
ಟೌನ್ಶಿಪ್ನ ಪಕ್ಷಿನೋಟ
ಕೃಪೆ: ವೆಬ್ಸೈಟ್
ತಿರುವನಂತಪುರ: ವಯನಾಡ್ ಭೂಕುಸಿತ ದುರಂತದ ಸಂತ್ರಸ್ತರಿಗೆ ಪುನರ್ವಸತಿ ಯೋಜನೆಯಡಿ ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಮೊದಲನೇ ಹಂತವಾಗಿ ಮಾರ್ಚ್ 1ರಂದು 178 ಮನೆಗಳನ್ನು ಸರ್ಕಾರ ಹಸ್ತಾಂತರ ಮಾಡಿದೆ.
2024ರ ಜುಲೈನಲ್ಲಿ ವಯನಾಡ್ನ ಮೇಪ್ಪಾಡಿ ಪಂಚಾಯತ್ನ ಮುಂಡಕ್ಕೈ ಮತ್ತು ಚೂರಲ್ಮಲ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದ್ದರಿಂದ 350ಕ್ಕೂ ಅಧಿಕ ಮೆನೆಗಳು ಕೊಚ್ಚಿಹೋಗಿದ್ದವು. ಸಂತ್ರಸ್ತ ಕುಟುಂಬಗಳಿಗೆ ಕಲ್ಪೆಟ್ಟ ಬೈಪಾಸ್ ಬಳಿಯ ಎಲ್ಸ್ಟನ್ ಎಸ್ಟೇಟ್ ಪ್ರದೇಶದಲ್ಲಿ ‘ಟೌನ್ಶಿಪ್’ ನಿರ್ಮಿಸಲಾಗುತ್ತಿದೆ.
ಸಂತ್ರಸ್ತರಿಗೆ ಸರ್ಕಾರ ನಿರ್ಮಿಸಿರುವ ಮನೆ
64.4 ಎಕರೆ ಪ್ರದೇಶದಲ್ಲಿ ₹351 ಕೋಟಿ ವೆಚ್ಚದಲ್ಲಿ 400ಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಲಾಗುತ್ತಿದೆ. ಮಾರ್ಚ್ 1ರಂದು 178 ಮನೆಗಳನ್ನು ಹಸ್ತಾಂತರಿಸಲಾಗಿದ್ದು, ಶೀಘ್ರವೇ ಉಳಿದ ಮನೆಗಳು ಸಿದ್ಧವಾಗಲಿವೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಈ ಟೌನ್ಶಿಪ್ನಲ್ಲಿ 410 ಮನೆಗಳು ಬರಲಿದ್ದು, ಸಂತ್ರಸ್ತರಿಗೆ ಗೌರವಯುತ ಜೀವನ ನಡೆಸಲು ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಒಳಗೊಂಡಿರುತ್ತವೆ ಎಂದು ಅವರು ತಿಳಿಸಿದ್ದಾರೆ.
ಟೌನ್ಶಿಪ್ನ ನೋಟ
ಮೊದಲ ಹಂತದಲ್ಲಿ 178 ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಅವುಗಳನ್ನು ಹಂಚಿಕೆ ಮಾಡಲಾಗಿದೆ. ಪ್ರತಿ ಮನೆಯು 1,000 ಚದರ ಅಡಿ ವಿಸ್ತೀರ್ಣ ಹೊಂದಿದ್ದು, 7 ಸೆಂಟ್ ಜಮೀನಿನಲ್ಲಿ ನಿರ್ಮಿಸಲಾಗಿದೆ. ಈ ಮನೆ ಮತ್ತು ಜಮೀನಿನ ಮಾಲೀಕತ್ವವನ್ನು ಫಲಾನುಭವಿಗಳಿಗೆ ನೀಡಲಾಗಿದೆ.
ಪ್ರತಿ ಮನೆಗಳಲ್ಲಿ ಒಂದು ಮಾಸ್ಟರ್ ಸಹಿತ 3 ಬೆಡ್ರೂಂಗಳು, ಒಂದು ಹಾಲ್, ಅಡುಗೆ ಕೋಣೆ ಅದಕ್ಕೆ ಹೊಂದಿಕೊಂಡಂತೆ ಸ್ಟೋರ್ ರೂಂ, ಶೌಚಾಲಯ, ಸಿಟ್ಔಟ್ ಒಳಗೊಂಡಿದೆ. ಭವಿಷ್ಯದಲ್ಲಿ ಎರಡನೇ ಮಹಡಿ ನಿರ್ಮಿಸಲು ಅನುಕೂಲವಾಗುವಂತೆ ಈ ಮನೆಗಳ ಅಡಿಪಾಯವನ್ನು ಬಲಪಡಿಸಲಾಗಿದೆ.
ಮಾ.1ರಂದು ಹಸ್ತಾಂತರಿಸಲಾಗಿರುವ ಮನೆಗಳು
ಪ್ರತಿ ಮನೆಯಲ್ಲಿ ಹಾಸಿಗೆಗಳು, ಕಬೋರ್ಡ್ಗಳು, ಡೈನಿಂಗ್ ಟೇಬಲ್, ಕುರ್ಚಿಗಳು, ಎಲ್ಇಡಿ ಲೈಟಿಂಗ್ ಮತ್ತು ಇಂಧನ ದಕ್ಷತೆಯ ಬಿಎಲ್ಡಿಸಿ ಸೀಲಿಂಗ್ ಫ್ಯಾನ್ಗಳಿವೆ. ಅಲ್ಲದೆ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಡಿವೈಎಫ್ಐನಿಂದ ಎಲ್ಇಡಿ ಟಿವಿಗಳನ್ನು ವಿತರಿಸಲಾಗಿದೆ.
ಪ್ರತಿ ಮನೆಯ ಮೇಲ್ಛಾವಣಿಯಲ್ಲಿ ನೆಟ್-ಮೀಟರಿಂಗ್ ವ್ಯವಸ್ಥೆಯಡಿ 2 ಕಿಲೋವ್ಯಾಟ್ ಸೌರ ವಿದ್ಯುತ್ ಘಟಕವನ್ನು ಅಳವಡಿಸಲಾಗಿದೆ. ಇದರಿಂದ ವಿದ್ಯುತ್ ವೆಚ್ಚ ಕಡಿಮೆಯಾಗಲಿದೆ.
ಎರಡನೇ ಹಂತದಲ್ಲಿ ಉಳಿದ ಮನೆಗಳನ್ನು ನಿರ್ಮಿಸಲಾಗುತ್ತದೆ. ಇದರೊಂದಿಗೆ ಒಟ್ಟು 410 ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ. ಜತೆಗೆ ಮೂಲಸೌಕರ್ಯಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ.
ಉಳಿದ ವಸತಿ ಸಮುಚ್ಚಯ ಪೂರ್ಣಗೊಳಿಸುವುದು.
ಟೌನ್ಶಿಪ್ನೊಳಗೆ ಜನರಲ್ ಆಸ್ಪತ್ರೆ ಪ್ರಾರಂಭ.
ಅಂಗನವಾಡಿ ಕೇಂದ್ರ
ಸಾರ್ವಜನಿಕ ಮಾರುಕಟ್ಟೆ ಸಂಕೀರ್ಣ
ಗ್ರಂಥಾಲಯ, ಬಯಲು ರಂಗಮಂದಿರ, ಫುಟ್ಬಾಲ್ ಮೈದಾನ ಮತ್ತು ಸಮುದಾಯ ಭವನ.
ದುರಂತದಲ್ಲಿ ಮೃತಪಟ್ಟವರ ಸ್ಮರಣಾರ್ಥ ವಿಪತ್ತು ಸ್ಮಾರಕ ನಿರ್ಮಾಣ
ಜತೆಗೆ 9.5 ಲಕ್ಷ ಲೀಟರ್ ನೀರು ಸಂಗ್ರಹ ಸಾಮರ್ಥ್ಯದ ಕೊಳ, ಭೂಗತ ವಿದ್ಯುತ್ ವಿತರಣಾ ವ್ಯವಸ್ಥೆ ಮತ್ತು 10 ವಿಕೇಂದ್ರೀಕೃತ ಒಳಚರಂಡಿ ಸಂಸ್ಕರಣಾ ಘಟಕಗಳ ಸ್ಥಾಪನೆ ಸೇರಿವೆ.
555 ಸಂತ್ರಸ್ತ ಕುಟುಂಬಗಳ ₹18.75 ಕೋಟಿ ಬ್ಯಾಂಕ್ ಸಾಲವನ್ನು ರಾಜ್ಯ ಸರ್ಕಾರ ಮನ್ನಾ ಮಾಡಿದೆ.
ಹೊಸ ಮನೆಗೆ ಸ್ಥಳಾಂತರಕ್ಕೆ ಮೊದಲು, ಸಂತ್ರಸ್ತ ಕುಟುಂಬಗಳಿಗೆ ಮಾಸಿಕ ಬಾಡಿಗೆ ವೆಚ್ಚಕ್ಕಾಗಿ ₹6,000 ಮತ್ತು ಜೀವನ ನಿರ್ವಹಣೆಗಾಗಿ ₹18,000, ₹ 1 ಸಾವಿರ ಮೌಲ್ಯದ ಫುಡ್ ಕೂಪನ್ ನೀಡಲಾಗುತ್ತಿತ್ತು.
ನಿವಾಸಿಗಳು ವಾಸ್ತವ್ಯ ಆರಂಭಿಸಿದ ದಿನಾಂಕದಿಂದ ಮೂರು ತಿಂಗಳು ಕಾಲ ವಿದ್ಯುತ್ ಮತ್ತು ನೀರಿನ ಬಿಲ್ಗಳಿಂದ ವಿನಾಯಿತಿ ನೀಡಲಾಗಿದೆ.
ದುರಂತದ ಸಮಯದಲ್ಲಿ ದಾಖಲೆ ನಾಶವಾಗಿರುವುದರಿಂದ ಅವುಗಳ(ದಾಖಲೆಗಳ) ಮರು ವಿತರಣಾ ಶುಲ್ಕವನ್ನು ಮನ್ನಾ ಮಾಡಲಾಗಿದೆ.
ಫಲಾನುಭವಿಗಳಿಗೆ ಆಧಾರ್ ಕಾರ್ಡ್ಗಳು, ರೇಷನ್ ಕಾರ್ಡ್ಗಳು, ವೋಟರ್ ಐಡಿಗಳು ಮತ್ತು ಶೈಕ್ಷಣಿಕ ಪ್ರಮಾಣಪತ್ರಗಳನ್ನು ಮರು ವಿತರಿಸಲಾಗಿದೆ. ಪ್ರತಿಯೊಂದು ಕುಟುಂಬಕ್ಕೆ ಪಟ್ಟಾ (ಭೂ ದಾಖಲೆ) ಹಸ್ತಾಂತರಿಸಲಾಗಿದೆ. ಇದಕ್ಕೆ ತಗುಲುವ ವೆಚ್ಚವನ್ನು ಸರ್ಕಾರವೇ ಭರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.