ADVERTISEMENT

ವಿನೂತನ ಪ್ರೇಮರಾಗ ‘ಆನಂದರಾಗ’ ಉದಯ ಟಿವಿಯಲ್ಲಿ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2023, 6:45 IST
Last Updated 10 ಮಾರ್ಚ್ 2023, 6:45 IST
   

ಪ್ರಸ್ತುತ ದಿನಗಳಲ್ಲಿ ಕಪ್ಪು-ಬಿಳುಪಿನ ಹೆಣ್ಣಿನ ಕಥೆಗಳು ಕಿರುತೆರೆಯಲ್ಲಿ ಸಹಜವಾಗಿದೆ. ಆದರೆ ಈಗ ಕಿರುತೆರೆ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಕಪ್ಪು ಹುಡುಗನ ಮನಸ್ಥಿತಿ, ಅವನಿಗಾಗುವ ಅವಮಾನ, ಖಿನ್ನತೆಯಿಂದ ಹೊರಬರುವ ಕಥೆ ತರಲಿದೆ ಉದಯ ಟಿವಿ. ದಪ್ಪ ದೇಹ ಮತ್ತು ಕಪ್ಪು ಮೈಬಣ್ಣ ಹೊಂದಿರುವ ಕಥಾನಾಯಕ ತನ್ನ ಮುಗ್ದತೆಯಿಂದ ಜನರ ಮನಸ್ಸನ್ನು ಗೆದ್ದು ವೀಕ್ಷಕರ ಮನೆ ಮಗನಾಗಲು ಬರುತ್ತಿದ್ದಾನೆ.

ಇನ್ನೊಂದೆಡೆ ಕಥಾನಾಯಕಿ ಅಪ್ಪನ ಗುರಿಯನ್ನು ತನ್ನ ಗುರಿಯನ್ನಾಗಿಸಿಕೊಂಡು ಐ.ಪಿ.ಎಸ್ ಆಗುವ ಕನಸ್ಸನ್ನು ಹೊತ್ತವಳು. ತನ್ನ ಮುಗುಳುನಗೆಯಿಂದಲೇ ಎಲ್ಲಾ ಸಮಸ್ಯೆ ಬಗೆಹರಿಸುವ ಚತುರೆ ಇವಳು. ಈ ಚಲುವೆಗೂ ಆ ಕಪ್ಪು ಚಲುವನಿಗೂ ಇರುವ ಋಣಾನುಬಂಧದ ಕಥೆಯನ್ನು ಹೇಳಲು ಉದಯ ಟಿವಿ ಮಾರ್ಚ್13ಕ್ಕೆ ಸಜ್ಜಾಗಿದೆ.

ಕಪ್ಪು ಮೈಬಣ್ಣ ಹಾಗು ದಪ್ಪ ದೇಹ ಹೊಂದಿರುವ ಕಥಾನಾಯಕ ಹೆಸರಿಗೆ ಮಾತ್ರ ಚೆಲುವರಾಜ್. ಇವನು ರೆಬಲ್ ಸ್ಟಾರ್ ಅಂಬರೀಷ್ ರವರ ಅಪ್ಪಟ ಅಭಿಮಾನಿ. ಮುಗ್ಧತೆ 100%, ವಿದ್ಯೆ 0% ಆದರೆ ಇವನು ನೀಡುವ ನಗುವಿನ ಕಚಗುಳಿ 200%. ಹೀಗಿರುವ ಚೆಲುವರಾಜ ಅನುಭವಿಸಿರುವ ಅವಮಾನಕ್ಕೆ ಲೆಕ್ಕವಿಲ್ಲ. ಒಂದಲ್ಲ ಒಂದು ದಿನ ಅಂಬರೀಷ್ ಅವರ ರೀತಿ ತಾನೂ ಹೀರೊ ಆಗಬಲ್ಲೆ ಎಂದು ಕನಸು ಕಂಡಿರುವಾತ.

ಆನಂದರಾಗ ಧಾರಾವಾಹಿಯ ತಾರಾಗಣ

ಚೆಲುವನ ತಾಯಿ ವಸುಂಧರ. ಇವಳಿಗೆ ತನ್ನ ಮಗನ ಮೇಲೆ ತುಂಬಾ ಪ್ರೀತಿ. ಮಗನಿಗೆ ವಿದ್ಯೆ ಕಲಿಸಲು ಹರಸಾಹಸ ವೀಫಲವಾಗಿದ್ದರೂ ಸಮಾಜದಲ್ಲಿ ಮಗನಿಗೆ ಉತ್ತಮ ಸ್ಥಾನ ಕೊಡಿಸಲು ಪಣ ತೊಟ್ಟಿರುವ ಹೆಂಗರುಳು.

ADVERTISEMENT

ಇನ್ನು ಕಥಾನಾಯಕಿ ದುರ್ಗಾ, ಪರಮೇಶ್ವರಿಯಷ್ಟೇ ಸುಂದರಿ ಮತ್ತು ಧೈರ್ಯವಂತೆ. ಅಪ್ಪ-ಅಮ್ಮನ ಮುದ್ದಿನ ಮಗಳು. ತಂದೆ-ತಾಯಿಗಿಂತ ಮಿಗಿಲಾದ ದೇವರಿಲ್ಲ ಎಂಬ ನಂಬಿಕೆ ದುರ್ಗಾಳದ್ದು. ತನ್ನ ತಂಗಿ ಭಾವನಾಳ ಭಾವನೆಗಳಿಗೆ ಮಾತು ಇವಳದ್ದೆ. ಅಪ್ಪನ ಕನಸಿನಂತೆ ಐ.ಪಿ.ಎಸ್ ಆಗೋದೆ ಇವಳ ಗುರಿ. ದುರ್ಗಾ ಮತ್ತು ಚೆಲುವನ ನಡುವೆ ಅರಳುವ ವಿಭಿನ್ನವಾದ ಪ್ರೇಮರಾಗವೇ ಆನಂದರಾಗ.

ವಿನೂತನ ಪ್ರೇಮರಾಗದಲ್ಲಿ ದುರ್ಗಾಳಾಗಿ ದೀಪಾ ಹಿರೇಮಠ್ ಹಾಗು ಚೆಲುವರಾಜ ಆಗಿ ರಂಗಭೂಮಿ ಮಂಜುರವರು ಆನಂದರಾಗದ ಘಮ ಬೀರಲಿದ್ದಾರೆ. ಕಥಾನಾಯಕಿಯ ತಂದೆಯಾಗಿ ಖ್ಯಾತ ಕಳನಾಯಕ ಕೀರ್ತಿರಾಜ್ ಪಾತ್ರವಹಿಸಿದರೆ, ತಾಯಿಯಾಗಿ ಪ್ರತಿಭಾನ್ವಿತ ನಟಿ ಉಷಾ ಭಂಡಾರಿಯವರು ಕಾಣಿಸಿಕೊಳ್ಳಲಿದ್ದಾರೆ. ಕಥಾನಾಯಕನ ತಾಯಿಯಾಗಿ ಹೆಸರಾಂತ ನಟಿ ವೀಣಾ ಸುಂದರ್ ನಟಿಸುತ್ತಿದ್ದಾರೆ ಹಾಗೂ ಮತ್ತಷ್ಟು ನುರಿತ ಕಲಾವಿದರ ಬಳಗ ಈ ತಂಡದಲ್ಲಿದೆ.

ಆನಂದರಾಗದ ನಿರ್ಮಾಣದ ಹೊಣೆಯನ್ನು ವಿಷನ್ ಟೈಮ್ಸ್ ನಿಭಾಯಿಸುತ್ತಿದೆ. ಎಸ್.ಗೋವಿಂದ್ರವರು ನಿರ್ದೇಶನದ ಹೊಣೆ ಹೊತ್ತಿದ್ದಾರೆ ನಿಪುಣ ತಂತ್ರಜ್ಞರ ಕೈಚಳಕ ಈ ಧಾರಾವಾಹಿಗೆ ಮತ್ತಷ್ಡು ಸಹಕಾರಿಯಾಗಲಿದೆ.

ಹಲವಾರು ಅತ್ಯುತ್ತಮ ಧಾರಾವಾಹಿಗಳನ್ನು ವೀಕ್ಷಕರಿಗೆ ಉಣಬಡಿಸಿದ ಉದಯ ಟಿವಿಯಲ್ಲಿ ಇದೇ ಮಾರ್ಚ್ 13ರಿಂದ ಸೋಮವಾರದಿಂದ ಶನಿವಾರದವರೆಗೆ ರಾತ್ರಿ 7:30 ಕ್ಕೆ “ಆನಂದರಾಗ” ಧಾರಾವಾಹಿ ಪ್ರಸಾರವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.