ಕಾರವಾರ: ಕೋವಿಡ್ ಕಾರಣದಿಂದ ಲಾಕ್ಡೌನ್ ಆದ ಬಳಿಕ ಜಿಲ್ಲೆಯ ಆತಿಥ್ಯ ವಲಯಕ್ಕೆ ಬಹಳ ನಷ್ಟವಾಗಿದೆ. ಹಂತಹಂತವಾಗಿ ಪ್ರವಾಸೋದ್ಯಮ ಚಟುವಟಿಕೆಗಳು ಆರಂಭವಾದರೂ ಚೇತರಿಕೆ ಸಾಧ್ಯವಾಗಿಲ್ಲ. ಅದರಲ್ಲೂ ಪ್ರವಾಸಿಗರನ್ನೇ ನಂಬಿಕೊಂಡು ರೆಸಾರ್ಟ್, ಹೋಂ ಸ್ಟೇ ನಡೆಸುವವರ ಸ್ಥಿತಿಯಿನ್ನೂ ಸುಧಾರಿಸಿಲ್ಲ.
‘ರೆಸಾರ್ಟ್ ಹಾಗೂ ಹೋಂಸ್ಟೇ ಉದ್ಯಮಿಗಳಿಗೆ ಲಾಕ್ಡೌನ್ ಜೊತೆಗೇ ವಾರಾಂತ್ಯದ ಕರ್ಫ್ಯೂ ದೊಡ್ಡ ಹೊಡೆತ ನೀಡಿತ್ತು. ಪ್ರವಾಸಿಗರು ಭೇಟಿ ನೀಡುವ ಸಮಯದಲ್ಲೇ ಕಠಿಣ ನಿರ್ಬಂಧಗಳು ಜಾರಿಯಾದವು. ಇದರಿಂದ ಕೊಠಡಿಗಳನ್ನು ಮುಂಗಡ ಬುಕ್ಕಿಂಗ್ ಮಾಡಿದ್ದ ಪ್ರವಾಸಿಗರು ರದ್ದು ಮಾಡಿದರು. ಪರಿಣಾಮವಾಗಿ, ನಮ್ಮ ಸಿದ್ಧತೆಗಳೆಲ್ಲ ವ್ಯರ್ಥವಾದವು’ ಎನ್ನುತ್ತಾರೆ ದಾಂಡೇಲಿಯ ರೆಸಾರ್ಟ್ ಮಾಲೀಕರ ಸಂಘದ ಅಧ್ಯಕ್ಷ ವಿಷ್ಣುಮೂರ್ತಿ ರಾವ್.
‘ಹಲವಾರು ಮಂದಿ ಬ್ಯಾಂಕ್ಗಳಲ್ಲಿ ಸಾಲ ಮಾಡಿ ಉದ್ಯಮ ಆರಂಭಿಸಿದ್ದಾರೆ. ಅವರು ಕಂತುಗಳನ್ನು ಕಟ್ಟಲು ಪರದಾಡಿದರು. ಲಾಕ್ಡೌನ್ ಆಗಿದೆ ಎಂದು ಬ್ಯಾಂಕ್ ಸಾಲಗಳ ಮೇಲಿನ ಬಡ್ಡಿಯನ್ನು ಮನ್ನಾ ಮಾಡಿಲ್ಲ. ಮರು ಪಾವತಿಯ ಅವಧಿಯನ್ನು ಹೆಚ್ಚಿಸಿದರೇ ವಿನಾ ಬಡ್ಡಿ ಪಾವತಿಸಲೇಬೇಕಾಗಿದೆ. ಈ ಎಲ್ಲ ಕಾರಣಗಳಿಂದ, ಬಂಡವಾಳ ಹೂಡಿ ರೆಸಾರ್ಟ್, ಹೋಟೆಲ್ ಆರಂಭಿಸಿದವರು ಮುಂದೇನು ಎಂದು ದಿಕ್ಕು ತೋಚದ ಪರಿಸ್ಥಿತಿಯಲ್ಲಿದ್ದಾರೆ’ ಎಂದು ಬೇಸರಿಸುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.