ಉತ್ತರಾಖಂಡದ ಹರಿದ್ವಾರದಲ್ಲಿ ಡಿ. 17, 18ರಂದು ನಡೆದ ‘ಧರ್ಮ ಸಂಸತ್’ ಕಾರ್ಯಕ್ರಮದಲ್ಲಿ ಕೆಲವು ಸಂತರು ಮುಸ್ಲಿಮರ ಹತ್ಯಾಕಾಂಡಕ್ಕೆ ಕರೆ ನೀಡಿದ್ದರು. ಈ ಹೇಳಿಕೆಗಳಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಖಂಡನೆ ವ್ಯಕ್ತವಾಗಿದೆ. ಅದಾದ ಬಳಿಕ ಬಿಜೆಪಿ ಸದಸ್ಯರು ಮತ್ತು ಬೆಂಬಲಿಗರು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರ ವಿಡಿಯೊವನ್ನು ಜಾಲತಾಣಗಳಲ್ಲಿ ವೈರಲ್ ಮಾಡುತ್ತಿದ್ದಾರೆ. ಧರ್ಮ ಸಂಸತ್ ನಡೆದ ಬಳಿಕ ಈ ವಿಡಿಯೊವನ್ನು ಓವೈಸಿ ಚಿತ್ರೀಕರಿಸಿದ್ದಾರೆ. ಅದರಲ್ಲಿ ಹಿಂದೂಗಳಿಗೆ ನೇರವಾಗಿ ಬೆದರಿಕೆ ಒಡ್ಡುತ್ತಿದ್ದಾರೆ. ಧರ್ಮ ಸಂಸತ್ ಕಾರ್ಯಕ್ರಮದ ವಿರುದ್ಧ ಪೊಲೀಸರಿಗೆ ದೂರು ನೀಡಲು ಉತ್ತರಾಖಂಡ ಎಐಎಂಐಎಂಗೆ ಅವರು ನಿರ್ದೇಶಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ವಿಡಿಯೊ ಚಿತ್ರೀಕರಣ ಆಗಿರುವುದು ಧರ್ಮ ಸಂಸತ್ ಕಾರ್ಯಕ್ರಮ ನಡೆಯುವುದಕ್ಕಿಂತ ಐದು ದಿನಗಳ ಮೊದಲು ಎಂದು ಆಲ್ಟ್ ನ್ಯೂಸ್ ವರದಿ ಮಾಡಿದೆ. ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದ ಸಭೆಯೊಂದರಲ್ಲಿ ಓವೈಸಿ ಮಾತನಾಡಿದ್ದರು. ಆದರೆ ಭಾಷಣದಲ್ಲಿ ಓವೈಸಿ ಹಿಂದೂಗಳನ್ನು ಬೆದರಿಸಿಲ್ಲ. ಅವರು ಉತ್ತರ ಪ್ರದೇಶ ಪೊಲೀಸರ ಕುರಿತು ಮಾತನಾಡಿದ್ದಾರೆ. ಕಾನ್ಪುರದ ರಸೂಲಾಬಾದ್ ಪೊಲೀಸ್ ಠಾಣೆಯಲ್ಲಿ 80 ವರ್ಷ ವಯಸ್ಸಿನ ಮುಸ್ಲಿಂ ವ್ಯಕ್ತಿಯ ಮೇಲೆ ದೌರ್ಜನ್ಯ ಮಾಡಲಾಯಿತು ಎಂದು ನನಗೆ ತಿಳಿಯಿತು. ಪೊಲೀಸರು ನನ್ನ ಮಾತುಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಿ, ನಿಮ್ಮ ಕ್ರೌರ್ಯವನ್ನುನಾವು ಸದಾ ನೆನಪಿನಲ್ಲಿಟ್ಟುಕೊಳ್ಳುತ್ತೇವೆ. ಅಲ್ಲಾ ನಿಮ್ಮನ್ನು ಶಿಕ್ಷಿಸುತ್ತಾನೆ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.