ಬಾಂಬೆ ಹೈಕೋರ್ಟ್
ಮುಂಬೈ: ವಿಚಾರಣೆ ನಡೆಸದೆ ಆರೋಪಿಯ ಜೈಲುವಾಸವನ್ನು ದೀರ್ಘಕಾಲ ವಿಸ್ತರಿಸುವುದು ಜೀವಿಸುವ ಹಕ್ಕನ್ನು (ಸಂವಿಧಾನದ 21ನೇ ವಿಧಿ) ಉಲ್ಲಂಘಿಸುವುದಕ್ಕೆ ಸಮ ಎಂದು ಬಾಂಬೆ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
2018ರ ಎಲ್ಗಾರ್ ಪರಿಷತ್ –ಮಾವೋವಾದಿ ನಂಟು ಪ್ರಕರಣದ ವಿಚಾರಣೆಯನ್ನು ಚುರುಕುಗೊಳಿಸುವಂತೆ ವಿಶೇಷ ನ್ಯಾಯಾಲಯವನ್ನು ಒತ್ತಾಯಿಸಿದ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿತು.
ವಿಶೇಷ ನ್ಯಾಯಾಲಯವು ಒಂಬತ್ತು ತಿಂಗಳ ಒಳಗಾಗಿ ದೋಷಾರೋಪ ನಿಗದಿ ಮಾಡಬೇಕು. ಇದು ವಿಚಾರಣೆ ಆರಂಭದ ಮೊದಲ ಹಂತ ಎಂದು ಹೇಳಿತು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಸ್.ಗಡ್ಕರಿ ಮತ್ತು ಕಮಲ್ ಖತಾ ಅವರನ್ನು ಒಳಗೊಂಡ ವಿಭಾಗೀಯ ಪೀಠವು, ಜ.8ರಂದು ಸಂಶೋಧಕ ರೋನಾ ವಿಲ್ಸನ್ ಮತ್ತು ಹೋರಾಟಗಾರ ಸುಧೀರ್ ಧವಾಲೆ ಅವರಿಗೆ ಜಾಮೀನು ಮಂಜೂರು ಮಾಡಿತು. ಇದೇ ಸಂದರ್ಭದಲ್ಲಿ ಇಬ್ಬರೂ ಆರೋಪಿಗಳು ಈಗಾಗಲೇ ಆರು ವರ್ಷ ಜೈಲು ವಾಸ ಅನುಭವಿಸಿದ್ದಾರೆ ಎಂದು ಉಲ್ಲೇಖಿಸಿತು.
2017ರ ಡಿಸೆಂಬರ್ 31ರಂದು ಪುಣೆಯಲ್ಲಿ ನಡೆದಿದ್ದ ಎಲ್ಗಾರ್ ಪರಿಷತ್ ಸಮ್ಮೇಳನದಲ್ಲಿ ಆರೋಪಿಗಳು ಪ್ರಚೋದನಕಾರಿ ಭಾಷಣ ಮಾಡಿದ್ದರು. ಇದರ ಪರಿಣಾಮ ಮಾರನೇ ದಿನ ನಗರ ಹೊರವಲಯದ ಭೀಮಾ ಕೋರೆಗಾಂವ್ ಯುದ್ದ ಸ್ಮಾರಕದ ಬಳಿ ಹಿಂಸಾಚಾರ ನಡೆದಿತ್ತು ಎಂದು ಪೊಲೀಸರು ಆರೋಪಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.