
ಕೇಂದ್ರ ಸರ್ಕಾರವು ಕಾರ್ಮಿಕ ಕಾನೂನುಗಳನ್ನು ಸಮಗ್ರವಾಗಿ ಪರಿಷ್ಕರಿಸಿದ್ದು, ನಾಲ್ಕು ನೂತನ ಕಾರ್ಮಿಕ ಸಂಹಿತೆಗಳು ನ. 21ರಿಂದ ಜಾರಿಗೆ ಬಂದಿವೆ. ಕೇಂದ್ರವು ಈ ಕುರಿತು ಅಧಿಸೂಚನೆಯನ್ನೂ ಹೊರಡಿಸಿದೆ.
ಈ ಮೊದಲಿನ 29 ಕಾರ್ಮಿಕ ಕಾಯ್ದೆಗಳ ಬದಲಾಗಿ ಈ ಸಂಹಿತೆಗಳು ಅನುಷ್ಠಾನಕ್ಕೆ ಬಂದಿದ್ದು, ಕಾರ್ಮಿಕರಿಗೆ ಸಂಬಂಧಿಸಿದ ವಿವಿಧ ಕಾನೂನುಗಳನ್ನು ಆಧುನಿಕ ಚೌಕಟ್ಟಿನೊಂದಿಗೆ ಈ ಸಂಹಿತೆಯಡಿ ಒಟ್ಟುಗೂಡಿಸಲಾಗಿದೆ. ಈ ಸಂಹಿತೆಗಳ ಮೂಲಕ ಕಾರ್ಮಿಕ ನಿಯಮಗಳನ್ನು ಆಧುನೀಕರಿಸಿ, ಕಾರ್ಮಿಕರ ಕಲ್ಯಾಣವನ್ನು ವೃದ್ಧಿಸುವ ಮತ್ತು ಬದಲಾಗುತ್ತಿರುವ ಜಗತ್ತಿಗೆ ಹೊಂದಿಕೊಳ್ಳುವ ಕಾರ್ಮಿಕ ಪೂರಕ ವ್ಯವಸ್ಥೆಯನ್ನು ನಿರ್ಮಿಸಲಿದೆ ಎಂದೇ ಕೇಂದ್ರ ಸರ್ಕಾರ ಹೇಳಿಕೊಂಡಿದೆ.
ವೇತನ ಸಂಹಿತೆ (2019), ಕೈಗಾರಿಕೆ ಸಂಪರ್ಕ ಸಂಹಿತೆ (2020), ಸಾಮಾಜಿಕ ಭದ್ರತೆ ಕುರಿತ ಸಂಹಿತೆ (2020) ಹಾಗೂ ವೃತ್ತಿ ಸುರಕ್ಷತೆ, ಆರೋಗ್ಯ ಮತ್ತು ಉದ್ಯೋಗ ಕುರಿತ ನಿಬಂಧನೆಗಳ ಸಂಹಿತೆ (2020) ಜಾರಿಗೆ ಬಂದಿವೆ. ಸೇರಿದಂತೆ ಕಳೆದ ಐದು ವರ್ಷಗಳಿಂದ ಬಾಕಿ ಉಳಿದಿದ್ದ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಕೇಂದ್ರ ಅನುಷ್ಠಾನಗೊಳಿಸಿದೆ.
ಬ್ರಿಟಿಷ್ ಕಾಲದಿಂದ ಇದ್ದ 29 ಕಾನೂನುಗಳನ್ನು ಬದಲಿಸಿ ಜಾರಿಗೆ ತಂದಿರುವ ಹೊಸ ಕಾನೂನುಗಳು, ಗಿಗ್ ಕಾರ್ಮಿಕರನ್ನೂ ಒಳಗೊಂಡು ಪ್ರತಿಯೊಬ್ಬರಿಗೂ ಆಯಾ ತಿಂಗಳ 7ನೇ ತಾರೀಕಿನೊಳಗೆ ಕನಿಷ್ಠ ವೇತನ ನೀಡುವಂತೆ ಮತ್ತು ಸಾಮಾಜಿಕ ಭದ್ರತೆಯನ್ನು ಖಾತ್ರಿಗೊಳಿಸುವಂತ ಕಾರ್ಮಿಕ ಸ್ನೇಹಿ ಕ್ರಮಗಳನ್ನು ಪರಿಚಯಿಸಿದೆ.
ಮತ್ತೊಂದೆಡೆ, ಕೆಲಸದ ಸಮಯದಲ್ಲಿ ಹೆಚ್ಚಳ ಮತ್ತು ಉದ್ಯೋಗದಾತ ಸ್ನೇಹಿ ವಜಾ ನಿಯಮಗಳ ಜಾರಿಗೂ ಅನುಮತಿ ನೀಡಿದೆ. ಇವು ಕಂಪನಿ ಹಿತ ಕಾಯುವ ಸುಧಾರಣೆಗಳಾಗಿದ್ದು, ಆ ಮೂಲಕ ಸಮತೋಲಿತ ಪ್ರಯತ್ನಕ್ಕೆ ಕೇಂದ್ರ ಕೈಹಾಕಿದೆ.
ಕೃಷಿ, ಕಾರ್ಖಾನೆ ಅಥವಾ ಡಿಜಿಟಲ್ ವೇದಿಕೆಯೇ ಆಗಿರಲಿ ದೇಶದ ಪ್ರತಿಯೊಬ್ಬ ಕಾರ್ಮಿಕನಿಗೂ ಕನಿಷ್ಠ ವೇತವನ್ನು ಈ ಸಂಹಿತೆ ಖಚಿತಪಡಿಸುತ್ತದೆ. ಜತೆಗೆ ಕನಿಷ್ಠ ವೇತನದ ಹಕ್ಕನ್ನೂ ಇದು ಖಾತ್ರಿಪಡಿಸುತ್ತದೆ.
ರಾಷ್ಟ್ರಮಟ್ಟದಲ್ಲಿ ಕನಿಷ್ಠ ವೇತವನ್ನು ಕೇಂದ್ರ ಸರ್ಕಾರ ನಿಗದಿಪಡಿಸಲಿದೆ. ಅದಕ್ಕಿಂತ ಕಡಿಮೆ ವೇತನವನ್ನು ಯಾವುದೇ ರಾಜ್ಯ ನಿಗದಿಪಡಿಸುವಂತಿಲ್ಲ.
ವೇತನದ ಸಕಾಲಿಕ ಪಾವತಿ ಈಗ ಕಾನೂನುಬದ್ಧವಾಗಿ ಕಡ್ಡಾಯವಾಗಿದೆ. ಒಟ್ಟು ವೇತನದ ಶೇ 50ರಷ್ಟನ್ನು ಮೂಲ ವೇತನ ಎಂದು ಪರಿಗಣಿಸಬೇಕಿರುವುದರಿಂದ ಉಳಿದ ವೇತನ ಭವಿಷ್ಯ ನಿಧಿ, ಗ್ರಾಚ್ಯುಟಿ ಮತ್ತು ಪಿಂಚಣಿ ಸೇರಲಿದೆ.
ನೌಕರರ ನೇಮಕಾತಿ, ವಜಾ, ಮುಷ್ಕರ ಮತ್ತು ಕಾರ್ಮಿಕ ಒಕ್ಕೂಟಗಳ ನಿಯಮಗಳನ್ನು ರೂಪಿಸುತ್ತದೆ.
ಕನಿಷ್ಠ 300 ಉದ್ಯೋಗಿಗಳಿರುವ ಕಂಪನಿಗಳು ಸರ್ಕಾರದ ಅನುಮತಿ ಕೇಳದೆ ಕಾರ್ಮಿಕರನ್ನು ವಜಾಗೊಳಿಸಲು ಈ ನೂತನ ಸಂಹಿತೆ ಅವಕಾಶ ಕಲ್ಪಿಸಿದೆ. ಈ ಹಿಂದೆ ಈ ಮಿತಿಯು 100 ಆಗಿತ್ತು.
ಗುತ್ತಿಗೆ ಆಧಾರದಲ್ಲಿ ದುಡಿಯುವ ಕಾರ್ಮಿಕರು ಈಗ ಕಾಯಂ ಸಿಬ್ಬಂದಿಯಂತೆಯೇ ಎಲ್ಲಾ ಪ್ರಯೋಜನಗಳನ್ನು ಪಡೆಯಲಿದ್ದಾರೆ.
ನೌಕರಿಗೆ ಸೇರಿ ಒಂದು ವರ್ಷದ ನಂತರ ಗ್ರಾಚ್ಯುಟಿ ಪಾವತಿಗೆ ನೌಕರರು ಅರ್ಹರು. ಇದು ಈ ಹಿಂದೆ 5 ವರ್ಷ ಇತ್ತು.
ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯ ವ್ಯಾಪ್ತಿಯನ್ನು ಈ ಸಂಹಿತೆ ವಿಸ್ತರಿಸಲಿದೆ.
ಗಿಗ್ ಕಾರ್ಮಿಕರು, ಪ್ಲಾಟ್ಫಾರ್ಮ್ ಕಾರ್ಮಿಕರು ಮತ್ತು ಅಸಂಘಟಿತ ವಲಯದ ಉದ್ಯೋಗಿಗಳನ್ನು ಸಾಮಾಜಿಕ ಭದ್ರತಾ ಯೋಜನೆ ವ್ಯಾಪ್ತಿಗೆ ತರಲಾಗಿದೆ.
ಇಪಿಎಫ್, ಇಎಸ್ಐಸಿ, ವಿಮೆ, ಹೆರಿಗೆ ರಜೆ ಮತ್ತು ಪಿಂಚಣಿಯಂತ ಪ್ರಯೋಜನಗಳು ಈ ಹಿಂದೆ ಹೊರಗುಳಿದಿದ್ದ ಕಾರ್ಮಿಕರಿಗೂ ಲಭ್ಯ.
ಮನೆ ಬಾಗಲಿಗೆ ಆಹಾರ ವಿತರಿಸುವವರು ಸೇರಿದಂತೆ ಗಿಗ್ ಕಾರ್ಮಿಕರು ತಮ್ಮ ವಾರ್ಷಿಕ ವೇತನದ ಶೇ 1ರಿಂದ 2ರಷ್ಟನ್ನು ಸಾಮಾಜಿಕ ಭದ್ರತಾ ನಿಧಿಗೆ ನೀಡಬೇಕು ಎಂದು ಇದರಲ್ಲಿ ಹೇಳಲಾಗಿದೆ.
ವೃತ್ತಿ ಸ್ಥಳದಲ್ಲಿ ಭದ್ರತೆ ಮತ್ತು ಆರೋಗ್ಯ ಸುರಕ್ಷತೆಯ ಮಾನದಂಡಗಳನ್ನು ಈ ಸಂಹಿತೆ ಕಡ್ಡಾಯಗೊಳಿಸಿದೆ.
ಕೆಲಸದ ವಾತಾವರಣದಲ್ಲಿ ಸುರಕ್ಷತೆಯನ್ನು ಖಾತ್ರಿಪಡಿಸುವುದೂ ಇದರಲ್ಲಿ ಸೇರಿದೆ.
ದಿನದ ಕೆಲಸದ ಅವಧಿಯನ್ನು ಈ ಮೊದಲು ಇದ್ದ 8 ಗಂಟೆಯಿಂದ 12 ಗಂಟೆಗೆ ವಿಸ್ತರಿಸಲಾಗಿದೆ. ವಾರದ ಕೆಲಸದ ಅವಧಿಯನ್ನು 48 ಗಂಟೆಗಳಿಗೆ ಮಿತಿಗೊಳಿಸಲಾಗಿದೆ.
40 ವರ್ಷಕ್ಕಿಂತ ಮೇಲ್ಪಟ್ಟ ಕಾರ್ಮಿಕರಿಗೆ ಪ್ರತಿ ವರ್ಷ ಉಚಿತವಾಗಿ ಆರೋಗ್ಯ ತಪಾಸಣೆ ಮಾಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ.
ಮಹಿಳಾ ಕಾರ್ಮಿಕರು ತಮ್ಮ ಒಪ್ಪಿಗೆ ಮತ್ತು ಅಗತ್ಯ ಸುರಕ್ಷತಾ ಕ್ರಮಗಳೊಂದಿಗೆ ಎಲ್ಲಾ ಉದ್ಯಮಗಳಲ್ಲೂ ರಾತ್ರಿಪಾಳಿಯಲ್ಲಿ ಕೆಲಸ ಮಾಡಲು ಈ ಸಂಹಿತೆಯು ಅವಕಾಶ ಕಲ್ಪಿಸಿದೆ.
ವೇತನ ಸಂಹಿತೆ ಜಾರಿಗೆ ಬಂದಿರುವುದರಿಂದ ಭವಿಷ್ಯ ನಿಧಿ, ಗ್ರಾಚ್ಯುಟಿ ಹಾಗೂ ನಿವೃತ್ತಿ ನಂತರದ ಕೊಡುಗೆಗಳು ಹೆಚ್ಚಳವಾಗಲಿವೆ
ಹೊಸ ಕಾರ್ಮಿಕ ಸಂಹಿತೆಯಲ್ಲಿ ಮೂಲ ವೇತನವು ಒಟ್ಟು ವೇತನದ ಶೇ 50ರಷ್ಟು ಇರಲೇಬೇಕು ಎಂದು ಕಡ್ಡಾಯಗೊಳಿಸಲಾಗಿದೆ. ಇದರಿಂದ ವ್ಯಕ್ತಿಯ ವೇತನಕ್ಕೆ ತಕ್ಕಂತೆ ಭವಿಷ್ಯ ನಿಧಿ ಮತ್ತು ಗ್ರಾಚ್ಯುಟಿಗಾಗಿ ಹಣ ಕಡತಗೊಳ್ಳಲಿದೆ. ಇದರಿಂದ ನಿವೃತ್ತಿ ಜೀವನದಲ್ಲಿ ಹೆಚ್ಚು ಹಣ ಸಿಗುವಂತೆ ಯೋಜನೆ ರೂಪಿಸಲಾಗಿದೆ. ಹೀಗಾಗಿ ಪ್ರತಿ ತಿಂಗಳು ಕೈಗೆ ಸಿಗುವ ವೇತನ ಕಡಿಮೆಯಾದರೂ, ನಿವೃತ್ತಿ ನಂತರ ಸಿಗುವ ಸೌಲಭ್ಯಗಳು ಹೆಚ್ಚಾಗಿರಲಿವೆ.
ಆದರೆ ಮೂಲ ವೇತನವನ್ನು ಯಾವುದೇ ಕಾರಣಕ್ಕೂ ಕಡಿಮೆ ಮಾಡದಂತೆ ಈ ಸಂಹಿತೆ ಭದ್ರತೆ ಒದಗಿಸಿದೆ. ಜತೆಗೆ ನಿವೃತ್ತಿ ಸೌಲಭ್ಯಗಳು ಹಾಗೂ ಗ್ರಾಚ್ಯುಟಿಯಲ್ಲಿ ಯಾವುದೇ ಕಡಿಮೆಯಾಗದಂತೆಯೂ ಖಾತ್ರಿಪಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.