ಬರೇಲ್ವಿ ಮೌಲಾನಾ ಅವರು ತಾವೊಬ್ಬ ಹಿಂದೂ ಎಂದು ಹೇಳಿಕೊಂಡಿದ್ದಾರೆ ಎಂದು ಹೇಳಲಾಗುವ ವಿಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದೆ. ‘ನಾನು ಬಂಡಾಯಗಾರಲ್ಲ, ನಾನೊಬ್ಬ ಹಿಂದೂ, ನಾನು ವಹಾಬಿ ಅಲ್ಲ’ ಎಂಬುದಾಗಿ 20 ಸೆಕೆಂಡ್ಗಳ ವಿಡಿಯೊದಲ್ಲಿ ವ್ಯಕ್ತಿಯೊಬ್ಬರು ಹೇಳುವುದು ಕೇಳಿಸುತ್ತದೆ. ಇವರು ಬರೇಲ್ವಿ ಮೌಲಾನಾ ಎಂದು ಕೆಲವು ಜಾಲತಾಣ ಬಳಕೆದಾರರು ಹೇಳಿದ್ದು, ಅವರ ಮಾತಿಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಯೋಗಿ ಅವರ ಆಡಳಿತದ ಅವಧಿಯಲ್ಲಿ ಎಲ್ಲವೂ ಸಾಧ್ಯ ಎಂದು ಕೆಲವರು ಹೇಳಿದ್ದಾರೆ. ಆದರೆ ಇದು ಸುಳ್ಳು.
ವಿಡಿಯೊದಲ್ಲಿರುವ ವ್ಯಕ್ತಿ ಬರೇಲ್ವಿ ಮೌಲಾನಾ ಅಲ್ಲ. ಅವರ ಹೆಸರು ಮೌಲಾನಾ ಜಹೀಬ್ ರಾಜಾ ಬನಾರಸಿ. ಶಹಬಾಜಿಯಾ ಏಜೆನ್ಸಿ ಎಂಬ ಯೂಟ್ಯೂಬ್ ವಾಹಿನಿಯಲ್ಲಿ ಬನಾರಸಿ ಅವರು ಮಾಡಿದ ಏಳು ನಿಮಿಷಗಳ ವಿಡಿಯೊ ಇದೆ. ಅಂದು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶಾಸಕ ದೀಪಕ್ ಸಿಂಗ್ ಅವರನ್ನು ಕುರಿತು ಬನಾರಸಿ ಹೇಳಿದ ಮಾತನ್ನು ಮೌಲಾನಾ ಅವರ ಮಾತು ಎಂದು ತಪ್ಪಾಗಿ ಬಿಂಬಿಸಲಾಗಿದೆ. ‘ದೀಪಕ್ಜಿ ₹51,000 ನೀಡಿದ್ದಾರೆ. ಧರ್ಮಾಂಧತೆ ಆವರಿಸಿರುವ ಈ ಸಮಯದಲ್ಲಿ ಇದು ಯಾವ ಸಂದೇಶ ನೀಡುತ್ತದೆ. ‘ನಾನು ಬಂಡಾಯಗಾರಲ್ಲ, ನಾನು ಹಿಂದೂ, ನಾನು ವಹಾಬಿ ಅಲ್ಲ’ ಎಂದು ಹೇಳುವ ಮೂಲಕ ದೇವರ ಸಂದೇಶ ರವಾನಿಸಿದ್ದಾರೆ’ ಎಂದು ಬನಾರಸಿ ಹೇಳುತ್ತಾರೆ. ‘ಬನರಾಸಿ ಹೇಳಿದ್ದು ನನ್ನ ಬಗ್ಗೆಯೇ’ ಎಂದು ದೀಪಕ್ ಸ್ಪಷ್ಟಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.