‘ಕೇರಳದಲ್ಲಿ ಗರ್ಭಿಣಿ ಆನೆಗೆ ಪಟಾಕಿ ತುಂಬಿಸಿದ್ದ ಅನಾನಸ್ ತಿನ್ನಿಸಿದಂತೆ, ಹಿಮಾಚಲ ಪ್ರದೇಶದ ವಿಲಾಸಪುರಿಯಲ್ಲಿ ಸ್ಫೋಟಕ ತುಂಬಿದ ಹಣ್ಣನ್ನು ಗರ್ಭಿಣಿ ಹಸುವಿಗೆ ತಿನ್ನಿಸಲಾಗಿದೆ. ವಿಲಾಸಪುರಿಯನ್ನು ಅತ್ಯಂತ ಪವಿತ್ರ ಕ್ಷೇತ್ರ ಎಂದು ಕರೆಯಲಾಗುತ್ತದೆ. ಅಲ್ಲೇ ಹಸುವಿಗೆ ಹೀಗೆ ಮಾಡಲಾಗಿದೆ.ಸ್ಫೋಟದಲ್ಲಿ ಹಸು ತೀವ್ರವಾಗಿ ಗಾಯಗೊಂಡಿದೆ. ಕೇರಳದ ಮೇಲೆ ಮುಗಿಬಿದ್ದವರು ಇತ್ತಲೂ ನೋಡಿ’ ಎಂಬ ಒಕ್ಕಣೆ ಇರುವ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಗಾಯಗೊಂಡಿರುವ ಹಸುವಿನ ಚಿತ್ರವೂ ವೈರಲ್ ಆಗಿದೆ.
ಆದರೆ, ಇದು ಸುಳ್ಳು ಸುದ್ದಿ. 2015ರ ಜೂನ್ನಲ್ಲಿ ರಾಜಸ್ಥಾನದ ರಾಯಪುರದ ಲಿಲಂಬಾ ಹಳ್ಳಿಯಲ್ಲಿ ನಡೆದಿದ್ದ ಘಟನೆ ಇದು. ಹಳ್ಳಿಯ ಕಸದ ರಾಶಿಯಲ್ಲಿ ಹಸು ಮೇಯುತ್ತಿದ್ದಾಗ ಅಲ್ಲಿ ಸ್ಫೋಟ ಸಂಭವಿಸಿತ್ತು. ಸ್ಫೋಟದಲ್ಲಿ ಹಸುವಿನ ದವಡೆಗೆ ತೀವ್ರ ಗಾಯವಾಗಿತ್ತು. ಬೀದಿಯಲ್ಲಿ ಆಟವಾಡುತ್ತಿದ್ದ ಮಕ್ಕಳು ಕಸದ ರಾಶಿಯಲ್ಲಿ ಪಟಾಕಿ ಹುದುಗಿಸಿ ಇಟ್ಟಿದ್ದರು. ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದರು ಎಂದು ಆಲ್ಟ್ ನ್ಯೂಸ್ ವರದಿ ಮಾಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.