ನವದೆಹಲಿ: ಶ್ರೀಮಂತ ಉದ್ಯಮಿಯೊಬ್ಬರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ ₹1 ಕೋಟಿ ಕಳ್ಳತನ ಮಾಡಿದ ಘಟನೆಯು ರಾಷ್ಟ್ರರಾಜಧಾನಿಯ ಶಾಲಿಮಾರ್ ಬಾಗ್ ಪ್ರದೇಶದಲ್ಲಿ ಜರುಗಿದೆ.
ಸಂಜಯ್ ಅಗರ್ವಾಲ್ ಎಂಬ ಉದ್ಯಮಿಯ ಮನೆಯಲ್ಲಿ ಕೆಲಸಕ್ಕಿದ್ದ, ಬಿಹಾರ ಮೂಲದ ಅನಿಲ್ ಕುಮಾರ್ ಅಲಿಯಾಸ್ ಕರಣ್(21) ಹಾಗೂ ದೀಪಕ್ ಕುಮಾರ್(26) ಎಂಬುವವರು ಹಣದ ಆಸೆಗಾಗಿ ಕಳ್ಳತನ ಮಾಡಿ, ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಶಾಲಿಮಾರ್ ಬಾಗ್ ಪ್ರದೇಶದಲ್ಲಿರುವ ತನ್ನ ಮನೆಯಲ್ಲಿ ಹೊಸದಾಗಿ ಮನೆಗೆಲಸಕ್ಕೆ ಸೇರಿದ್ದ ಅನಿಲ್ ಕಾಣೆಯಾಗಿದ್ದು, ₹1.25 ಕೋಟಿ ಹಣ ಕೂಡ ನಾಪತ್ತೆಯಾಗಿದೆ ಎಂದು ಮೇ.6ರಂದು ಸಂಜಯ್ ಅಗರ್ವಾಲ್ ಅವರು ದೂರು ದಾಖಲಿಸಿದ್ದರು.
ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರಿಗೆ, ಗಾಜಿಯಾಬಾದ್ ಬಳಿ ದಾಳಿಯಲ್ಲಿ ಆರೋಪಿ ಅನಿಲ್ ಸೆರೆಸಿಕ್ಕಿದ್ದಾನೆ.
ವಿಚಾರಣೆಯ ವೇಳೆ ಕಳ್ಳತನ ಮಾಡಿರುವುದಾಗಿ ಆರೋಪಿ ಅನಿಲ್ ತಪ್ಪೊಪ್ಪಿಕೊಂಡಿದ್ದು, ಈ ವೇಳೆ ಇನ್ನೊಬ್ಬ ಆರೋಪಿ ದೀಪಕ್ ಕುಮಾರ್ ಕೂಡ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಭೀಷ್ಮ ಸಿಂಗ್ ಮಾಹಿತಿ ನೀಡಿದ್ದಾರೆ.
ಪ್ರಕರಣದ ಇನ್ನೊಬ್ಬ ಆರೋಪಿ ದೀಪಕ್ ಕುಮಾರ್ನನ್ನು ಕೂಡ ಗಾಜಿಯಾಬಾದ್ ಬಳಿಯ ವಸತಿ ಪ್ರದೇಶದಲ್ಲಿ ಬಂಧಿಸಲಾಗಿದೆ.
ಆರೋಪಿಗಳಿಂದ ₹1.06 ಕೋಟಿ ನಗದು, ಮೂರು ಬ್ಯಾಗ್ಗಳನ್ನು ವಶಪಡಿಸಿಕೊಂಡಿದ್ದು, ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.