ಬೆಂಗಳೂರು: ಶಿಶಿರ್ ಮತ್ತು ಐಶ್ವರ್ಯ ಅವರನ್ನು ಉಳಿಸುವುದಕ್ಕೋಸ್ಕರ ಶೋಭಾ ಶೆಟ್ಟಿ ಅವರನ್ನು ಬಿಗ್ ಬಾಸ್ ಹೊರಗೆ ಕಳುಹಿಸಿದೆ ಎಂದು ಪರೋಕ್ಷವಾಗಿ ಆರೋಪ ಮಾಡಿರುವ ತ್ರಿವಿಕ್ರಮ್ ಅವರನ್ನು ನಿನ್ನೆಯ ಎಪಿಸೋಡ್ನಲ್ಲಿ ಕಿಚ್ಚ ಸುದೀಪ್ ತರಾಟೆಗೆ ತೆಗೆದುಕೊಂಡಿದ್ದಾರೆ.
ಶೋಭಾ ಶೆಟ್ಟಿ ಎಲಿಮಿನೇಷನ್ ಬಗ್ಗೆ ಗೌತಮಿ ಅವರ ಬಳಿ ಚರ್ಚೆ ನಡೆಸಿದ್ದ ತ್ರಿವಿಕ್ರಮ್, ತಮ್ಮ ಅನುಮಾನ ಹೊರಹಾಕಿದ್ದರು.
ಶನಿವಾರದ ವಾರದ ಪಂಚಾಯತಿ ಆರಂಭವಾಗುತ್ತಿರುವಂತೆ ತ್ರಿವಿಕ್ರಮ್ ಅವರೊಂದಿಗೆ ಮಾತುಕತೆ ಪ್ರಾರಂಭಿಸಿದ ಸುದೀಪ್, ‘ಶೋಭಾ ಶೆಟ್ಟಿ ಅವರನ್ನು ಹೊರಗೆ ಕಳುಹಿಸಿದ್ದು ಬಿಗ್ ಬಾಸ್ ಅಲ್ಲ ನಾನು... ಎಲಿಮೀನೇಷನ್ ಪ್ರಕ್ರಿಯೆ ನಿಮ್ಮೆದುರಿಗೆ ನಡೆದರೂ ನಿಮಗೆ ಅನುಮಾನ ಬರಲು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದ್ದಾರೆ.
ನಂತರ ಮತ್ತೊಂದು ವಿಡಿಯೊ ತುಣುಕನ್ನು ವೇದಿಕೆಯಲ್ಲಿ ಪ್ರದರ್ಶಿಸಿದ ಸುದೀಪ್ ಅವರು ತ್ರಿವಿಕ್ರಮ್ ಅವರಿಗೆ ಇದರ ಬಗ್ಗೆ ಏನು ಹೇಳುತ್ತೀರಿ ಎಂದು ಕೇಳಿದ್ದಾರೆ. ವಿಡಿಯೊದಲ್ಲಿ ಭವ್ಯಾ ಜೊತೆ ಚರ್ಚೆ ಮಾಡುತ್ತಿದ್ದ ತ್ರಿವಿಕ್ರಮ್, ‘ನಾವು ಸೋತಿಲ್ಲ, ಅವರನ್ನು ಗೆಲ್ಲಿಸಿದ್ರು’ ಎಂದು ಪರೋಕ್ಷವಾಗಿ ಬಿಗ್ ಬಾಸ್ ಬಗ್ಗೆ ಆರೋಪ ಮಾಡಿದ್ದರು.
ಇದರಿಂದ ಇನ್ನಷ್ಟು ಕೆಂಡಾಮಂಡಲವಾದ ಸುದೀಪ್, ಗೆಲ್ಲಿಸಿದ್ರು ಎಂದರೆ ಏನು ಅರ್ಥ? ಎಂದು ಕೇಳಿದ್ದಾರೆ.
ಕೊನೆಯಲ್ಲಿ ಸುದೀಪ್ ಮತ್ತು ಬಿಗ್ ಬಾಸ್ ಬಳಿ ಕ್ಷಮೆಯಾಚಿಸಿದ ತ್ರಿವಿಕ್ರಮ್, ‘ಶೋಭಾ ಶೆಟ್ಟಿ ಅವರ ಎಲಿಮಿನೇಷನ್ ಬಗ್ಗೆ ಅನುಮಾನ ಬಂದಿರುವುದು ನಿಜ. ಅದನ್ನು ಗೌತಮಿ ಅವರ ಬಳಿ ಚರ್ಚಿಸಿದ್ದೇನೆ ಅಷ್ಟೇ. ಅವಮಾನವಾಗುವ ರೀತಿಯಲ್ಲಿ ನಾನು ನಡೆದುಕೊಂಡರೆ ಈಗಲೇ ಹೊರನಡೆಯಲು ಸಿದ್ಧ’ ಎಂದು ಹೇಳಿದ್ದಾರೆ.
‘ಯಾವುದೇ ವಿಷಯದ ಬಗ್ಗೆ ಅನುಮಾನವಿದ್ದರೆ ನೇರವಾಗಿ ಬಿಗ್ಬಾಸ್ ಬಳಿ ಕೇಳಿ ಇಲ್ಲವೇ ವಾರದ ಪಂಚಾಯಿತಿಯಲ್ಲಿ ವಿಷಯವನ್ನು ಪ್ರಸ್ತಾಪಿಸಿ. ನಿಮ್ಮ ಎಲ್ಲ ಪ್ರಶ್ನೆಗಳಿಗೂ ಉತ್ತರ ಕೊಡುವುದು ನನ್ನ ಜವಾಬ್ದಾರಿ’ ಎಂದು ಸುದೀಪ್ ಹೇಳಿದ್ದಾರೆ.
ನಿನ್ನೆ ಎಪಿಸೋಡ್ನಲ್ಲಿ ರಜತ್ ಮತ್ತು ಗೌತಮಿ ಅವರು ಎಲಿಮಿನೇಷನ್ನಿಂದ ಬಚಾವಾಗಿದ್ದಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.