ADVERTISEMENT

‘ಕರುನಾಡ ಸವಿಯೂಟ’: ನವರಾತ್ರಿ ಸಂಭ್ರಮಕ್ಕೆ ಕೊಬ್ಬರಿ ಸಕ್ಕರೆ ಹೋಳಿಗೆ, ಎರೆಯಪ್ಪ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2020, 19:30 IST
Last Updated 23 ಅಕ್ಟೋಬರ್ 2020, 19:30 IST
ಹೋಳಿಗೆ
ಹೋಳಿಗೆ   
""
""
""

ಪ್ರಜಾವಾಣಿ– ಡೆಕ್ಕನ್‌ ಹೆರಾಲ್ಡ್‌, ಫ್ರೀಡಂ ರಿಫೈನ್ಡ್‌ ಸನ್‌ಫ್ಲವರ್‌ ಆಯಿಲ್‌ ಸಹಯೋಗದೊಂದಿಗೆ ‘ಕರುನಾಡ ಸವಿಯೂಟ’ ವಿಶೇಷ ಅಡುಗೆ ವಿಡಿಯೊ ಸರಣಿಯ ಮೂರನೇ ವಾರದಲ್ಲಿ ಸೆಲೆಬ್ರಿಟಿ ಬಾಣಸಿಗ ಸಿಹಿಕಹಿ ಚಂದ್ರು ಕೊಬ್ಬರಿ ಸಕ್ಕರೆ ಹೋಳಿಗೆ ಹಾಗೂ ಇನ್ನೊಬ್ಬ ಶೆಫ್‌ ಸುಜಾತ ಎರೆಯಪ್ಪ ಮಾಡುವುದನ್ನು ತೋರಿಸಿಕೊಟ್ಟಿದ್ದಾರೆ. ವಿಡಿಯೊಗಾಗಿ ಬಿಟ್ಲಿ ಲಿಂಕ್: bit.ly/PVCuisines ನೋಡಿ.

ಕೊಬ್ಬರಿ ಸಕ್ಕರೆ ಹೋಳಿಗೆ

ಕೊಬ್ಬರಿ ಸಕ್ಕರೆ ಹೋಳಿಗೆ ಉತ್ತರಕರ್ನಾಟಕದ ಕಡೆ ಪರಿಚಿತ. ಇದನ್ನೇ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಕಾಯಿಹೋಳಿಗೆ ಎಂದು ಕರೆಯುತ್ತಾರೆ.

ADVERTISEMENT

ಬೇಕಾಗುವ ಸಾಮಗ್ರಿಗಳು: ಕೊಬ್ಬರಿ ತುರಿ – 1 ಕಪ್‌, (ತುರಿದು ಪುಡಿ ಮಾಡಿಕೊಂಡಿದ್ದು), ಸಕ್ಕರೆ – 1 ಕಪ್‌, ಮೈದಾಹಿಟ್ಟು – 1 ಕಪ್‌, ಚಿರೋಟಿ ರವೆ – 1 ಕಪ್‌, ಏಲಕ್ಕಿ ಪುಡಿ – ಸ್ವಲ್ಪ, ಜಾಯಿಕಾಯಿ ಪುಡಿ – 1/4 ಚಮಚ, ತುಪ್ಪ – 2 ಟೇಬಲ್ ಚಮಚ, ಉಪ್ಪು – ರುಚಿಗೆ, ಹಾಲು – 1/4 ಕಪ್‌, ಅಕ್ಕಿಹಿಟ್ಟು – ಸ್ವಲ್ಪ, ಎಣ್ಣೆ – ಸ್ವಲ್ಪ

ತಯಾರಿಸುವ ವಿಧಾನ: ಪಾತ್ರೆಯೊಂದರಲ್ಲಿ ಮೈದಾಹಿಟ್ಟು, ಚಿರೋಟಿ ರವೆ, ಚಿಟಿಕೆ ಉಪ್ಪು, ಅರ್ಧ ಚಮಚ

ಸಿಹಿಕಹಿ ಚಂದ್ರು

ತುಪ್ಪ ಹಾಗೂ ಸ್ವಲ್ಪ ಸ್ವಲ್ಪ ಬಿಸಿನೀರು ಸೇರಿಸಿ ಕಣಕ ತಯಾರಿಸಿಕೊಳ್ಳಿ. ಅದನ್ನು ಅರ್ಧಗಂಟೆ ಮುಚ್ಚಿಡಿ.

ಹೂರಣಕ್ಕೆ: ಸಕ್ಕರೆಯನ್ನು ನುಣ್ಣಗೆ ಪುಡಿ ಮಾಡಿಕೊಂಡು ಬೌಲ್‌ಗೆ ಹಾಕಿಕೊಳ್ಳಿ. ಸಕ್ಕರೆ ಕೊಬ್ಬರಿ ತುರಿ, ಏಲಕ್ಕಿ ಪುಡಿ, ಜಾಯಿಕಾಯಿ ಪುಡಿ ಸೇರಿಸಿ ಕಲೆಸಿ. ಇನ್ನೊಂದು ಪಾತ್ರೆಯಲ್ಲಿ 2 ಚಮಚ ಮೈದಾಹಿಟ್ಟನ್ನು ಹುರಿದುಕೊಂಡು ಅದಕ್ಕೆ ಸೇರಿಸಿ ಕಲೆಸಿ. ಪುನಃ ಪಾನ್‌ ಬಿಸಿ ಮಾಡಿಕೊಂಡು 2 ಚಮಚ ತುಪ್ಪ ಹಾಕಿ ಕರಗಿಸಿ ಸಕ್ಕರೆ, ಕೊಬ್ಬರಿ ಮಿಶ್ರಣಕ್ಕೆ ಕಲೆಸಿ. ಸ್ವಲ್ಪ ಹಾಲು ಸೇರಿಸಿ ಉಂಡೆ ಕಟ್ಟಿಕೊಳ್ಳಿ.

ಅರ್ಧಗಂಟೆಯಾದ ಮೇಲೆ ತಯಾರಿಸಿಕೊಂಡ ಕಣಕಕ್ಕೆ ನೀರು ಚಿಮುಕಿಸಿ ನಾದಿಕೊಳ್ಳಿ. ಮತ್ತೆ 15 ನಿಮಿಷ ಹಾಗೆ ಬಿಡಿ. ಕಣಕಕ್ಕೆ ಒಂದು ಚಮಚ ಎಣ್ಣೆ ಹಾಕಿ ಮತ್ತೆ ನಾದಿಕೊಂಡು 2 ನಿಮಿಷ ಬಿಡಿ. ಕಣಕದಿಂದ ಉಂಡೆ ತಯಾರಿಸಿ ಅಂಗೈ ಗಾತ್ರಕ್ಕೆ ತಟ್ಟಿಕೊಂಡು ಅದರ ಒಳಗೆ ಹೂರಣದ ಉಂಡೆ ಇಟ್ಟು ಸುತ್ತಲೂ ಮಡಿಸಿ ಎಣ್ಣೆಯಲ್ಲಿ ನೆನೆಯಲು ಬಿಡಿ. ನಂತರ ಲಟ್ಟಿಸಿಕೊಂಡು ಹೆಂಚು ಕಾದ ಮೇಲೆ ಎರಡೂ ಕಡೆ ಕಾಯಿಸಿ.

ರೆಸಿಪಿ: ಸಿಹಿಕಹಿ ಚಂದ್ರು

***

ಎರೆಯಪ್ಪ

ಎರೆಯಪ್ಪ

ಮಲೆನಾಡು ಮತ್ತು ಕರಾವಳಿ ಹಾಗೇ ಬೆಂಗಳೂರಿನಲ್ಲಿ ಮಾಡುವ ಈ ಸಿಹಿಯಾದ ತಿನಿಸನ್ನು ಹಬ್ಬಗಳಲ್ಲಿ ಮಾಡುವುದು ಜಾಸ್ತಿ. ಮಲೆನಾಡಿನಲ್ಲಿ ನವರಾತ್ರಿಯಲ್ಲಿ ಒಂದು ದಿನ ಮಾಡುವುದು ಸಂಪ್ರದಾಯ.

ಸುಜಾತ

ಬೇಕಾಗುವ ಸಾಮಗ್ರಿಗಳು: ಬೆಲ್ಲ – 1 ಕಪ್‌, ಅವಲಕ್ಕಿ – 1/4 ಕಪ್‌ (ಅರ್ಧ ಗಂಟೆ ನೆನೆಸಿಟ್ಟುಕೊಂಡಿದ್ದು), ಅಕ್ಕಿ – 1/2 ಕೆ.ಜಿ. (4 ಗಂಟೆ ನೆನೆಸಿದ್ದು), ಏಲಕ್ಕಿ ಪುಡಿ – ಚಿಟಿಕೆ, ಕಳಿತ ಬಾಳೆಹಣ್ಣು – 2, ತೆಂಗಿನತುರಿ – 1 ಕಪ್‌

ತಯಾರಿಸುವ ವಿಧಾನ: ನೆನೆಸಿಟ್ಟ ಅಕ್ಕಿ, ಅವಲಕ್ಕಿ, ತೆಂಗಿನತುರಿ, ಏಲಕ್ಕಿ ಪುಡಿ, ಬಾಳೆಹಣ್ಣು, ಬೆಲ್ಲ ಸೇರಿಸಿ ನೀರು ಸೇರಿಸದೆ ರುಬ್ಬಿಕೊಳ್ಳಿ, ರುಬ್ಬಿಕೊಂಡ ಹಿಟ್ಟು ಇಡ್ಲಿ ಹಿಟ್ಟಿನ ಹದಕ್ಕೆ ಇರಲಿ. ಅಗಲ ಪಾನ್‌ವೊಂದರಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ. ಬಳಿಕ ಒಂದೊಂದೇ ಚಮಚ ಹಿಟ್ಟನ್ನು ಎಣ್ಣೆಗೆ ಬಿಡಿ. ಅದಾಗಿಯೇ ಕಾದು ಮೇಲೆ ಬರುವವರೆಗೂ ಅಲುಗಾಡಿಸಬೇಡಿ. ಒಂದು ಕಡೆ ಕಾದ ಮೇಲೆ ಇನ್ನೊಂದು ಕಡೆ ತಿರುಗಿಸಿ ಬೇಯಿಸಿ.

ರೆಸಿಪಿ: ಸುಜಾತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.