ADVERTISEMENT

ಅಯೋಧ್ಯೆ: 6 ತಿಂಗಳಲ್ಲಿ 11ಕೋಟಿ ಭಕ್ತರ ಭೇಟಿ; ಆರ್ಥಿಕತೆಯಲ್ಲಿ ಐತಿಹಾಸಿಕ ಬದಲಾವಣೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2026, 7:06 IST
Last Updated 18 ಫೆಬ್ರುವರಿ 2026, 7:06 IST
   

ಲಖನೌ: ರಾಮ ಮಂದಿರ ಪ್ರತಿಷ್ಠಾಪನೆಯ ನಂತರ ಅಯೋಧ್ಯೆಯ ಆರ್ಥಿಕತೆಯು ಐತಿಹಾಸಿಕ ಬದಲಾವಣೆಗೆ ಸಾಕ್ಷಿಯಾಗಿದೆ. ಮೊದಲ ಆರು ತಿಂಗಳಲ್ಲಿ 11 ಕೋಟಿ ಭಕ್ತರು ಭೇಟಿ ನೀಡಿದ್ದು, ಸ್ಥಳೀಯ ವ್ಯಾಪಾರಿಗಳ ಆದಾಯದಲ್ಲಿ ಐದು ಪಟ್ಟು ಏರಿಕೆಯಾಗಿದೆ ಎಂದು ವರದಿಯೊಂದು ಹೇಳಿದೆ.

'ಅಯೋಧ್ಯೆಯ ಆರ್ಥಿಕ ಪುನರುಜ್ಜೀವನ: ಶ್ರೀ ರಾಮ ಮಂದಿರ ಕುರಿತಾದ ಒಂದು ಅಧ್ಯಯನ' (The Economic Renaissance of Ayodhya, India: A Case Study on Sri Ram Mandir) ಎಂಬ ಶೀರ್ಷಿಕೆಯಡಿ 'ಭಾರತೀಯ ನಿರ್ವಹಣಾ ಸಂಸ್ಥೆ -ಲಖನೌ'(IIM-L) ಅಧ್ಯಯನ ನಡೆಸಿದೆ. ಇದರಲ್ಲಿ ರಾಮ ಮಂದಿರ ನಿರ್ಮಾಣದ ಮೊದಲು ಮತ್ತು ನಂತರ ಅಯೋಧ್ಯೆಯ ಆರ್ಥಿಕ ಪರಿಸ್ಥಿತಿಯನ್ನು ತುಲನಾತ್ಮಕ ವಿಶ್ಲೇಷಣೆ ನಡೆಸಿದೆ.

ವ್ಯಾಪಾರಿಗಳ ಆದಾಯ ಐದು ಪಟ್ಟು ಏರಿಕೆ

ರಾಮ ಮಂದಿರ ಪ್ರತಿಷ್ಠಾಪನೆಯ ಮೊದಲ ಆರು ತಿಂಗಳಲ್ಲಿ 11 ಕೋಟಿಗೂ ಹೆಚ್ಚು ಭಕ್ತರು ಅಯೋಧ್ಯೆಗೆ ಭೇಟಿ ನೀಡಿದ್ದಾರೆ. ಈ ಅವಧಿಯಲ್ಲಿ ಸ್ಥಳೀಯ ವ್ಯಾಪಾರಿಗಳ ಆದಾಯ ಐದು ಪಟ್ಟು ಹೆಚ್ಚಾಗಿದೆ ಎಂದು ಈ ಅಧ್ಯಯನದಲ್ಲಿ ಹೇಳಲಾಗಿದೆ.

ADVERTISEMENT

ರಿಯಲ್ ಎಸ್ಟೇಟ್ ಮೌಲ್ಯ ಶೇ25 ರಿಂದ 40ರಷ್ಟು ಏರಿಕೆ

ರಾಮ ಮಂದಿರದ ಸುತ್ತಮುತ್ತಲಿನ ಆಸ್ತಿಗಳ ಮೌಲ್ಯ ಐದರಿಂದ ಹತ್ತು ಪಟ್ಟು ಹೆಚ್ಚಾದರೆ, ರಿಯಲ್ ಎಸ್ಟೇಟ್ ದರ ಶೇ25 ರಿಂದ 40ರಷ್ಟು ಏರಿಕೆಯಾಗಿದೆ. ಅಯೋಧ್ಯೆಯಲ್ಲಿ 150ಕ್ಕೂ ಹೆಚ್ಚು ಹೊಸ ಹೋಟೆಲ್‌ಗಳು ಮತ್ತು ಹೋಂ-ಸ್ಟೇಗಳನ್ನು ನಿರ್ಮಿಸಲಾಗಿದೆ. ಆನ್‌ಲೈನ್ ಬುಕಿಂಗ್ ಶೇ 400ರಷ್ಟು ಏರಿಕೆಯಾಗಿದೆ ಎಂದೂ ಅಧ್ಯಯನವು ಉಲ್ಲೇಖಿಸಿದೆ.

ಪ್ರವಾಸೋದ್ಯಮ ಸಂಬಂಧಿತ ಚಟುವಟಿಕೆಗಳಿಂದ ಬರುವ ತೆರಿಗೆ ಆದಾಯ ₹20,000-24,000ಕೋಟಿ ಇರಬಹುದೆಂದು ಅಧ್ಯಯನ ತಿಳಿಸಿದೆ. ಆತಿಥ್ಯ, ನಿರ್ಮಾಣ, ಸಾರಿಗೆ ಮತ್ತು ಸೇವಾ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳು ತೀವ್ರವಾಗಿ ಹೆಚ್ಚಿವೆ ಎಂದು ಅದು ಹೇಳಿದೆ.

1.2 ಲಕ್ಷ ಉದ್ಯೋಗ ಸೃಷ್ಟಿ

ಅಧ್ಯಯನದ ಪ್ರಕಾರ, ಪ್ರತಿದಿನ ಎರಡು ಲಕ್ಷ ಭಕ್ತರು ಅಯೋಧ್ಯೆಗೆ ಭೇಟಿ ನೀಡುತ್ತಾರೆ. ಮುಂದಿನ 4-5 ವರ್ಷಗಳಲ್ಲಿ ಆತಿಥ್ಯ, ಸಾರಿಗೆ, ಪ್ರವಾಸೋದ್ಯಮ ಮತ್ತು ಸಂಬಂಧಿತ ವಲಯಗಳಲ್ಲಿ ಸುಮಾರು 1.2 ಲಕ್ಷ ನೇರ ಮತ್ತು ಪರೋಕ್ಷ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದೂ ಅಧ್ಯಯನದ ವರದಿಯಲ್ಲಿ ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.