ಗುವಾಹತಿ: ಮೇಘಾಲಯದ ಗಣಿಯಲ್ಲಿ ಡಿಸೆಂಬರ್ 13ರಿಂದ ಕನಿಷ್ಠ 15 ಮಂದಿ ಸಿಲುಕಿದ್ದು, ಸುರಂಗದಲ್ಲಿ ನೀರು ತುಂಬಿದ ಕಾರಣ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಈ ಕುರಿತು ಟ್ವೀಟ್ ಮಾಡಿ, ಪ್ರಧಾನಿ ನರೇಂದ್ರ ಮೋದಿ ಶೀಘ್ರ ಕ್ರಮಕ್ಕೆ ಗಮನ ಹರಿಸುವಂತೆ ಕೇಳಿದ್ದಾರೆ.
’ಕಲ್ಲಿದ್ದಲು ಗಣಿಯಲ್ಲಿ ಪ್ರವಾಹ ಸ್ಥಿತಿ ಉಂಟಾಗಿದ್ದು, ಅಲ್ಲಿ ಸಿಲುಕಿರುವ 15 ಕಾರ್ಮಿಕರು ಉಸಿರಾಡಲೂ ಹೋರಾಟ ನಡೆಸುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಪ್ರಧಾನಿ ಬೋಗಿಬೀಲ್ ಸೇತುವೆ ಮೇಲೆ ನಿಂತು ಕ್ಯಾಮೆರಾಗಳಿಗೆ ಫೋಸ್ ನೀಡುತ್ತಿದ್ದಾರೆ. ರಕ್ಷಣಾ ಕಾರ್ಯಾಚರಣೆಗೆ ಅಗತ್ಯವಿರುವ ಅಧಿಕ ಒತ್ತಡದಿಂದ ನೀರು ಸೆಳೆಯುವ ಪಂಪ್ಗಳ ವ್ಯವಸ್ಥೆ ಮಾಡಲು ಅವರ ಸರ್ಕಾರ ಹಿಂದೇಟು ಹಾಕಿದೆ. ಮಾನ್ಯ ಪ್ರಧಾನಿಗಳೇ ಗಣಿ ಕಾರ್ಮಿಕರನ್ನು ರಕ್ಷಿಸಿ’ ಎಂದು ಟ್ವೀಟಿಸಿದ್ದಾರೆ.
ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ದೇಶದ ಅತ್ಯಂತ ಉದ್ದದ ರಸ್ತೆ–ರೈಲು ಬೋಗಿಬೀಲ್ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಲೋಕಾರ್ಪಣೆಗೊಳಿಸಿದರು.
ಅನಧಿಕೃತ ಗಣಿಗಾರಿಕೆ ನಡೆದಿರುವಪೂರ್ವ ಜೈಂತಿಯಾ ಹಿಲ್ಸ್ ಜಿಲ್ಲೆಯಲುಂಥಾರಿ ಗ್ರಾಮದ ಸುರಂಗದಲ್ಲಿ ಸೇರಿರುವ ನೀರನ್ನು ಹೊರಹಾಕಲು 100 ಹಾರ್ಸ್ಪವರ್ ಹೊಂದಿರುವ ಹತ್ತು ಪಂಪ್ಗಳ ಅಗತ್ಯವಿದೆ. ಈ ಪಂಪ್ಗಳ ವ್ಯವಸ್ಥೆ ಮಾಡಲು ಮೇಘಾಲಯ ಸರ್ಕಾರಕ್ಕೆ ಸಾಧ್ಯವಾಗಿಲ್ಲ. 25 ಹಾರ್ಸ್ಪವರ್ನ ಎರಡು ಪಂಪ್ಗಳನ್ನು ನೀರು ಹೊರ ಹಾಕಲು ಬಳಸಲಾಗಿದೆ.
ರಕ್ಷಣಾ ಕಾರ್ಯಾಚರಣೆ ನಡೆಸಲುಎನ್ಡಿಆರ್ಎಫ್ ಸಿಬ್ಬಂದಿ 70 ಅಡಿ ಆಳದವರೆಗೂ ಸಾಗಬೇಕಿದೆ. ಎನ್ಡಿಆರ್ಎಫ್ ಮುಳುಗು ತಜ್ಞರು ಗರಿಷ್ಠ 40 ಅಡಿ ಆಳದವರೆಗೂ ಸಾಗಬಹುದಾಗಿದೆ. ನೀರು ಹೊರ ಕಳುಹಿಸದೆ ರಕ್ಷಣಾ ಕಾರ್ಯ ಅಸಾಧ್ಯ ಎನ್ನುತ್ತಿದ್ದಾರೆ ಅಧಿಕಾರಿಗಳು.
ಸಮೀಪದ ನದಿ ಭಾಗದಿಂದ ಹಾಗೂ ನಿಷೇಧವಿದ್ದರೂ ನಡೆಸಲಾಗಿರುವ ಗಣಿಗಾರಿಕೆಯಿಂದ ಉಂಟಾಗಿರುವ ಕೊರೆತದಿಂದ ನೀರು ಸುರಂಗಕ್ಕೆ ನುಗ್ಗಿದೆ.ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು (ಎನ್ಜಿಟಿ) ನಾಲ್ಕು ವರ್ಷಗಳ ಹಿಂದೆಯೇ (2014) ಮೇಘಾಲಯದಲ್ಲಿ ಕಲ್ಲಿದ್ದಲು ಗಣಿಗಾರಿಕೆಯನ್ನು ನಿಷೇಧಿಸಿದೆ. ಆದರೂ, ಗಣಿಗಾರಿಕೆ ನಡೆಯುತ್ತಿರುವುದರಿಂದ ಕಾರ್ಮಿಕರು ನಿತ್ಯವೂ ಪ್ರಾಣಾಪಾಯ ಎದುರಿಸುವಂತಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.