ADVERTISEMENT

ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ 26 ವರ್ಷ: ಶೌರ್ಯ ದಿನ ಆಚರಣೆ ಬೆಂಬಲಿಸಿದ ಸ್ವಾಮಿ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2018, 5:30 IST
Last Updated 6 ಡಿಸೆಂಬರ್ 2018, 5:30 IST
   

ಲಖನೌ: ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ 26 ವರ್ಷ ಪೂರ್ಣಗೊಂಡ ಹಿನ್ನಲೆಯಲ್ಲಿ ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ಅಯೋಧ್ಯೆಯಲ್ಲಿ ಗುರುವಾರ (ಡಿಸೆಂಬರ್‌ 6) ಶೌರ್ಯ ದಿನ ಆಚರಿಸಲು ನಿರ್ಧಿಸಿರುವುದರಲ್ಲಿ ತಪ್ಪಿಲ್ಲಎಂದು ಬಿಜೆಪಿ ನಾಯಕ ಸುಬ್ರಮಣಿಯನ್‌ ಸ್ವಾಮಿ ಸಮರ್ಥಿಸಿಕೊಂಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ಸ್ವಾಮಿ, ಚಳುವಳಿಯನ್ನು ಮುನ್ನಡೆಸಿದ್ದವಿಎಚ್‌ಪಿಗೆ ಈದಿನವನ್ನು ಸಂಭ್ರಮಿಸುವ ಹಕ್ಕು ಇದೆ. ಬಾಬ್ರಿ ಮಸೀದಿ ಇದ್ದ ಜಾಗದಲ್ಲಿ ರಾಮನ ದೇವಾಲಯವಿತ್ತು. ಅದು ರಾಮನ ಜನ್ಮಭೂಮಿ. ಮೊಘಲ್‌ ದೊರೆ ಬಾಬರ್‌ ದೇಶಕ್ಕೆ ಬಂದ ಬಳಿಕ ಆತನ ಸೈನಿಕರು ದೇವಾಲಯವನ್ನು ನಾಶಪಡಿಸಿ, ಅದರ ಮೇಲೆ ಮಸೀದಿಯನ್ನು ನಿರ್ಮಿಸಿದರು.

ಬಾಬರ್‌ ಕೃತ್ಯವನ್ನು ಸಾಕಷ್ಟು ಜನರು ಪ್ರತಿಭಟಿಸಿದ್ದರು. ಆವೇಳೆ ಬಹುಶಃ ನಾಲ್ಕೈದು ಸಾವಿರ ಜನರನ್ನೂ ಕೊಲ್ಲಲಾಗಿದೆ. ಒಂದು ವೇಳೆ ಈ ದಿನವನ್ನು ಶೌರ್ಯ ದಿನವಾಗಿ ಆಚರಿಸಲು ವಿಎಚ್‌ಪಿ ಬಯಸಿದರೆ ಅದರಲ್ಲಿ ತಪ್ಪಿಲ್ಲ. ಆದರೆ, ಅದು ಶಾಂತಿಯುತವಾಗಿರಲಿ ಎಂದರು.

ವಿಎಚ್‌ಪಿಯು ರಾಮ ದೇವಾಲಯ ನಿರ್ಮಾಣಕ್ಕೆ ಆಗ್ರಹಿಸಿ ಅಯೋಧ್ಯೆಯಲ್ಲಿ ನವೆಂಬರ್‌ 25ರಂದು ಧರ್ಮಸಭೆ ನಡೆಸಿತ್ತು. ಸದ್ಯ ಬಾಬ್ರಿ ಮಸೀದಿ ದ್ವಂಸ ದಿನವನ್ನು(ಡಿ.06)ಶೌರ್ಯ ದಿನವನ್ನಾಗಿ ಆಚರಿಸಲು ಅದು ನಿರ್ಧರಿಸಿದೆ. ಜೊತೆಗೆ ಡಿಸೆಂಬರ್‌ 18ರಂದು ಗೀತೆ ಜಯಂತಿಯನ್ನೂ ಹಮ್ಮಿಕೊಂಡಿದೆ. ಈ ದಿನವನ್ನು ಶ್ರೀ ಕೃಷ್ಣ, ಅರ್ಜುನನಿಗೆ ಭಗವದ್ಗೀತೆ ಬೋಧಿಸಿದ ದಿನವಾಗಿ ಆಚರಿಸಲು ನಿರ್ಧರಿಸಲಾಗಿದೆ.

ಮುಸ್ಲಿಂ ಸಂಘಟನೆಗಳು ಶೌರ್ಯ ದಿನಕ್ಕೆ ಪ್ರತಿಯಾಗಿಕರಾಳ ದಿನ ಆಚರಣೆಗೆ ನಿರ್ಧರಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.