ADVERTISEMENT

ರೈಲಿನಲ್ಲಿ ಬಾಂಬ್ ಬೆದರಿಕೆ: ಒಬ್ಬನ ಬಂಧನ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2011, 10:05 IST
Last Updated 19 ಸೆಪ್ಟೆಂಬರ್ 2011, 10:05 IST

ಅಜ್ಮೀರ್(ಐಎಎನ್‌ಎಸ್): ರಾಜಸ್ತಾನ ಮಾರ್ಗವಾಗಿ ಇಲ್ಲಿಗೆ ಬರುತ್ತಿದ್ದ ಜೋಧಾಪುರ-ರಟ್ಲಮ್ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬಾಂಬ್ ಇರಿಸಲಾಗಿದೆ ಎಂಬ ಮಾಹಿತಿ ತೀವ್ರ ಆತಂಕಕ್ಕೆ ಕಾರಣವಾದ ಘಟನೆ ಸೋಮವಾರ ಇಲ್ಲಿ ನಡೆದಿದೆ. 

ಮಧ್ಯಾಹ್ನದ ವೇಳೆಗೆ ಇಲ್ಲಿಗೆ ಬರಲಿರುವ ಜೋಧಾಪುರ-ರಟ್ಲಮ್ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬಾಂಬ್ ಇರಿಸಲಾಗಿದೆ ಎಂಬ ಮಾಹಿತಿ ತಿಳಿದ  ಪೊಲೀಸರು ಇಲ್ಲಿಂದ 40 ಕಿ.ಮಿ.ದೂರದ ಕಾರ್ವ ನಿಲ್ದಾಣದಲ್ಲಿ ಆ ರೈಲನ್ನು ನಿಲ್ಲಿಸಿದರು. ನಂತರ ಪ್ರಯಾಣಿಕರೆಲ್ಲರನ್ನು ತೆರವುಗೊಳಿಸಿ ರೈಲಿನ ತಪಾಸಣೆ ನಡೆಸಿದರು. ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನ ದಳದವರು ಅವರೊಂದಿಗಿದ್ದರು. 

ಈ ಸಂಬಂಧವಾಗಿ ವ್ಯಕ್ತಿಯೊಬ್ಬನನ್ನು ಬಂಧಿಸಿರುವ ಪೊಲೀಸರು ಅವನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಆದರೂ ಬಾಂಬ್ ಸಿಕ್ಕಿತೆ? ಅಥವಾ ಅದು ಹುಸಿ ಬೆದರಿಕೆಯೆ? ಎಂಬುದನ್ನು ಅವರು ಸ್ಪಷ್ಟಪಡಿಸಿಲ್ಲ.

ರಾಷ್ಟ್ರಪತಿ ಪ್ರತಿಭಾ ಪಾಟೇಲ್ ಅವರು ಸೋಮವಾರ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು  ಬಂದಿದ್ದ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ಬಂದೋಬಸ್ತ ವ್ಯವಸ್ಥೆಮಾಡಲಾಗಿತ್ತು. ರಾಷ್ಟ್ರಪತಿ ಆಗಮನದ ದಿನದಂದೇ ರೈಲಿನಲ್ಲಿ ಬಾಂಬ್ ಇದೆ ಎಂಬ ಕರೆ ಆತಂಕಕ್ಕೆ ಕಾರಣವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT