ADVERTISEMENT

3 ವರ್ಷಗಳಲ್ಲಿ 40 ಲಕ್ಷಕ್ಕೂ ಹೆಚ್ಚು ಕ್ಯಾನ್ಸರ್‌ ಪ್ರಕರಣ ಪತ್ತೆ: ಮಾಂಡವಿಯಾ

ಲೋಕಸಭೆಗೆ ಮಾಹಿತಿ ನೀಡಿದ ಆರೋಗ್ಯ ಸಚಿವ ಮಾಂಡವಿಯಾ

ಪಿಟಿಐ
Published 11 ಫೆಬ್ರುವರಿ 2022, 15:34 IST
Last Updated 11 ಫೆಬ್ರುವರಿ 2022, 15:34 IST
ಮನ್ಸುಖ್‌ ಮಾಂಡವಿಯಾ
ಮನ್ಸುಖ್‌ ಮಾಂಡವಿಯಾ   

ನವದೆಹಲಿ: 2018ರಿಂದ 2020ರ ಅವಧಿಯಲ್ಲಿ ದೇಶದಲ್ಲಿ 40 ಲಕ್ಷಕ್ಕೂ ಹೆಚ್ಚು ಕ್ಯಾನ್ಸರ್ ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ಶುಕ್ರವಾರ ತಿಳಿಸಿದೆ.

ಇದೇ ಅವಧಿಯಲ್ಲಿ ದೇಶದಲ್ಲಿ 22.54 ಲಕ್ಷ ಜನರು ಈ ಕಾಯಿಲೆಯಿಂದಾಗಿ ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಾಂಡವಿಯಾ ಸದನಕ್ಕೆ ತಿಳಿಸಿದರು.

2020ರಲ್ಲಿ 13,92,179, 2019ರಲ್ಲಿ 13,58,415 ಹಾಗೂ 2018ರಲ್ಲಿ 13,25,232 ಕ್ಯಾನ್ಸರ್‌ ಪ್ರಕರಣಗಳು ವರದಿಯಾಗಿವೆ ಎಂದು ಅವರು ಮಾಹಿತಿ ನೀಡಿದರು.

ADVERTISEMENT

ಆಯುಷ್ಮಾನ್‌ ಭಾರತ್ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುವ ಆರೋಗ್ಯ ಕೇಂದ್ರಗಳಲ್ಲಿ ಕ್ಯಾನ್ಸರ್‌ ಪತ್ತೆ ಸೇವೆ ಲಭ್ಯ ಇದೆ. ಆಯುಷ್ಮಾನ್‌ ಭಾರತ್–ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯಡಿ ಕ್ಯಾನ್ಸರ್‌ಗೆ ಚಿಕಿತ್ಸೆ ನೀಡಲಾಗುತ್ತದೆ ಎಂದು ತಿಳಿಸಿದರು.

ಕ್ಯಾನ್ಸರ್‌ ಸೇರಿದಂತೆ ಜೀವಕ್ಕೆ ಎರವಾಗುವ ಕಾಯಿಲೆಗಳಿಂದ ಬಳಲುವವರು ಬಿಪಿಎಲ್‌ ಕುಟುಂಬಕ್ಕೆ ಸೇರಿದವರಾಗಿದ್ದರೆ, ಅವರಿಗೆ ರಾಷ್ಟ್ರೀಯ ಆರೋಗ್ಯ ನಿಧಿ ಹಾಗೂ ಆರೋಗ್ಯ ಸಚಿವರ ವಿವೇಚನಾ ನಿಧಿಯಿಂದ (ಎಚ್‌ಎಂಡಿಜಿ) ಹಣಕಾಸು ನೆರವು ನೀಡಲಾಗುತ್ತದೆ ಎಂದೂ ಸಚಿವ ಮಾಂಡವಿಯಾ ತಿಳಿಸಿದರು.

ಎಚ್‌ಎಂಡಿಜಿಯಡಿ ಸದ್ಯ ₹ 20 ಲಕ್ಷ ಇದೆ. ಆದರೆ, ಈ ವರೆಗೆ ಯಾರೂ ನೆರವು ಕೋರಿ ಅರ್ಜಿ ಸಲ್ಲಿಸದ ಕಾರಣ, ಈ ಹಣ ಬಳಕೆಯಾಗಿಯೇ ಇಲ್ಲ ಎಂದರು.

ಎಚ್‌ಎಂಡಿಜಿಯಡಿ ಗರಿಷ್ಠ ₹ 1.25 ಲಕ್ಷ ನೆರವು ನೀಡಲು ಅವಕಾಶ ಇದೆ. ರಾಷ್ಟ್ರೀಯ ಆರೋಗ್ಯ ನಿಧಿಯಡಿ ಗರಿಷ್ಠ ₹ 15 ಲಕ್ಷದ ವರೆಗೆ ನೀಡಬಹುದಾಗಿದೆ ಎಂದೂ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.