ಚಾರ್ಮಾಡಿ ಘಾಟಿ –ಪ್ರಜಾವಾಣಿ ಚಿತ್ರ
ಮಂಗಳೂರು: ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು ಬೆಸೆಯುವ ಚಾರ್ಮಾಡಿ ಘಾಟಿಯಲ್ಲಿ ಐದಾರು ವರ್ಷಗಳಿಂದ ಈಚೆಗೆ ಮಳೆಗಾಲದಲ್ಲಿ ಎರಡು ಸಲ ಭೂಕುಸಿತ ಉಂಟಾಗಿದೆ. ಮಳೆಗಾಲ ಶುರುವಾಗುತ್ತಿದ್ದಂತೆಯೇ ಭೂಕುಸಿತದ ಭೀತಿ ಮತ್ತೆ ಕಾಡಲಾರಂಭಿಸಿದೆ.
2019-20ನೇ ಸಾಲಿನಲ್ಲಿ ಸುರಿದ ಭಾರಿ ಮಳೆಯಿಂದ ಈ ಘಾಟಿಯ ಕೆಲ ಭಾಗ ಕುಸಿದು, ಇಲ್ಲಿನ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತ್ತು. 2021–22ರ ಮಳೆಗಾಲದಲ್ಲಿ ಘಾಟಿಯ ಅನೇಕ ಕಡೆ ಮತ್ತೆ ಭೂ ಕುಸಿತ ಉಂಟಾಗಿತ್ತು. ಈ ಘಾಟಿಯಲ್ಲಿ ಭೂಕುಸಿತ ಮರುಕಳಿಸುವುದನ್ನು ತಡೆಯುವ ಸಲುವಾಗಿ ಶಾಶ್ವತ ದುರಸ್ತಿ ಕಾರ್ಯಕ್ಕೆ ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದಿಂದ ಅನುದಾನ ಮಂಜೂರಾಗಿದ್ದು, ಆ ಕಾಮಗಾರಿಗಳು ಮುಕ್ತಾಯವಾಗಿವೆ. ಭೂಕುಸಿತ ಉಂಟಾದ ಪ್ರದೇಶಗಳಲ್ಲಿ ತಡೆಗೋಡೆ ನಿರ್ಮಿಸಲಾಗಿದೆ.
25 ಕಿ.ಮೀ ಉದ್ದದ ಈ ಘಾಟಿಯಲ್ಲಿ ಹಾದುಹೋಗಿರುವ ಹೆದ್ದಾರಿಯು ಕೆಲವೆಡೆ 5.5 ಮೀಟರ್ನಷ್ಟು ಕಿರಿದಾಗಿದೆ. ಇದನ್ನು 10 ಮೀಟರ್ಗೆ ವಿಸ್ತರಿಸುವ ಯೋಜನೆಗೆ ₹343 ಕೋಟಿ ಮಂಜೂರಾಗಿತ್ತು. ಈ ಘಾಟಿಯ ಆರಂಭಿಕ ಸ್ಥಳದಿಂದ 12ನೇ ತಿರುವಿನವರೆಗೆ ಹೆದ್ದಾರಿಯನ್ನು ವಿಸ್ತರಿಸಬೇಕಿದೆ.
ಈ ಕಾಮಗಾರಿಯನ್ನು ಗುತ್ತಿಗೆ ಪಡೆದ ಸಂಸ್ಥೆಯು 2025ರ ಜನವರಿಯಲ್ಲಿ ಕೆಲಸ ಆರಂಭಿಸಬೇಕಿತ್ತು. ಆದರೆ, ಇನ್ನೂ ಶುರುವಾಗಿಲ್ಲ. ಕಾಮಗಾರಿ ನಡೆಸಲು ನೂರಾರು ಮರಗಳನ್ನು ತೆರವುಗೊಳಿಸಬೇಕಾಗುತ್ತದೆ. ಅದಕ್ಕೆ ಅರಣ್ಯ ಇಲಾಖೆಯ ಅನುಮತಿ ಸಿಕ್ಕಿಲ್ಲ. ಇದು ಕೂಡ ಕಾಮಗಾರಿ ವಿಳಂಬಕ್ಕೆ ಕಾರಣ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮಳೆಗಾಲ ಹಾಗೂ ಚಳಿಗಾಲದಲ್ಲಿ ಇಲ್ಲಿ, ಮಂಜು ಆವರಿಸುವ ಸಂದರ್ಭಗಳಲ್ಲಿ ಇಕ್ಕಟ್ಟಾದ ರಸ್ತೆಗಳಲ್ಲಿ ವಾಹನ ಚಲಾಯಿಸಲು ಚಾಲಕರು ಹರಸಾಹಸಪಡಬೇಕು. ರಸ್ತೆ ಪಕ್ಕದಲ್ಲಿ ಕಡಿದಾದ ಕಣಿವೆಗಳನ್ನು ಹೊಂದಿರುವ ಈ ಘಾಟಿಯಲ್ಲಿ ಆಯ ತಪ್ಪಿದರೆ ಅಪಾಯ ಕಟ್ಟಿಟ್ಟ ಬುತ್ತಿ.
‘ಸದ್ಯಕ್ಕೆ ಚಾರ್ಮಾಡಿ ಘಾಟಿಯಲ್ಲಿ ಗುಡ್ಡ ಕುಸಿತದ ಲಕ್ಷಣ ಎಲ್ಲೂ ಕಂಡುಬಂದಿಲ್ಲ. ಈ ಬಗ್ಗೆ ನಿಗಾ ಇಟ್ಟಿದ್ದೇವೆ. ಮರ ಬಿದ್ದರೆ ಅಥವಾ ಸಣ್ಣ ಪುಟ್ಟ ಕುಸಿತ ಉಂಟಾದರೆ ತಕ್ಷಣವೇ ದುರಸ್ತಿ ಕಾರ್ಯ ಕೈಗೊಳ್ಳಲು ಅಗತ್ಯ ವ್ಯವಸ್ಥೆ ಮಾಡಿಕೊಂಡಿದ್ದೇವೆ’ ಎಂದು ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಉಡುಪಿ: ಜಿಲ್ಲೆಯಿಂದ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗೆ ತೆರಳುವ ಘಾಟಿ ರಸ್ತೆಗಳಲ್ಲಿ ಮಳೆಗಾಲದಲ್ಲಿ ಮಣ್ಣು ಕುಸಿದು, ಮರ ಬಿದ್ದು ಸಂಚಾರ ಸ್ಥಗಿತವಾಗುವುದು ಸಾಮಾನ್ಯವಾಗಿದ್ದರೂ, ಇತ್ತೀಚಿನ ವರ್ಷಗಳಲ್ಲಿ ಭಾರಿ ಪ್ರಮಾಣದ ಭೂಕುಸಿತ ಸಂಭವಿಸಿದ ಉದಾಹರಣೆಗಳಿಲ್ಲ.
ಉಡುಪಿಯಿಂದ ಶೃಂಗೇರಿ, ಶಿವಮೊಗ್ಗದ ಕಡೆಗೆ ತೆರಳಲು ಆಗುಂಬೆ ಘಾಟಿಯಲ್ಲಿ ತೆರಳಬೇಕಾಗಿದೆ. ಈ ಘಾಟಿಯಲ್ಲಿ ದೊಡ್ಡ ಬಸ್ಗಳ ಸಂಚಾರಕ್ಕೆ ಅನುಮತಿ ಇಲ್ಲದ ಕಾರಣ ಮಿನಿ ಬಸ್ಗಳಷ್ಟೇ ಸಂಚರಿಸುತ್ತವೆ.
ಮೊಳಕಾಲ್ಮುರು– ಉಡುಪಿ– ಮಲ್ಪೆ ರಾಷ್ಟ್ರೀಯ ಹೆದ್ದಾರಿ 169ಎ ನಡುವೆ ಇರುವ ಆಗುಂಬೆ ಘಾಟಿಯಲ್ಲಿ ರಸ್ತೆಗಳು ಸುಸ್ಥಿತಿಯಲ್ಲಿರುವುದರಿಂದ ಸಂಚಾರ ನಿರಾತಂಕವಾಗಿದೆ.
ಚಿಕ್ಕಮಗಳೂರಿನ ಹೊರನಾಡು, ಕುದುರೆಮುಖ ಮೊದಲಾದೆಡೆಗೆ ತೆರಳಬೇಕಾದರೆ ಕಾರ್ಕಳ ತಾಲ್ಲೂಕಿನ ಮಾಳ ಘಾಟಿಯ ಮೂಲಕ ಸಂಚರಿಸಬೇಕಾಗಿದೆ. ಮಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಸ್.ಕೆ.ಬಾರ್ಡರ್ನಿಂದ ಸಾಗುವ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಮಳೆಗೆ ಐದು ಕಡೆ ಗುಡ್ಡ ಜರಿದ ಪರಿಣಾಮವಾಗಿ ಸಂಚಾರ ವ್ಯತ್ಯಯ ಉಂಟಾಗಿತ್ತು.
ಕುಂದಾಪುರದಿಂದ ಬಸ್ರೂರು, ಸಿದ್ದಾಪುರ, ಮಾಸ್ತಿಕಟ್ಟೆ, ಹೊಸನಗರ ಕಡೆಗೆ ಹೋಗುವ ರಸ್ತೆಯಲ್ಲಿ ಬಳೇಬರೆ ಘಾಟಿ ಸಿಗುತ್ತದೆ. ಕುಂದಾಪುರದಿಂದ ಹೆಮ್ಮಾಡಿ, ಕೊಲ್ಲೂರು ದಾರಿಯಗಿ ನಾಗೋಡಿ ಘಾಟಿ ಸಿಗುತ್ತದೆ. ಈ ಎರಡು ಘಾಟಿಯಲ್ಲೂ ರಸ್ತೆ ಸುಸ್ಥಿತಿಯಲ್ಲಿರುವುದರಿಂದ ಯಾವುದೇ ಸಮಸ್ಯೆ ಉಂಟಾಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.