ದೆಹಲಿ: ದೆಹಲಿ ವಿಧಾನಸಭೆ ಚುನಾವಣೆ ಮತ ಎಣಿಕೆ ಕಾರ್ಯ ನಡೆಯುತ್ತಿರುವ ಮಧ್ಯೆಯೇದೆಹಲಿ ಬಿಜೆಪಿ ಘಟಕವು ತನ್ನ ಕಚೇರಿ ಎದುರು ಬ್ಯಾನರ್ವೊಂದನ್ನು ಹಾಕಿದ್ದು, ಅದರಲ್ಲಿ ಸೋಲು–ಗೆಲುವಿನ ಕುರಿತ ಮಾರ್ಮಿಕ ಸಂದೇಶವೊಂದನ್ನು ಉಲ್ಲೇಖಿಸಿದೆ.
ಅಮಿತ್ ಶಾ ಅವರ ಭಾವಚಿತ್ರವೂ ಈ ಬ್ಯಾನರ್ನಲ್ಲಿ ಸೋಲು ಮತ್ತು ಗೆಲುವುಗಳ ಕುರಿತು ಹೀಗೆ ಬರೆಯಲಾಗಿದೆ... ‘ವಿಜಯ ನಮ್ಮನ್ನು ಅಹಂಕಾರಿಗಳನ್ನಾಗಿ ಮಾಡುವುದಿಲ್ಲ. ಸೋಲು ನಮ್ಮನ್ನು ನಿರಾಶವಾದಿಗಳನ್ನಾಗಿ ಮಾಡುವುದಿಲ್ಲ,’ ಎಂಬ ಸಂದೇಶವನ್ನು ಹಿಂದಿಯಲ್ಲಿ ಉಲ್ಲೇಖಿಸಲಾಗಿದೆ.
ದೆಹಲಿ ವಿಧಾನಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು, ಈಗಾಗಲೇ ಎಎಪಿ ಬಹುಮತಕ್ಕೆ ಬೇಕಾದ ಸಂಖ್ಯೆಗಳನ್ನೂ ಮೀರಿದ ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ಅಧಿಕಾರಕ್ಕೇರಲು ಬೇಕಾದಷ್ಟು ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿಲ್ಲವಾದರೂ, ಕಳೆದ ಬಾರಿಗಿಂತಲೂ ಉತ್ತಮ ಸಾಧನೆ ಮಾಡುವಲ್ಲಿ ಅದುಸಫಲವಾಗಿದೆ.
ರಾಷ್ಟ್ರ ರಾಜಧಾನಿಯಲ್ಲಿ ಅಧಿಕಾರ ಹಿಡಿಯಲು ಬಿಜೆಪಿ ಸಾಕಷ್ಟು ಪರಿಶ್ರಮ ಹಾಕಿತ್ತು. ಸ್ವತಃ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಹಲವು ಸಮಾವೇಶಗಳಲ್ಲಿ ಭಾಗವಹಿಸಿದ್ದರು. ಬಿಜೆಪಿ ತನ್ನ 270 ಸಂಸದರನ್ನು ಚುನಾವಣಾ ಪ್ರಚಾರ ಕಣಕ್ಕೆ ಇಳಿಸಿತ್ತು.
ಬೆಳಗ್ಗೆ 10.30 ಹೊತ್ತಿಗೆ ಎಎಪಿ 49 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದರೆ, ಬಿಜೆಪಿ 21 ಕ್ಷೇತ್ರಗಳಲ್ಲಿ ಮುಂದಿದೆ. ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಕೇವಲ ಮೂರು ಸ್ಥಾನಗಳಲ್ಲಷ್ಟೇ ಗೆದ್ದಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.