
ಪ್ರಾತಿನಿಧಿಕ ಚಿತ್ರ
ವರ್ಷಾಂತ್ಯ ಸಮೀಪಿಸುತ್ತಿದೆ. ಬಹುತೇಕರು ರಜಾ ದಿನಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಾಕಿಕೊಂಡು, ಔತಣಕೂಟಗಳನ್ನು ನಡೆಸುವ ಸಾಧ್ಯತೆ ಇರುತ್ತದೆ. ಈ ಸಮಯದಲ್ಲಿ ನಮ್ಮ ಜೀರ್ಣಾಂಗ ವ್ಯವಸ್ಥೆ ಮೇಲೆ ಒತ್ತಡ ಉಂಟಾಗುವ ಸಾಧ್ಯತೆ ಇದೆ.
ಅತಿಯಾದ ಆಹಾರ ಸೇವನೆಯಿಂದ ಕರುಳಿನಲ್ಲಿ ಉರಿಯೂತ, ಒತ್ತಡ ಉಂಟಾಗಬಹುದು ಮತ್ತು ಗಂಭೀರ ಜೀರ್ಣಕ್ರೀಯೆಯ ಸಮಸ್ಯೆ ಎದುರಾಗಬಹುದು. ಸಾಮಾನ್ಯವಾಗಿ ನಾವು ಇಂತಹ ಸಮಸ್ಯೆಯನ್ನು ಕಡೆಗಣಿಸಿ ಬಿಡುತ್ತೇವೆ. ಆರೋಗ್ಯಕರ ಕರುಳು ಆಹಾರವನ್ನು ತಕ್ಷಣ ಯಾವುದೇ ಅಡೆತಡೆಯಿಲ್ಲದೆ ಜೀರ್ಣ ಮಾಡುವುದಕ್ಕಿಂತಲೂ ಹೆಚ್ಚಿನ ಪಾತ್ರ ವಹಿಸುತ್ತದೆ.
ಕರುಳಿನೊಳಗೆ ಜೀರ್ಣಾಂಗವ್ಯೂಹದ ಸಂಕೀರ್ಣ ವ್ಯವಸ್ಥೆ ಇದ್ದು, ಈ ವ್ಯವಸ್ಥೆ ಒಟ್ಟಾರೆ ಆರೋಗ್ಯಕ್ಕೆ ಸಂಬಂಧಿಸಿದ್ದಾಗಿದೆ. ಹಾಗಾಗಿ ನಿಮ್ಮ ಕರುಳಿನ ಆರೋಗ್ಯವು ನೇರವಾಗಿ ನಿಮ್ಮ ರೋಗನಿರೋಧಕ ಶಕ್ತಿಗೆ ಸಂಬಂಧಿಸಿರುತ್ತದೆ. ಸುಮಾರು ಶೇ 70ರಷ್ಟು ರೋಗನಿರೋಧಕ ವ್ಯವಸ್ಥೆಯು ಕರುಳು ಸಂಬಂಧಿತ ಲಿಂಫಾಯ್ಡ್ ಟಿಶ್ಯೂ (ಜಿಎಎಲ್ಟಿ)ದಲ್ಲಿ ಇರುತ್ತದೆ.
ಸಂಸ್ಕರಿತ ಸಕ್ಕರೆ ಮತ್ತು ಅನಿಯಮಿತ ಊಟದ ಸಮಯದಿಂದಾಗಿ ಜೀರ್ಣಾಂಗದಲ್ಲಿ ಅತಿಯಾದ ಒತ್ತಡ ಉಂಟಾಗಿ, ಅದರಿಂದ ಸೀಸನಲ್ ಸೋಂಕುಗಳನ್ನು ತಡೆಗಟ್ಟುವ ದೇಹದ ಸಾಮರ್ಥ್ಯ ಕಡಿಮೆಯಾಗಬಹುದು.
ಆರೋಗ್ಯಕರ ಕರುಳಿನಲ್ಲಿ ಟ್ರಿಲಿಯನ್ಗಳಷ್ಟು ಪ್ರಮಾಣದ ವೈವಿಧ್ಯಮಯ ಮತ್ತು ಸಮತೋಲಿತ ಸೂಕ್ಷ್ಮಾಣುಗಳ ಸಮುದಾಯ (ಗಟ್ ಮೈಕ್ರೋಬಯೋಟಾ) ಇರುತ್ತವೆ. ಗಟ್ ಮೈಕ್ರೋಬಯೋಮ್ ಸಮತೋಲನವನ್ನು ಯೂಬಯೋಸಿಸ್ ಎಂದು ಕರೆಯುತ್ತಾರೆ. ಇದರರ್ಥ ಲ್ಯಾಕ್ಟೋಬ್ಯಾಸಿಲಸ್ ಮತ್ತು ಬೈಫಿಡೋಬ್ಯಾಕ್ಟೀರಿಯಂದಂತಹ ಉತ್ತಮ ಬ್ಯಾಕ್ಟೀರಿಯಾಗಳು ಹೆಚ್ಚು ಪ್ರಮಾಣದಲ್ಲಿ ಇರುತ್ತವೆ. ಇವು ಕೆಟ್ಟ (ಪ್ಯಾಥೋಜೆನಿಕ್) ಸೂಕ್ಷ್ಮಾಣುಗಳನ್ನು ನಿಯಂತ್ರಣದಲ್ಲಿ ಇರಿಸುತ್ತವೆ. ಪೌಷ್ಟಿಕ ಆಹಾರಗಳ ಸೇವನೆ ಮತ್ತು ಉತ್ತಮ ಜೀವನಶೈಲಿ ಪಾಲಿಸುವುದರಿಂದ ಇದು ಸಾಧ್ಯವಾಗುತ್ತದೆ.
ಕರುಳಿನ ಆರೋಗ್ಯಕ್ಕೆ ಯಾವುದೇ ಹಾನಿಯಾಗದಂತೆ ಸುರಕ್ಷಿತವಾಗಿ ಹೊಸ ವರ್ಷದ ಸಂಭ್ರಮಾಚರಣೆ ಮಾಡುವುದರಿಂದ ನಿಮಗೆ ಈ ರಜಾದಿನಗಳು ಇನ್ನಷ್ಟು ಆನಂದದಾಯಕವಾಗಿರಲಿದೆ. ಇದರಿಂದ ಊತ, ಆಸಿಡಿಟಿ ಅಥವಾ ಊಟದ ನಂತರದ ಆಲಸ್ಯ ಇಲ್ಲದೆ ಆನಂದಿಸಬಹುದು.
ಕರುಳಿನ ಪ್ರೋಟೋಕಾಲ್ ಪಾಲಿಸಿ
ಉತ್ತಮ ಜೀರ್ಣಕ್ರಿಯೆ ಮೂಲಕ ಕರುಳಿನ ಆರೋಗ್ಯ ಕಾಪಾಡಿಕೊಳ್ಳಲು ಊಟ ಬಿಡಬಾರದು ಬದಲಿಗೆ ಕಡಿಮೆ ಕ್ಯಾಲೊರಿ ಇರುವ ಆಹಾರಗಳನ್ನು ಸೇವಿಸುವುದು ಉತ್ತಮ.
ನೀವು ಹಸಿದುಕೊಂಡು ಪಾರ್ಟಿಗೆ ಹೋದರೆ, ವೇಗವಾಗಿ ತಿನ್ನುತ್ತೀರಿ ಮತ್ತು ಕ್ಯಾಲೊರಿ ಹೆಚ್ಚಿರುವ ಆಹಾರಗಳನ್ನು ಅತಿಯಾಗಿ ಸೇವಿಸುತ್ತೀರಿ. ಇದು ಜೀರ್ಣ ವ್ಯವಸ್ಥೆಗೆ ಒತ್ತಡ ಉಂಟು ಮಾಡುತ್ತದೆ.
ಪ್ರೋಟಿನ್ ಯುಕ್ತ ಆಹಾರ
ಅದರ ಬದಲು ಪ್ರೀ-ಲೋಡ್ ತಂತ್ರ ಅನುಸರಿಸಿ. ಪಾರ್ಟಿಗೆ ಒಂದು ಗಂಟೆ ಮೊದಲು ಸ್ವಲ್ಪ ಪ್ರಮಾಣದ ಪ್ರೋಟೀನ್ ಯುಕ್ತ ತಿಂಡಿ ತಿನ್ನಿ. ಉದಾಹರಣೆಗೆ, ಒಂದು ಹಿಡಿ ಬಾದಾಮಿ, ಬೇಯಿಸಿದ ಮೊಟ್ಟೆ ಅಥವಾ ಮೊಸರು. ಆ ಮೂಲಕ ಹಸಿವನ್ನು ನಿಯಂತ್ರಿಸಬಹುದು. ಪಾರ್ಟಿಯಲ್ಲಿನ ಅಧಿಕ ಕ್ಯಾಲರಿ ಆಹಾರಗಳ ಸೇವನೆಯನ್ನು ಇದು ಕಡಿಮೆ ಮಾಡಿ ಕರುಳಿಗೆ ಒತ್ತಡ ಬೀರದಂತೆ ತಡೆಯುತ್ತದೆ.
ಅಧಿಕ ನೀರು ಸೇವನೆ
ಆರೋಗ್ಯಕರ ಆಹಾರದ ಜೊತೆಗೆ, ಮಲಬದ್ಧತೆ ಮತ್ತು ಊತವನ್ನು ತಡೆಗಟ್ಟಲು ಕರುಳಿಗೆ ಸಾಕಷ್ಟು ಪ್ರಮಾಣದ ನೀರಿನ ಅಗತ್ಯವಿರುತ್ತದೆ. ಪಾರ್ಟಿಗೆ ಮೊದಲ ದಿನವೇ ಸೋಂಪ್ ಅಥವಾ ಪುದೀನಾ ನೀರನ್ನು ಕುಡಿಯಿರಿ. ಇವು ನೈಸರ್ಗಿಕ ಕಾರ್ಮಿನೇಟಿವ್ಗಳಾಗಿದ್ದು, ಅತಿಯಾಗಿ ತಿಂದಾಗ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತವೆ.
ಸಮತೋಲನದ ಕಲೆ
ಪ್ರತಿದಿನ ಸಮತೋಲಿತ ಊಟ ಸೇವನೆ ಒಳ್ಳೆಯದು. ಅದರಲ್ಲೂ ಪಾರ್ಟಿ ಅಥವಾ ರಜಾ ದಿನಗಳಲ್ಲಿ ಇದು ಬಹಳ ಮುಖ್ಯ. ಆಹಾರವನ್ನು ಸಮತೋಲನ ಆಹಾರ ಸೇವನೆ ಮುಖ್ಯ. ಕರಿದ ತಿಂಡಿಗಳು ಅಥವಾ ಸಿಹಿ ಪದಾರ್ಥಗಳ ಸೇವನೆ ಕಡಿಮೆ ಮಾಡಿ.
ಊಟಕ್ಕೆ ಕೈ ಹಾಕುವ ಮೊದಲು ತಟ್ಟೆಯಲ್ಲಿ ಫೈಬರ್ ಅಧಿಕವಿರುವ ಪದಾರ್ಥಗಳು ವಿಶೇಷವಾಗಿ ಸಲಾಡ್, ತಾಜಾ ತರಕಾರಿಗಳು ಮತ್ತು ಸಣ್ಣ ಪ್ರಮಾಣದ ಲೀನ್ ಪ್ರೋಟೀನ್ ಸೇರಿಸಿಕೊಳ್ಳಿ. ಇವು ಸಕ್ಕರೆ ಪ್ರಮಾಣ ಮತ್ತು ಕ್ಯಾಲರಿ ಕಡಿಮೆ ಮಾಡುತ್ತದೆ.
ನಿಧಾನವಾಗಿ ತಿನ್ನುವುದೇ ಉತ್ತಮ
ನಿಧಾನವಾಗಿ ಮತ್ತು ಗಮನ ಕೊಟ್ಟು ತಿನ್ನುವ ಕಲೆಯನ್ನು ಕರಗತ ಮಾಡಿಕೊಳ್ಳಿ. ನಿಧಾನವಾಗಿ ತಿನ್ನುವವರು ಸ್ಥೂಲಕಾಯ ಹೊಂದುವ ಅಪಾಯವನ್ನು ಶೇ 42ರಷ್ಟು ಕಡಿಮೆ ಮಾಡಿಕೊಳ್ಳುತ್ತಾರೆ. ಬಹಳ ವೇಗವಾಗಿ ತಿನ್ನುವುದು ತೃಪ್ತಿಯ ಭಾವವನ್ನು (ಪೂರ್ಣತೆಯ ಭಾವ) ಮಿದುಳಿಗೆ ತಡವಾಗಿ ತಲುಪಿಸುತ್ತದೆ.
ಪ್ರತೀ ತುತ್ತನ್ನು ಚೆನ್ನಾಗಿ ಅಗೆದು ತಿನ್ನಿ
ಕುಟುಂಬಸ್ಥರು ಅಥವಾ ಸ್ನೇಹಿತರೊಂದಿಗೆ ಮಾತನಾಡುತ್ತಿದ್ದರೆ, ಮಾತಿನ ಸಮಯದಲ್ಲಿ ತಿನ್ನುವುದನ್ನು ನಿಲ್ಲಿಸಿ. ಹೀಗೆ ಗಮನ ಕೊಟ್ಟು ಆಹಾರ ಸೇವಿಸುವುದರಿಂದ ಅಧಿಕ ಕ್ಯಾಲೊರಿ ಸೇವನೆ ಕಡಿಮೆ ಮಾಡಬಹುದು. ಇದು ಊಟದ ನಂತರದ ಅಸ್ವಸ್ಥತೆಯನ್ನು ತಗ್ಗಿಸುತ್ತದೆ.
ರೋಗನಿರೋಧಕ ಶಕ್ತಿ
ಆಹಾರ ಸೇವನೆ ಮುಖ್ಯವಾದರೂ, ರೋಗನಿರೋಧಕ ವ್ಯವಸ್ಥೆ ರಕ್ಷಿಸಿಕೊಳ್ಳಲು, ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವುದು ಮುಖ್ಯ. ಎಲ್ಲಕ್ಕಿಂತ ಮೊದಲು, ನಿದ್ದೆ ಮತ್ತು ರೋಗನಿರೋಧಕ ಶಕ್ತಿಯ ಮಧ್ಯ ಸಂಬಂಧವನ್ನು ಅರ್ಥಮಾಡಿಕೊಳ್ಳಿ.
ನಿದ್ದೆ
ಹಬ್ಬ ಮತ್ತು ಪಾರ್ಟಿಯ ಸಂದರ್ಭದಲ್ಲಿ ನಿದ್ದೆ ಮಾಡುವುದು ತಡರಾತ್ರಿ ಆಗಬಹುದು. ಆ ವೇಳೆ ರೋಗನಿರೋಧಕ ಕಾರ್ಯವನ್ನು ಗಂಭೀರವಾಗಿ ಹಾನಿಗೊಳಿಸಬಹುದು. ಆರೋಗ್ಯವಂತ ವ್ಯಕ್ತಿಗೆ 7 ರಿಂದ 8 ಗಂಟೆಗಳ ನಿದ್ದೆ ಅಗತ್ಯ.
ಒತ್ತಡವನ್ನು ನಿಯಂತ್ರಿಸುವುದು
ರಜಾದಿನಗಳು ಎಂದರೆ ಸಮಾಜಿಕ ಮತ್ತು ದೈಹಿಕ ಒತ್ತಡ ಹೆಚ್ಚಾಗಿರುತ್ತದೆ. ಈ ವೇಳೆ ಕಾರ್ಟಿಸಾಲ್ ಹಾರ್ಮೋನ್ ಹೆಚ್ಚಬಹುದು. ಇದು ರೋಗನಿರೋಧಕ ಶಕ್ತಿಯನ್ನು ದಮನ ಮಾಡುವ ಹಾರ್ಮೋನ್ ಆಗಿದೆ. ಒತ್ತಡವನ್ನು ಕಡಿಮೆ ಮಾಡಲು ಪ್ರತಿದಿನ ಸರಳವಾಗಿ 10 ನಿಮಿಷದ ಧ್ಯಾನ ವ್ಯಾಯಾಮಗಳು ಅಥವಾ ದೀರ್ಘ ಉಸಿರಾಟ ಅಭ್ಯಾಸ ಮಾಡಿ. ಕೊನೆಯದಾಗಿ, ಊಟದ ನಂತರ ಕಡ್ಡಾಯವಾಗಿ ಓಡಾಡುವುದನ್ನು ರೂಢಿಸಿಕೊಳ್ಳಿ.
ಊಟದ ತಕ್ಷಣ ಸೋಫಾದ ಮೇಲೆ ಬೀಳುವ ಆಸೆಯನ್ನು ತಡೆದುಕೊಳ್ಳಿ. ಬದಲಾಗಿ, ಊಟದ ನಂತರ ಕನಿಷ್ಠ 15 ನಿಮಿಷಗಳ ಕಾಲ ಸೌಮ್ಯವಾದ ನಡಿಗೆ ಮಾಡಿ. ಇದು ಕರುಳಿನ ಕಾರ್ಯವನ್ನು ವೇಗಗೊಳಿಸಿ, ಆಲಸ್ಯವನ್ನು ತಡೆಯುತ್ತದೆ. ಮತ್ತು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ.
(ಲೇಖಕರು: ಡಾ. ಉದಯ್ ನಾಗೇಶ್ ಶಿವಾಜಿ, ಸೀನಿಯರ್ ಕನ್ಸಲ್ಟೆಂಟ್, ಕ್ಲಿನಿಕಲ್ ಲೀಡ್, ಮೆಡಿಕಲ್ ಗ್ಯಾಸ್ಟ್ರೋಎಂಟರಾಲಜಿ, ನಾರಾಯಣ ಹೆಲ್ತ್ ಸಿಟಿ, ಬೆಂಗಳೂರು)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.