ADVERTISEMENT

ಪರಿಸರ ಸ್ನೇಹಿಯೂ; ಆಕರ್ಷಕ ಗಣಪನೂ..!

ಪಿಒಪಿ ಅಬ್ಬರದಲ್ಲೂ ಪರಿಸರ ಕಾಳಜಿ; ವಿಜಯಪುರದಲ್ಲಿ ಗಣೇಶನ ಶತಾವತಾರ

ಡಿ.ಬಿ, ನಾಗರಾಜ
Published 15 ಸೆಪ್ಟೆಂಬರ್ 2018, 13:40 IST
Last Updated 15 ಸೆಪ್ಟೆಂಬರ್ 2018, 13:40 IST
ವಿಜಯಪುರದ ಆಜಾದ್‌ ರಸ್ತೆಯ ಸೋನಿಯಾ ಮಾರುತಿ ಗಜಾನನ ತರುಣ ಮಂಡಳಿ ಸಾರ್ವಜನಿಕ ಗಣೇಶೋತ್ಸವದಲ್ಲಿ ಅಜಾತಶತ್ರು ವಾಜಪೇಯಿ ಸ್ಮರಣೆ ನಡೆಸಿದೆ
ವಿಜಯಪುರದ ಆಜಾದ್‌ ರಸ್ತೆಯ ಸೋನಿಯಾ ಮಾರುತಿ ಗಜಾನನ ತರುಣ ಮಂಡಳಿ ಸಾರ್ವಜನಿಕ ಗಣೇಶೋತ್ಸವದಲ್ಲಿ ಅಜಾತಶತ್ರು ವಾಜಪೇಯಿ ಸ್ಮರಣೆ ನಡೆಸಿದೆ   

ವಿಜಯಪುರ: ನಗರದ ಗಲ್ಲಿ ಗಲ್ಲಿಯಲ್ಲೂ ಗಜನಾಯಕ ಪ್ರತಿಷ್ಠಾಪನೆಗೊಂಡಿದ್ದಾನೆ. ಸಾರ್ವಜನಿಕ ಗಣೇಶೋತ್ಸವದ ಸಡಗರ ಮುಗಿಲು ಮುಟ್ಟಿದೆ. ಶನಿವಾರ–ಭಾನುವಾರ ವಿಘ್ನ ನಿವಾರಕನ ದರ್ಶನಕ್ಕಾಗಿ ಮುಗಿಬಿದ್ದವರೇ ಹೆಚ್ಚು.

ಈಚೆಗಿನ ವರ್ಷಗಳಲ್ಲಿ ಪಿಒಪಿ ಗಣಪನ ಅಬ್ಬರ ತಗ್ಗಿಸುವ ಕೆಲಸ ಜಿಲ್ಲಾಡಳಿತ, ಗಜಾನನ ಮಂಡಳಿಗಳಿಂದ ನಡೆಯದಿದ್ದರೂ; ಕೆಲವರು ಸ್ವಯಂ ಪ್ರೇರಿತವಾಗಿ ಪರಿಸರ ಸ್ನೇಹಿ ಗಣೇಶೋತ್ಸವಕ್ಕೆ ಮುಂದಾಗಿದ್ದಾರೆ. ಹಲವರು ವಿಭಿನ್ನತೆ ಮೂಲಕ ಆಕರ್ಷಣೆ ಹೆಚ್ಚಿಸಲು ಯತ್ನಿಸಿರುವುದರ ಪರಿಣಾಮ ಗಣೇಶೋತ್ಸವ ರಂಗೇರಿದೆ.

ಮಹಾರಾಷ್ಟ್ರದ ಗಾಢ ಪ್ರಭಾವ ಹೊಂದಿರುವ ಜಿಲ್ಲೆಯಾದ್ಯಂಥ ಗಣೇಶೋತ್ಸವ ಸಾರ್ವಜನಿಕ ಹಬ್ಬವಾಗಿ ಆಚರಿಸಲ್ಪಡುತ್ತಿದೆ. ಗಜಾನನ ಮಹಾಮಂಡಳಗಳು ಸಹ ಅಷ್ಟೇ ಉತ್ಸುಕತೆಯಿಂದ ಸಾರ್ವಜನಿಕ ಗಣೇಶೋತ್ಸವ ಆಚರಿಸುತ್ತಿರುವುದು ವಿಶೇಷ.

ADVERTISEMENT

ಅಟಲ್‌ ಸ್ಮರಣೆ

ತಿಂಗಳ ಹಿಂದಷ್ಟೇ ಪಂಚಭೂತಗಳಲ್ಲಿ ಲೀನವಾದ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಸ್ಮರಣೆಯೂ ವಿಜಯಪುರದ ಸಾರ್ವಜನಿಕ ಗಣೇಶೋತ್ಸವದಲ್ಲಿ ನಡೆದಿದೆ.

ಆಜಾದ್‌ ರಸ್ತೆಯ ಸೋನಿಯಾ ಮಾರುತಿ ಗಜಾನನ ತರುಣ ಮಂಡಳಿ ಗಣಪನ ಚಿಕ್ಕ ಮೂರ್ತಿ ಪ್ರತಿಷ್ಠಾಪಿಸಿ, ಅಜಾತಶತ್ರುವಿನ ದೊಡ್ಡ ಭಾವಚಿತ್ರ ಅಳವಡಿಸಿ ಅಲಂಕರಿಸಿರುವುದು ವಿಶೇಷವಾಗಿದೆ. ಸಾಕಷ್ಟು ಸಂಖ್ಯೆಯ ಜನರು ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎನ್ನುತ್ತಾರೆ ಮಂಡಳಿಯ ಸದಸ್ಯ ವಿನಾಯಕ ಕಾಳೆ.

‘ನಾನು ಬಿಜೆಪಿ ಕಾರ್ಯಕರ್ತ. ಆದರೆ ನಮ್ಮ ತರುಣ ಮಂಡಳಿಯ ಸದಸ್ಯರಲ್ಲಿ ಬಹುತೇಕರು ವ್ಯಾಪಾರಿಗಳಿದ್ದಾರೆ. ಎಲ್ಲರ ಒತ್ತಾಸೆ ಮೇರೆಗೆ ಗಣೇಶೋತ್ಸವದಲ್ಲಿ ಅಜಾತಶತ್ರುವಿನ ಸ್ಮರಣೆ’ ನಡೆಸಿದ್ದೇವೆ ಎಂದು ಅವರು ಹೇಳಿದರು.

ರುದ್ರಾಕ್ಷಿ ಗಣಪ

ಕಾಶಿಯಿಂದ 15000 ರುದ್ರಾಕ್ಷಿ ತರಿಸಿ, ಸ್ಥಳೀಯ ಕಲಾವಿದರನ್ನು ಬಳಸಿಕೊಂಡು ರುದ್ರಾಕ್ಷಿ ಗಣಪನನ್ನು ಪ್ರತಿಷ್ಠಾಪಿಸಿದೆ ಆಶ್ರಮ ರಸ್ತೆಯ ಗುಮಾಸ್ತೆ ಕಾಲೊನಿಯ ಲಕ್ಷ್ಮೀ ಗಜಾನನ ತರುಣ ಮಂಡಳಿ.

‘ಕಾಶಿ ಸ್ವಾಮೀಜಿ ನಮ್ಮ ಕೋರಿಕೆ ಮೇರೆಗೆ ರುದ್ರಾಕ್ಷಿ ಕಳುಹಿಸಿಕೊಟ್ಟಿದ್ದಾರೆ. ಗಣಪತಿ ತಯಾರಿಕೆಗೆ ಇಷ್ಟು ರುದ್ರಾಕ್ಷಿಯೂ ಸಾಲಲಿಲ್ಲ. ಇದರಿಂದ ಬೆನ್ನಿನ ಭಾಗಕ್ಕೆ ರುದ್ರಾಕ್ಷಿ ಬಳಸಲಾಗಿಲ್ಲ. 20 ದಿನ 10 ಮಂದಿ ಗಣಪನ ನಿರ್ಮಾಣಕ್ಕಾಗಿ ದುಡಿದೆವು. ₹ 30000 ವೆಚ್ಚವಾಗಿದೆ.

ಪ್ರತಿ ಬಾರಿಯೂ ವಿಶೇಷವಾಗಿ ಗಣೇಶೋತ್ಸವ ಆಚರಿಸಬೇಕು ಎಂಬುದು ನಮ್ಮ ಬಯಕೆ. ಇದಕ್ಕಾಗಿಯೇ ಈ ಬಾರಿ ಏಳು ದಿನ ಪೂಜೆಯ ಬಳಿಕ ರುದ್ರಾಕ್ಷಿಗಳನ್ನು ಮಾರಾಟ ಮಾಡುತ್ತೇವೆ. ಐದು ರುದ್ರಾಕ್ಷಿಗೆ ₹ 51. ಯಾರು ಬೇಕಾದರೂ ಖರೀದಿಸಬಹುದು. ಈ ಹಣವನ್ನು ಮುಂದಿನ ಬಾರಿ ಮತ್ತೊಂದು ವಿಶೇಷ ಗಣಪನ ಪ್ರತಿಷ್ಠಾಪನೆಗೆ ಬಳಸಿಕೊಳ್ಳಲಿದ್ದೇವೆ’ ಎಂದು ಮಂಡಳಿಯ ಸತೀಶ್‌ ರಡ್ಡಿ ಮಾಹಿತಿ ನೀಡಿದರು.

ಪರಿಸರ ಸ್ನೇಹಿ ಉತ್ತುತ್ತಿ ಗಣಪ

ಪರಿಸರ ಸ್ನೇಹಿ ಗಣೇಶೋತ್ಸವ ಆಚರಿಸಬೇಕು ಎಂಬುದು ಅಕ್ಕಿ ಕಾಲೊನಿಯ ಗಜಾನನ ಏಕತಾ ಯುವಕ ಸಂಘದ ಆಶಯ. ಹಿಂದಿನ ವರ್ಷವೂ ಪರಿಸರ ಸ್ನೇಹಿ ಗಣೇಶೋತ್ಸವ ಆಚರಿಸಿದ ಹಿರಿಮೆ ಈ ಸಂಘದ್ದು.

‘12 ಅಡಿ ಎತ್ತರದ ಉತ್ತುತ್ತಿ ಗಣಪನನ್ನು ನಿರ್ಮಿಸಿದ್ದೇವೆ. ಹಿಂದಿನ ಬಾರಿ ಸಿರಿ ಧಾನ್ಯದ ಗಣಪನನ್ನು ಪ್ರತಿಷ್ಠಾಪಿಸಿದ್ದೆವು. ಪೂಜೆಗಾಗಿ ಈ ಬಾರಿ ಮಣ್ಣಿನ ಪರಿಸರ ಸ್ನೇಹಿ ಗಣಪನನ್ನೇ ಪ್ರತಿಷ್ಠಾಪಿಸಿದ್ದೇವೆ. ಗಣೇಶ ಚತುರ್ಥಿಗೂ ಮೂರು ದಿನ ಮುನ್ನಾ ಮೂರ್ತಿ ಸಿದ್ಧಪಡಿಸಿದೆವು. ಏಳು ದಿನದ ಪೂಜೆ ಬಳಿಕ ಮೂರ್ತಿಯಲ್ಲಿನ ಉತ್ತುತ್ತಿಯನ್ನು ಪ್ರಸಾದ ರೂಪದಲ್ಲಿ ಭಕ್ತ ಸಮೂಹಕ್ಕೆ ವಿತರಿಸುತ್ತೇವೆ’ ಎಂದು ಸಂಘದ ಮಲ್ಲು ಪಟ್ಟಣಶೆಟ್ಟಿ ತಿಳಿಸಿದರು.

ಬೇಟಿ ಬಚಾವೋ ಬೇಟಿ ಪಢಾವೋ

ಶಿವಾಜಿ ಚೌಕ್‌ನಲ್ಲಿ ಗಜಾನನ ಮಹಾಮಂಡಳವೂ ಗಣಪ ಮೂರ್ತಿ ಪ್ರತಿಷ್ಠಾಪಿಸಿದೆ. ಮೂರ್ತಿಯಿರುವ ವೇದಿಕೆ ಮುಂಭಾಗ ಈಚೆಗಷ್ಟೇ ನಡೆದ ಏಷ್ಯನ್‌ಗೇಮ್ಸ್‌ನಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಬಾನಂಗಳದಲ್ಲಿ ಹಾರಿಸಿದ ದೇಶದ ಹೆಮ್ಮೆಯ ಪುತ್ರಿಯರ ಭಾವಚಿತ್ರ, ಅವರ ಸಾಧನೆ ಅನಾವರಣಗೊಳಿಸಿದೆ. ಇದರ ಜತೆಗೆ ಬೇಟಿ ಬಚಾವೋ, ಬೇಟಿ ಪಢಾವೋ ಆಂದೋಲನದ ಧ್ಯೇಯೋದ್ದೇಶವನ್ನು ಸಾರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.