ADVERTISEMENT

ಆಧಾರ್‌ ಬಳಕೆ, ಎಚ್ಚರಿಕೆ ಇರಲಿ: ಭಾರತದ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರ ಸಲಹೆ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2022, 21:03 IST
Last Updated 30 ಡಿಸೆಂಬರ್ 2022, 21:03 IST
   

ನವದೆಹಲಿ: ಸೌಲಭ್ಯಗಳು ಮತ್ತು ಸೇವೆಗಳನ್ನು ಪ‍ಡೆದುಕೊಳ್ಳಲು ಆಧಾರ್ ಸಂಖ್ಯೆಯನ್ನು ವಿಶ್ವಾಸ ದಿಂದಲೇ ಬಳಸಿ ಎಂದು ಭಾರತದ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರವು (ಯುಐಡಿಎಐ) ಸಲಹೆ ಕೊಟ್ಟಿದೆ. ಆದರೆ, ಬ್ಯಾಂಕ್‌ ಖಾತೆ, ಪ್ಯಾನ್‌ ಕಾರ್ಡ್‌ ಅಥವಾ ‍ಪಾಸ್‌ಪೋರ್ಟ್‌ನಂತಹ ಇತರ ದಾಖಲೆಗಳನ್ನು ಬಳಸುವಾಗ ವಹಿ ಸುವ ಎಲ್ಲ ಎಚ್ಚರವೂ ಆಧಾರ್‌ ಬಳಸುವಾಗಲೂ ಇರಬೇಕು ಎಂದಿದೆ.

ಆಧಾರ್‌ ಸಂಖ್ಯೆಯನ್ನು ಹಂಚಿ ಕೊಳ್ಳಲು ಇಷ್ಟ ಇಲ್ಲ ಎಂದಾದರೆ ಗುರುತು ದೃಢೀಕರಣಕ್ಕೆ ವರ್ಚುವಲ್‌ ಗುರುತು ಸಂಖ್ಯೆಯನ್ನು (ವಿಐಡಿ) ಬಳಸುವ ಅವಕಾಶ ಜನರಿಗೆ ಇದೆ. ಯುಐಡಿಎಐ ವೆಬ್‌ಸೈಟ್‌ ಅಥವಾ ಮೈಆಧಾರ್ ಪೋರ್ಟಲ್‌ಗೆ ಭೇಟಿ ಕೊಟ್ಟು ಅತ್ಯಂತ ಸುಲಭವಾಗಿ ವಿಐಡಿ ಪಡೆದುಕೊಳ್ಳಬಹುದು. ಆಧಾರ್‌ ಬದಲಿಗೆ ಗುರುತು ದೃಢೀಕರಣಕ್ಕೆ ವಿಐಡಿಯನ್ನು ಬಳಸಿಕೊಳ್ಳಬ
ಹುದು. ಅವಶ್ಯಕತೆ ಮುಗಿದ ಬಳಿಕ ವಿಐಡಿಯನ್ನು ಬದಲಾಯಿಸುವ ಅವಕಾಶವೂ ಇದೆ ಎಂದು ಯುಐಡಿಎಐ ಹೇಳಿದೆ.

ಆಧಾರ್‌ ಕಾರ್ಡ್‌, ಪಿವಿಸಿ ಕಾರ್ಡ್‌ ಅಥವಾ ಅವುಗಳ ಪ್ರತಿಗಳನ್ನು ಎಲ್ಲೆಂದರಲ್ಲಿ ಬಿಟ್ಟುಬಿಡಬಾರದು. ಸಾಮಾಜಿಕ ಜಾಲತಾಣಗಳಂತಹ ಸಾರ್ವಜನಿಕ ವೇದಿಕೆ ಗಳಲ್ಲಿ ಆಧಾರ್‌ ಸಂಖ್ಯೆಯನ್ನು ಬಹಿರಂಗಪ‍ಡಿಸಬಾರದು. ಗುರುತು ದೃಢೀಕರಣಕ್ಕಾಗಿ ಆಧಾರ್‌ ಒಟಿಪಿಯನ್ನು (ಒಂದು ಬಾರಿಯ ಪಾಸ್‌ವರ್ಡ್‌) ಯಾರೊಂದಿಗೂ ಹಂಚಿಕೊಳ್ಳುವ ಅಗತ್ಯ ಇಲ್ಲ. ಎಂ–ಆಧಾರ್‌ ಪಿನ್‌ ಸಂಖ್ಯೆಯನ್ನು ಇತರರೊಂದಿಗೆ ಹಂಚಿಕೊಳ್ಳಬೇಡಿ ಎಂಬ ಸಲಹೆಯನ್ನೂ ಕೊಟ್ಟಿದೆ.

ADVERTISEMENT

ಆಧಾರ್‌ ಲಾಕ್‌ ಮತ್ತು ಬಯೊಮೆಟ್ರಿಕ್ ಲಾಕ್‌ ವ್ಯವಸ್ಥೆ ಲಭ್ಯ ಇವೆ. ನಿರ್ದಿಷ್ಟ ಅವಧಿಗೆ ಆಧಾರ್‌ ಬಳಸುವುದಿಲ್ಲ ಎಂದು ನಿರ್ಧರಿಸಿದರೆ ಆ ಅವಧಿಗೆ ಆಧಾರ್‌ ಅಥವಾ ಬಯೊಮೆಟ್ರಿಕ್‌ ಅನ್ನು ಲಾಕ್‌ ಮಾಡುವ ಸೌಲಭ್ಯ ಇದೆ. ಅಗತ್ಯ ಬಂದಾಗ ಲಾಕ್‌ ತೆರೆಯಬಹುದು. ಇದು ಅತ್ಯಂತ ಸುಲಭದ ಪ್ರಕ್ರಿಯೆ ಎಂದೂ ತಿಳಿಸಿದೆ.

ಗುರುತು ದೃಢೀಕರಣಕ್ಕಾಗಿ ಆಧಾರ್‌ ಸಂಖ್ಯೆಯನ್ನು ಪಡೆದುಕೊಳ್ಳುವ ಸಂಸ್ಥೆಯು ಆಧಾರ್ ಪ‍ಡೆದುಕೊಳ್ಳುವುದರ ಉದ್ದೇಶವನ್ನು ಸ್ಪಷ್ಟಪಡಿಸಬೇಕು. ಜನರು ಕೂಡ ಉದ್ದೇಶವನ್ನು ಕೇಳಿ ತಿಳಿದುಕೊಳ್ಳಬೇಕು ಎಂದು ಯುಐಡಿಎಐ ಹೇಳಿದೆ.

ಆಧಾರ್‌ ದುರ್ಬಳಕೆಯ ಸಂದೇಹ ಬಂದರೆ ಉಚಿತ ಸಹಾಯವಾಣಿಗೆ ಕರೆ ಮಾಡಿ

ಸಹಾಯವಾಣಿ ಸಂಖ್ಯೆ 1947, ಇದು ದಿನದ 24 ಗಂಟೆಯೂ ಲಭ್ಯ

help@uidai.gov.in– ಈ ಇ–ಮೇಲ್‌ ವಿಳಾಸಕ್ಕೆ ಸಂದೇಶವನ್ನೂ ಕಳುಹಿಸಬಹುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.