
ಅಗರ್ತಲಾ: ಇಲ್ಲಿನ ಸಿಪಾಹಿಜಾಲಾ ಜಿಲ್ಲೆಯಲ್ಲಿ ಶಂಕಿತ ದನ ಕಳ್ಳಸಾಗಣೆದಾರರು ನಡೆಸಿದ ದಾಳಿಗೆ ಗಡಿ ಭದ್ರತಾ ಪಡೆ (ಬಿಎಸ್ಎಫ್) ಐದು ಮಂದಿ ಯೋಧರು ಗಾಯಗೊಂಡಿದ್ದಾರೆ.
ಭಾರತ– ಬಾಂಗ್ಲಾದೇಶ ಗಡಿಭಾಗದ ಬಿಶಾಲ್ಗಢ ಹಾಗೂ ಕಮ್ಥಾನಾ ರಸ್ತೆಯಲ್ಲಿ ಈ ಘಟನೆ ನಡೆದಿದೆ.
‘ಕಮ್ಥಾನಾ ಗಡಿಯ ಹೊರ ಠಾಣೆಯ ಬಳಿ ರಸ್ತೆಯಲ್ಲಿ ಬರುತ್ತಿದ್ದ ವಾಹನವೊಂದನ್ನು ಬಿಎಸ್ಎಫ್ ಯೋಧರು ತಡೆದಿದ್ದಾರೆ, ಆಗ ವಾಹನದ ಚಾಲಕ ನಿಲ್ಲಿಸದೇ, ಸೀದಾ ಸ್ಥಳೀಯ ಮಾರುಕಟ್ಟೆಗೆ ಕಡೆಗೆ ಕೊಂಡೊಯ್ದಿದ್ದಾನೆ. ಬಿಎಸ್ಎಫ್ ಯೋಧರು ವಾಹನವನ್ನು ಬೆನ್ನತ್ತಿದ್ದು, ಈ ವೇಳೆ ಕಳ್ಳ ಸಾಗಣೆದಾರರು ಹಾಗೂ ಯೋಧರ ನಡುವೆ ಮಾತಿನ ಚಕಮಕಿ ನಡೆದಿದೆ. ಎರಡು ಕಡೆ ಮಾತಿನ ಚಕಮಕಿ ಜೋರಾಗಿ ಯೋಧರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಯೋಧರು ಗಾಯಗೊಂಡಿದ್ದು, ವಾಹನಗಳು ಜಖಂಗೊಂಡಿವೆ’ ಎಂದು ಬಿಶಾಲ್ಗಢ ಪೊಲೀಸ್ ಠಾಣೆಯ ಠಾಣಾಧಿಕಾರಿ ಬಿಕಾಶ್ ದಾಸ್ ತಿಳಿಸಿದ್ದಾರೆ.
‘ಪೊಲೀಸರು ಪ್ರಕರಣ ದಾಖಲಿಸಿದ್ದು, ದಾಳಿಕೋರರನ್ನು ಬಂಧಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದು ಹೇಳಿದ್ದಾರೆ.
ಯೋಧರ ಮೇಲೆ ದಾಳಿ ನಡೆಯುತ್ತಿದ್ದರೂ, ಸ್ಥಳದಲ್ಲಿದ್ದ ನಿವಾಸಿಗಳು ಮಧ್ಯಪ್ರವೇಶಿಸಿ ತಡೆಯುವ ಪ್ರಯತ್ನ ನಡೆಸಿರಲಿಲ್ಲ ಎಂದು ಬಿಎಸ್ಎಫ್ ಅಧಿಕಾರಿಯೊಬ್ಬರು ಆಕ್ರೋಶ ವ್ಯಕ್ತಪಡಿಸಿದ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.