ADVERTISEMENT

ಮಧುಮೇಹಿಗಳಿಗೆ ವಿಶಿಷ್ಟ ಪಾದ‘ರಕ್ಷೆ’

ಐಐಎಸ್‌ಸಿ ಮತ್ತು ಕೆಐಇಆರ್‌ನಿಂದ 3 ಡಿ ಮುದ್ರಿತ ಚಪ್ಪಲಿ ಅಭಿವೃದ್ಧಿ

​ಪ್ರಜಾವಾಣಿ ವಾರ್ತೆ
Published 13 ಜೂನ್ 2022, 20:00 IST
Last Updated 13 ಜೂನ್ 2022, 20:00 IST
   

ಬೆಂಗಳೂರು: ನೀವು ಮಧುಮೇಹಿಗಳೇ, ನೀವು ನಡೆಯುವಾಗ ಪಾದಗಳಿಗೆ ಯಾವುದೇ ಸಂವೇದನೆಯೇ ಇಲ್ಲದೇ ಸಮತೋಲನ ಕಳೆದುಕೊಳ್ಳುತ್ತಿದ್ದೀರೇ? ಪಾದಗಳಿಗೆ ಗಾಯವಾಗಿ ರಕ್ತ ಸುರಿದರೂ ಗಮನಕ್ಕೆ ಬರುವುದಿಲ್ಲವೇ?

ಹಾಗಿದ್ದರೆ, ಇನ್ನು ಮುಂದೆ ಹೆಚ್ಚು ಚಿಂತಿಸಬೇಕಾಗಿಲ್ಲ. ಏಕೆಂದರೆ, ಪಾದಗಳಿಗೆ ಹೆಚ್ಚಿನ ಸುರಕ್ಷತೆ ನೀಡುವ ಉದ್ದೇಶದಿಂದ ನಗರದ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಮೆಕ್ಯಾನಿಕಲ್ ಎಂಜಿನಿಯರಿಂಗ್‌ ವಿಭಾಗ ವಿಶಿಷ್ಟ ಪಾದರಕ್ಷೆಯನ್ನು ಅಭಿವೃದ್ಧಿಪಡಿಸಿದೆ.

ಮಧುಮೇಹಿಗಳಿಗಾಗಿ ಮಾರುಕಟ್ಟೆಯಲ್ಲಿ ಈಗ ಲಭ್ಯವಿರುವ ಡಯಾಬಿಟಿಕ್ ಪಾದರಕ್ಷೆಗಿಂತ ಇದು ಭಿನ್ನವಾದುದು. ಈ ಪಾದರಕ್ಷೆಗಳು ವ್ಯಕ್ತಿಯ ದೇಹದ ಸಮತೋಲನವನ್ನು ಕಾಪಾಡುವುದರ ಜತೆಗೆ, ಪಾದಗಳಿಗೆ ಆದ ಗಾಯ ಬೇಗನೆ ವಾಸಿಯಾಗಲು ನೆರವಾಗುತ್ತದೆ ಮತ್ತು ಪಾದಗಳಲ್ಲಿ ಇತರ ಕಡೆ ಗಾಯವಾಗುವುದನ್ನು ತಡೆಗಟ್ಟುವ ಸ್ವಯಂ ನಿಯಂತ್ರಿತ ಚಿಕಿತ್ಸಕ ಗುಣವನ್ನೂ ಹೊಂದಿದೆ. ಕರ್ನಾಟಕ ಮಧುಮೇಹ ಸಂಸ್ಥೆಯ ಜತೆ ಸೇರಿ ಐಐಎಸ್‌ಸಿ ಪಾದರಕ್ಷೆಯನ್ನು ಅಭಿವೃದ್ಧಿಪಡಿಸಿದೆ.

ADVERTISEMENT

ಮಧುಮೇಹಿಗಳ ಪಾದಗಳಿಗೆ ಗಾಯಗಳಾದರೆ, ಅವು ವಾಸಿಯಾಗಲು ಸಾಕಷ್ಟು ಸಮಯ ಹಿಡಿಯುತ್ತದೆ. ಆರೋಗ್ಯವಂತ ವ್ಯಕ್ತಿಯಲ್ಲಿ ಗಾಯಬೇಗನೇ ವಾಸಿಯಾಗುತ್ತದೆ. ಗಾಯ ಒಣಗಲು ತಡವಾದಷ್ಟು ರೋಗಿ ಸೋಂಕಿಗೆ ಒಳಗಾಗುವ ಸಾಧ್ಯತೆಯೂ ಹೆಚ್ಚು. ಇದರಿಂದ ಆರೋಗ್ಯ ಮತ್ತಷ್ಟು ಬಿಗಡಾಯಿಸುತ್ತದೆ. ಕೆಲವು ಪ್ರಕರಣಗಳಲ್ಲಿ ಬೆರಳು, ಪಾದ ಅಥವಾ ಕಾಲು ಕತ್ತರಿಸುವ ಅನಿವಾರ್ಯತೆಯೂ ಬರುತ್ತದೆ.

ಇವೆಲ್ಲ ಸಮಸ್ಯೆಗಳನ್ನು ನಿಭಾಯಿಸಲು ವಿಜ್ಞಾನಿಗಳ ತಂಡಮಧುಮೇಹಿ ವ್ಯಕ್ತಿಯ ನಡಿಗೆಯ ಶೈಲಿ, ಪಾದಗಳ ಅಳತೆ ಮತ್ತು ಆಕಾರಕ್ಕೆ ತಕ್ಕಂತೆ3 ಡಿ ಪ್ರಿಂಟೆಡ್‌ ಪಾದರಕ್ಷೆಗಳನ್ನು ವಿನ್ಯಾಸಗೊಳಿಸಲಾಗಿದೆ. ಸಾಂಪ್ರದಾಯಿಕ ಚಿಕಿತ್ಸಕ ಪಾದರಕ್ಷೆಗಳಿಗಿಂತ ಇವು ಭಿನ್ನ. ‘‘ಸ್ವಯಂ ಆಫ್‌ಲೋಡ್‌ ಇನ್‌ಸೋಲ್‌ ಹೊಂದಿರುವ ಸ್ನ್ಯಾಪಿಂಗ್‌ ಯಾಂತ್ರಿಕ ಕೌಶಲವನ್ನು ಈ ಪಾದರಕ್ಷೆ ಒಳಗೊಂಡಿದೆ. ಇದರಿಂದಾಗಿ ವ್ಯಕ್ತಿ ನಡೆಯುವಾಗ ಸಂಪೂರ್ಣ ಸಮತೋಲನ ಪಡೆಯುತ್ತಾನೆ. ಪಾದಗಳಲ್ಲಿ ಗಾಯವಾಗಿದ್ದರೂ ಬೇಗನೆ ಗುಣವಾಗುತ್ತದೆ, ಪಾದಗಳ ಇತರ ಭಾಗದಲ್ಲಿ ಗಾಯವಾಗುವುದನ್ನೂ ತಡೆಯುತ್ತದೆ’ ಎನ್ನುತ್ತಾರೆ ಕರ್ನಾಟಕ ಮಧುಮೇಹ ಸಂಸ್ಥೆಯ ಪಾದಗಳ ವಿಭಾಗದ ಮುಖ್ಯಸ್ಥ ಪವನ್ಬಿಳೇಹಳ್ಳಿ.

ಡಯಾಬಿಟಿಕ್‌ ಪೆರಿಫೆರಲ್‌ ನ್ಯೂರೋಪತಿ ಅಂದರೆ, ಮಧುಮೇಹಿಯ ಪಾದಗಳ ಹೊರಭಾಗದ ನರಗಳಿಗೆ ಹಾನಿಯಾಗಿದ್ದರೆ, ಅಂತಹ ವ್ಯಕ್ತಿಗಳ ಪಾದಗಳ ಸಂವೇದನೆಯೇ ನಷ್ಟವಾಗಿರುತ್ತದೆ. ಗಾಯವಾಗಿ ರಕ್ತ ಸ್ರಾವವಾದರೂ ಅವರ ಗಮನಕ್ಕೇ ಬರುವುದಿಲ್ಲ. ಇಂತಹ ವ್ಯಕ್ತಿಗಳಿಗೆ ಈ ಪಾದರಕ್ಷೆಗಳು ಹೆಚ್ಚಿನ ಉಪಯೋಗ ಆಗುತ್ತವೆ.

ಪಾದಗಳ ಮೇಲೆ ಸಮಾನ ಒತ್ತಡ ಹಂಚಿಕೆ: ಪಾದಗಳು ಕ್ರಮೇಣ ಸಂವೇದನಾ ರಹಿತವಾಗುವುದರಿಂದ ನಡಿಗೆಯಲ್ಲೂ ವ್ಯತ್ಯಯವಾಗುತ್ತದೆ. ಆರೋಗ್ಯವಂತ ವ್ಯಕ್ತಿ ಸಾಮಾನ್ಯವಾಗಿ ಮೊದಲಿಗೆ ತನ್ನ ಹಿಮ್ಮಡಿಯನ್ನು ನೆಲದ ಮೇಲೆ ಊರುತ್ತಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.