ಭಾರತೀಯ ರೈಲ್ವೆಯು ರೈಲಿನಲ್ಲಿ ಪ್ರಯಾಣಿಸುವ ಹಿರಿಯ ನಾಗರಿಕರಿಗೆ ಪ್ರಯಾಣ ದರದಲ್ಲಿ ರಿಯಾಯಿತಿ ನೀಡುವ ಸೌಲಭ್ಯವನ್ನು ಮತ್ತೆ ಆರಂಭಿಸಿದೆ ಎಂದು ಹೇಳುವ ಪೋಸ್ಟ್ ಅನ್ನು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಮೇ 21ರಿಂದ ಈ ಸವಲತ್ತು ಆರಂಭವಾಗಿದೆ ಎಂದು ಪ್ರತಿಪಾದಿಸುತ್ತಿದ್ದಾರೆ. ಆದರೆ, ಇದು ಸುಳ್ಳು.
ಈ ಬಗ್ಗೆ ಹುಡುಕಾಟ ನಡೆಸಿದಾಗ, ವಿಶ್ವಾಸಾರ್ಹವಲ್ಲದ ಕೆಲವು ವೆಬ್ಸೈಟ್ಗಳಲ್ಲೂ ಈ ವಿವರಗಳಿರುವುದು ಕಂಡು ಬಂತು. ಆದರೆ, ಮುಖ್ಯವಾಹಿನಿ ಮಾಧ್ಯಮಗಳಲ್ಲಿ ಈ ಬಗ್ಗೆ ವರದಿಗಳಿರಲಿಲ್ಲ. ಕೇಂದ್ರ ಸರ್ಕಾರದ 2025–26ನೇ ಸಾಲಿನ ಬಜೆಟ್ ಪರಿಶೀಲಿಸಿದಾಗಲೂ ಯಾವುದೇ ವಿವರ ಸಿಗಲಿಲ್ಲ. ರೈಲ್ವೆ ಸಚಿವಾಲಯವು ಈ ಬಗ್ಗೆ ಅಧಿಕೃತ ಘೋಷಣೆ ಮಾಡಿದೆಯೇ ಎಂದು ಪರಿಶೀಲಿಸಿದ ಸಂದರ್ಭದಲ್ಲಿ 2020ರ ಮಾರ್ಚ್ನಲ್ಲಿ ಸಚಿವಾಲಯ ಬಿಡುಗಡೆ ಮಾಡಿದ್ದ ಮಾಧ್ಯಮ ಪ್ರಕಟಣೆ ಸಿಕ್ಕಿತು. ಕೋವಿಡ್ ಹರಡುವುದನ್ನು ತಡೆಯುವುದಕ್ಕಾಗಿ ಹಿರಿಯ ನಾಗರಿಕರಿಗೆ ನೀಡಲಾಗುತ್ತಿರುವ ಪ್ರಯಾಣ ದರ ರಿಯಾಯಿತಿ ಸೇರಿದಂತೆ ಇನ್ನಿತರ ಕೆಲವು ರಿಯಾಯಿತಿಗಳನ್ನು ವಾಪಸ್ ಪಡೆಯುತ್ತಿರುವ ಬಗ್ಗೆ ಪ್ರಸ್ತಾಪಿಸಲಾಗಿತ್ತು. ಆ ಬಳಿಕ ಐಆರ್ಸಿಟಿಸಿ ಪೋರ್ಟಲ್ಗೆ ಭೇಟಿ ನೀಡಿ ಹಿರಿಯ ನಾಗರಿಕರ ಟಿಕೆಟ್ ವಿಭಾಗದಲ್ಲಿ ಟಿಕೆಟ್ ಕಾಯ್ದಿರಿಸಲು ಮುಂದಾದಾಗ, ಸಾಮಾನ್ಯ ವರ್ಗದ ಪ್ರಯಾಣಿಕರಿಗೆ ಇದ್ದಷ್ಟೇ ಪ್ರಯಾಣ ದರವನ್ನು ತೋರಿಸಿತು. ಇನ್ನಷ್ಟು ಹುಡುಕಾಟ ನಡೆಸಿದಾಗ, ಕಳೆದ ವರ್ಷದ ಡಿಸೆಂಬರ್ನಲ್ಲಿ ಲೋಕಸಭೆಯಲ್ಲಿ ಈ ವಿಚಾರ ಪ್ರಸ್ತಾಪವಾಗಿತ್ತು. ಆ ಸಂದರ್ಭದಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಪ್ರತಿಕ್ರಿಯಿಸುವಾಗ ಹಿರಿಯ ನಾಗರಿಕರಿಗೆ ನೀಡುವ ರಿಯಾಯಿತಿ ಬಗ್ಗೆ ಮಾತನಾಡಿರಲಿಲ್ಲ. ಹಾಗಾಗಿ, ರಿಯಾಯಿತಿ ಸೌಲಭ್ಯವನ್ನು ಭಾರತೀಯ ರೈಲ್ವೆಯು ಮತ್ತೆ ಆರಂಭಿಸಲಿದೆ ಎಂಬುದು ಸುಳ್ಳು ಎಂದು ಪಿಟಿಐ ಫ್ಯಾಕ್ಟ್ ಚೆಕ್ ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.