
ಪೊಲೀಸರ ಗುಂಪೊಂದು ಬೈಕ್ಗಳಲ್ಲಿ ಬರುವ ಯುವಕರ ಮೇಲೆ ಹಲ್ಲೆ ನಡೆಸುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಬಜರಂಗ ದಳದ ಸದಸ್ಯರು ಮಸೀದಿಯ ಮುಂದೆ ಪ್ರಾರ್ಥನಾ ಸಮಯದಲ್ಲಿ ಗದ್ದಲ ಉಂಟುಮಾಡಲು ಪ್ರಯತ್ನಿಸಿದಾಗ ಪೊಲೀಸರು ಲಾಠಿ ಬೀಸಿ ಅವರನ್ನು ಅಲ್ಲಿಂದ ಓಡಿಸಿದರು ಎಂದು ವಿಡಿಯೊವನ್ನು ಹಂಚಿಕೊಳ್ಳುತ್ತಿರುವವರು ಪ್ರತಿಪಾದಿಸುತ್ತಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ.
ವಿಡಿಯೊದ ಕೀಫ್ರೇಮ್ಗಳನ್ನು ಇನ್ವಿಡ್ ಟೂಲ್ ಮೂಲಕ ಪ್ರತ್ಯೇಕಿಸಿ, ಗೂಗಲ್ ಲೆನ್ಸ್ ಮೂಲಕ ಪರಿಶೀಲಿಸಿದಾಗ, ಒಂದೇ ವಿಡಿಯೊ ಅನ್ನು ಹಲವರು ಹಂಚಿಕೊಂಡಿರುವುದು ಕಂಡಿತು. ಗೂಗಲ್ ಲೆನ್ಸ್ ಹುಡುಕಾಟವು ನ್ಯೂಸ್ 18 ಮರಾಠಿ ಚಾನೆಲ್ನಲ್ಲಿ 2026ರ ಫೆಬ್ರುವರಿ 6ರಂದು ಪ್ರಕಟವಾಗಿದ್ದ ವರದಿಗೆ ಸಂಪರ್ಕ ಕಲ್ಪಿಸಿತು. ವರದಿಯಲ್ಲಿ ಪ್ರಕಟವಾಗಿದ್ದ ವಿಡಿಯೊ ಮತ್ತು ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ವಿಡಿಯೊ ನಡುವೆ ಸಾಮ್ಯತೆ ಕಂಡುಬಂತು. ಕರ್ನಾಟಕದ ಚಿಂಚಲಿಯಲ್ಲಿ ಮಾಯಕ್ಕ ದೇವಿ ಜಾತ್ರೆ ಅಂಗವಾಗಿ ನಡೆದ ಕುದುರೆ ಗಾಡಿ ರೇಸ್ ವೇಳೆ ಗದ್ದಲ ಉಂಟಾಗಿ, ಪೊಲೀಸರು ಲಾಠಿ ಬೀಸಿದ್ದರು. ರೇಸ್ ಗಾಡಿಗಳು ಮಹಾರಾಷ್ಟ್ರದ ಸಾಂಗ್ಲಿ ಪ್ರವೇಶಿಸುತ್ತಿದ್ದಂತೆ ಅಲ್ಲಿಯೂ ಅದೇ ಪರಿಸ್ಥಿತಿ ಮರುಕಳಿಸಿ, ಗದ್ದಲ ಮಾಡುತ್ತಿದ್ದ ಯುವಕರನ್ನು ಪೊಲೀಸರು ಲಾಠಿ ಏಟು ನೀಡಿ ಚದುರಿಸಿದರು ಎಂದು ವರದಿಯಲ್ಲಿ ಉಲ್ಲೇಖವಾಗಿದೆ. ಈ ವಿಡಿಯೊಗೆ ಕೆಲವರು ಕೋಮು ಆಯಾಮ ನೀಡಿ ಹಂಚಿಕೊಳ್ಳುವ ಮೂಲಕ ಸುಳ್ಳು ಪ್ರತಿಪಾದನೆ ಮಾಡುತ್ತಿದ್ದಾರೆ ಎಂದು ಪಿಟಿಐ ಫ್ಯಾಕ್ಟ್ ಚೆಕ್ ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.