ADVERTISEMENT

ವಿಶ್ವ ಶ್ರವಣ ದಿನ: ಇಯರ್‌ ಫೋನ್‌ ಬಳಕೆ ಕಡಿಮೆ ಮಾಡಿ- ಡಾ.ರವೀಂದ್ರ ಪರಪ್ಪ

ವಿಶ್ವ ಶ್ರವಣ ದಿನ: ಕಿಮ್ಸ್‌ ಇಎನ್‌ಟಿ ತಜ್ಞ ಡಾ.ರವೀಂದ್ರ ಪರಪ್ಪ ಗದಗ ಸಲಹೆ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2023, 11:21 IST
Last Updated 4 ಮಾರ್ಚ್ 2023, 11:21 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಹುಬ್ಬಳ್ಳಿ: ‘ಕಿವಿ ಸೂಕ್ಷ್ಮ ಅಂಗವೆನಿಸಿದ್ದು, ಇಯರ್‌ ಫೋನ್‌ ಬಳಕೆಯನ್ನು ಆದಷ್ಟು ಕಡಿಮೆ ಮಾಡುವುದು ಒಳಿತು. ತೀರಾ ಅಗತ್ಯವೆನಿಸಿದ್ದಲ್ಲಿ ಬಳಸಿದರೂ ವಾಲ್ಯೂಮ್‌ ಕಡಿಮೆಯಿಟ್ಟು ಬಳಸಿ’ ಎಂದು ಕಿಮ್ಸ್‌ನ ಇಎನ್‌ಟಿ
ವಿಭಾಗದ ಮುಖ್ಯಸ್ಥ ಡಾ. ರವೀಂದ್ರ ಪರಪ್ಪ ಗದಗ ಕಿವಿಮಾತು ಹೇಳಿದರು.

ವಿಶ್ವ ಶ್ರವಣ ದಿನದ ಹಿನ್ನೆಲೆಯಲ್ಲಿ ‘ಪ್ರಜಾವಾಣಿ’ ನಡೆಸಿದ ಫೇಸ್‌ಬುಕ್ ಸಂವಾದ ಕಾರ್ಯಕ್ರಮದಲ್ಲಿ ಶ್ರವಣ ದೋಷಗಳು ಮತ್ತು ಪರಿಹಾರಗಳು ಹಾಗೂ ಕಿವಿ ಕುರಿತು ವಹಿಸಬೇಕಾದ ಕಾಳಜಿಯ ಬಗ್ಗೆ ಉಪಯುಕ್ತ ಮಾಹಿತಿಗಳನ್ನು ನೀಡಿದರು.

ಶ್ರವಣದೋಷಗಳು ಹುಟ್ಟಿನಿಂ ದಲೇ ಬರಬಹುದು ಇಲ್ಲವೇ ಯೌವ ನದಲ್ಲಿ ಕಾಣಿಸಿಕೊಳ್ಳಬಹುದು. ವಂಶಪಾರಂಪರ್ಯ ಆಗಿಯೂ ಬರಬಹುದು. ವಯಸ್ಸಾದ ನಂತರ ಕಾಣಿಸಿಕೊಳ್ಳುವ ಶ್ರವಣದೋಷವೂ ಆಗಬಹುದು. ಎಲ್ಲವನ್ನು ನಿರ್ಲಕ್ಷಿಸದೆ
ತಜ್ಞವೈದ್ಯರನ್ನು ಕಂಡು, ಶ್ರವಣ ದೋಷಗಳಿಗೆ ಪರಿಹಾರ ಕಂಡುಕೊಳ್ಳಿ ಎಂದು ಸಲಹೆ ನೀಡಿದರು.

ADVERTISEMENT

ಮಗುವಿಗೆ ಕಿವಿ ಕೇಳುತ್ತಿಲ್ಲವೇ ಎಂಬುದನ್ನು ಗುರುತಿಸುವ ಜವಾಬ್ದಾರಿ ಪಾಲಕರದ್ದು. ಸಾಮಾನ್ಯವಾಗಿ ಮಗು 7–8 ತಿಂಗಳಲ್ಲೇ ಮಾತನಾಡಲು ಆರಂಭಿಸಲಿದೆ. ಮಗು ಸಹಜ ವಯಸ್ಸಿಗೆ ಮಾತನಾಡಲು ಆರಂಭಿಸದಿದ್ದಲ್ಲಿ ಪಾಲಕರು ಇಎನ್‌ಟಿ ತಜ್ಞರನ್ನು ಕಂಡು ಸಲಹೆ ಪಡೆಯಬೇಕು. ಶ್ರವಣದೋಷವುಳ್ಳ ಮಗುವಿಗೆ ಕಾಕ್ಲಿಯರ್‌ ಇಂಪ್ಲಾಂಟ್‌ (Cochlear Implant) ಮೂಲಕ ಕಿವಿ ಕೇಳುವಂತೆ, ಮಾತನಾಡುವಂತೆ ಮಾಡಬಹುದು. ಆದರೆ ಕಾಕ್ಲಿಯರ್‌ ಇಂಪ್ಲಾಂಟ್‌ಗೆ ಮೊದಲು ಪಾಲಕರು ಮೂರು ತಿಂಗಳು ಸ್ಪೀಚ್ ಥೆರಪಿ ಕಲಿತು, ಮಗುವಿಗೆ ಕಲಿಸಬೇಕು. ಅದರಿಂದಲೂ ಪರಿಹಾರ ಸಿಗದಿದ್ದಾಗ ಮಾತ್ರ ಕಾಕ್ಲಿಯರ್‌ ಇಂಪ್ಲಾಂಟ್‌ ಮಾಡಿಸಬೇಕು. ಕಿಮ್ಸ್‌ ಆಸ್ಪತ್ರೆಯಲ್ಲಿ ಕಾಕ್ಲಿಯರ್‌ ಇಂಪ್ಲಾಂಟ್‌ ಅಳವಡಿಕೆ ಆರಂಭಿಸಲಾಗಿದೆ ಎಂದು ಹೇಳಿದರು.

ಶ್ರವಣ ದೋಷಕ್ಕೆ ಪರಿಹಾರವಾಗಿ ಶ್ರವಣ ಯಂತ್ರಗಳನ್ನು ಆನ್‌ಲೈನ್‌ನಲ್ಲಿ ತರಿಸಿಕೊಂಡು ಬಳಸಬೇಡಿ. ಕಣ್ಣಿನ ಸಮಸ್ಯೆಗೆ ಹೇಗೆ ನೇತ್ರ ತಪಾಸಣೆಗೊಳಪಟ್ಟು ಕನ್ನಡ ಬಳಸುತ್ತೇವೆಯೋ ಹಾಗೆಯೇ ಇಎನ್‌ಟಿ ತಜ್ಞ ವೈದ್ಯರನ್ನು ಕಂಡು ಪರೀಕ್ಷಿಸಿಯೇ ಶ್ರವಣ ಸಾಧನ ಬಳಸುವುದು ಸರಿಯಾದ ಕ್ರಮ ಎಂದು ಅವರು ಸೂಚಿಸಿದರು.

ಹೋಳಿ: ಮುಂಜಾಗ್ರತೆ ಇರಲಿ

ಹೋಳಿಯಲ್ಲಿ ಬಣ್ಣ ಆಡುವಾಗ ಕಣ್ಣುಗಳಂತೆ ಕಿವಿಗಳಿಗೂ ಮುಂಜಾಗ್ರತೆ ವಹಿಸುವುದು ಮುಖ್ಯ. ಬಣ್ಣಗಳಲ್ಲಿ ರಾಸಾಯನಿಕಗಳು ಇರುವುದರಿಂದ ಅವು ಪುಡಿಯ ರೂಪದಲ್ಲೋ, ದ್ರಾವಣದ ರೂಪದಲ್ಲೋ ಕಿವಿಯೊಳಗೆ ಪ್ರವೇಶಿಸಿ, ಅಲ್ಲಿ ಫಂಗಸ್‌ ಆಗಿ ಸೋಂಕಿಗೂ ಕಾರಣವಾಗಬಹುದು. ಪಿಚಕಾರಿಯಿಂದ ಕಿವಿಯೊಳಗೆ ನೀರು ಜೋರಾಗಿ ಪ್ರವೇಶಿಸಿದರೆ ಕಿವಿ ತಮಟೆ ಘಾಸಿ ಆಗಬಹುದು. ಆದ್ದರಿಂದ ಹೋಳಿಯಲ್ಲಿ ಬಣ್ಣ ಆಡುವಾಗ ಎಚ್ಚರಿಕೆ ವಹಿಸುವುದು ತೀರಾ ಅಗತ್ಯ ಎಂದು ಡಾ.ರವೀಂದ್ರ ಪರಪ್ಪ ಗದಗ ಕಿವಿಮಾತು ಹೇಳಿದರು.

ಕಿವಿ ಆರೋಗ್ಯ; ಕಾಳಜಿ ಇರಲಿ

l ಕಿವಿ ಸ್ವಚ್ಛಗೊಳಿಸಲು ಕಿವಿಯೊಳಗೆ ಪೆನ್ನು, ಕಡ್ಡಿ, ಸೇಫ್ಟಿಪಿನ್‌ ತೂರಿಸಬೇಡಿ

l ಬಿಸಿ ಎಣ್ಣೆ ಹಾಕಬೇಡಿ

l ಡ್ರಾಪ್ಸ್‌ ಹಾಕುವುದಾರೂ ವೈದ್ಯರ ಸಲಹೆ ಮೇರೆಗೆ ಹಾಕಿ

l ಕಿವಿಯೊಳಗೆ ಇರುವೆ, ಕೀಟಗಳು ಹೋಗಿದ್ದಲ್ಲಿ, ಉಗುರು ಬೆಚ್ಚಗಿನ ನೀರನ್ನು ಹಾಕಬಹುದು. ಆದರೆ ಇಎನ್‌ಟಿ ತಜ್ಞರನ್ನು ಸಂಪರ್ಕಿಸಿ ಸಲಹೆ, ಚಿಕಿತ್ಸೆ ಪಡೆಯಿರಿ

l ಹೆಚ್ಚು ಡೆಸಿಬಲ್‌ ಶಬ್ದವಿಟ್ಟು ಇಯರ್‌ ಫೋನ್‌ಗಳನ್ನು ಬಳಸಬೇಡಿ

l ಕಿವಿ ಸೋರುವಿಕೆ ನಿರ್ಲಕ್ಷಿಸಬೇಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.