡವನ್ನು ರಚಿಸಲಾಗಿದ್ದು, ಅನುಶ್ರೀಗಾಗಿ ಕಾಯುತ್ತಿದ್ದಾರೆ.

ವಕೀಲರ ಜೊತೆ ಅನುಶ್ರೀ ಚರ್ಚೆ: ಸಿಸಿಬಿ ನೋಟಿಸ್ ದೊರೆಯುತ್ತಿದ್ದಂತೆ ಗುರುವಾರ ವಕೀಲರ ಜೊತೆಗೆ ಸಮಾಲೋಚನೆ ನಡೆಸಿರುವ ಅನುಶ್ರೀ, ಶುಕ್ರವಾರವೇ ಸಿಸಿಬಿ ವಿಚಾರಣೆಗೆ ಹಾಜರಾಗಲು ನಿರ್ಧರಿಸಿದ್ದರು. ಅದರಂತೆ ತಮ್ಮ ಫೇಸ್ ಬುಕ್ ನಲ್ಲಿ ವಿಷಯ ಬಹಿರಂಗ ಪಡಿಸಿದ್ದಾರೆ.

ವಿಚಾರಣೆಯ ವೇಳೆ ಎದುರಾಗ ಬಹುದಾದ ಪ್ರಶ್ನೆಗಳು, ಅವುಗಳಿಗೆ ನೀಡಬೇಕಿರುವ ಉತ್ತರಗಳ ಬಗ್ಗೆಯೂ ಅನುಶ್ರೀ ವಕೀಲರ ‌ಜೊತೆಗೆ ಚರ್ಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.