ADVERTISEMENT

ಬೆಳಗಾವಿ ಅಧಿವೇಶನದಲ್ಲಿ ಚರ್ಚಿಸಲು 24 ಅಂಶಗಳ ಪಟ್ಟಿ ನೀಡಿದ ಎಎಪಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಡಿಸೆಂಬರ್ 2022, 2:14 IST
Last Updated 18 ಡಿಸೆಂಬರ್ 2022, 2:14 IST
ಮಲ್ಕಾಪುರೆ ಅವರನ್ನು ಭೇಟಿಯಾದ ಎಎಪಿ ನಿಯೋಗ
ಮಲ್ಕಾಪುರೆ ಅವರನ್ನು ಭೇಟಿಯಾದ ಎಎಪಿ ನಿಯೋಗ    

ಬೆಂಗಳೂರು: ಬೆಳಗಾವಿ ಅಧಿವೇಶನದ ಹಿನ್ನೆಲೆಯಲ್ಲಿ ವಿಧಾನ ಪರಿಷತ್‌ನ ಹಂಗಾಮಿಸಭಾಪತಿ ರಘುನಾಥರಾವ್ ಮಲ್ಕಾಪುರೆ ಅವರನ್ನು ಶನಿವಾರ ಭೇಟಿಯಾಗಿರುವ ಆಮ್ ಆದ್ಮಿ ಪಕ್ಷ (ಎಎಪಿ)ದ ರಾಜ್ಯ ಘಟಕದ ನಿಯೋಗ, 24 ಅಂಶಗಳ ಪಟ್ಟಿಯನ್ನು ನೀಡಿ ಉಭಯ ಸದನಗಳಲ್ಲಿ ಚರ್ಚೆಗೆ ಒಳಪಡಿಸುವಂತೆ ಆಗ್ರಹಿಸಿದೆ.

‘ಕರ್ನಾಟಕದ ಶಾಸನಸಭೆಯಲ್ಲಿ ಎಎಪಿ ಸದಸ್ಯರನ್ನು ಹೊಂದಿಲ್ಲ. ಆದರೂ, ಬೆಳಗಾವಿ ಅಧಿವೇಶನದಲ್ಲಿ ಎಎಪಿ ಭಾಗವಾಗಲಿದೆ. ಅಧಿವೇಶನದಲ್ಲಿ ಚರ್ಚಿಸಬೇಕಾದ ವಿಷಯಗಳನ್ನು ಸ್ಪೀಕರ್‌ಗೆ ನೀಡಲಾಗಿದೆ’ ಎಂದು ರಾಜ್ಯ ಎಎಪಿ ಟ್ವಿಟರ್‌ ಖಾತೆಯಿಂದ ಪೋಸ್ಟ್‌ ಪ್ರಕಟಿಸಲಾಗಿದೆ.

ಅಧಿವೇಶನದಲ್ಲಿ ಚರ್ಚೆಯಾಗಬೇಕೆಂದು ಎಎಪಿ ತಿಳಿಸಿರುವ 24 ಅಂಶಗಳು

ADVERTISEMENT

1. ಕೃಷ್ಣ ಜಲವಿವಾದ ನ್ಯಾಯಮಂಡಳಿ (ಕೆಡಬ್ಲ್ಯುಡಿಟಿ, ಗೆಜೆಟ್ ನೋಟಿಫಿಕೇಶನ್‌ 2013ರಲ್ಲಿ ಹೇಳಿರುವಂತೆ ಆಲಮಟ್ಟಿ ಅಣೆಕಟ್ಟೆಯ ಎತ್ತರವನ್ನು 524.256 ಮೀಟರ್‌ಗೆ ಹೆಚ್ಚಿಸುವುದು).

2. ಮಹಾರಾಷ್ಟ್ರ ಸರ್ಕಾರ ಮಹಾಜನ್ ವರದಿಯನ್ನು ಒಪ್ಪುವುದು ಹಾಗೂ ಅದರ ಅನುಷ್ಠಾನ.

3. ಮಹದಾಯಿ ಯೋಜನೆಗೆ ಕೇಂದ್ರ ಸರ್ಕಾರದ ಪರಿಸರ ಇಲಾಖೆಯಿಂದ ಒಪ್ಪಿಗೆ ಪಡೆಯುವುದು ಹಾಗೂ ಮೇಕೆದಾಟು ಯೋಜನೆಯನ್ನು ಜಾರಿಗೆ ತರುವುದು.

4. ಡಿ.ಎಂ.ನಂಜುಡಪ್ಪ ಸಮಿತಿ ವರದಿಯಲ್ಲಿ ಹೇಳಿರುವಂತೆ ಅಭಿವೃದ್ಧಿಯಲ್ಲಿ ಉತ್ತರ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯಗಳ ತಡೆಗೆ ಕ್ರಮ.

5. ಆರ್ಟಿಕಲ್ 371ಜೆ ಅಡಿಯಲ್ಲಿ ಹೈದರಾಬಾದ್– ಕರ್ನಾಟಕದ ಜನರಿಗೆ ನೇರ ಮೀಸಲಾತಿ ನೀಡದಿರುವುದು.

6. ಹಲವು ಬಿಜೆಪಿ ಮುಖಂಡರು ಬೆಂಗಳೂರಿನಲ್ಲಿ ದೊಡ್ಡ ಪ್ರಮಾಣದ ಹೂಡಿಕೆ ಮಾಡಿರುವುದರಿಂದ ಬೆಂಗಳೂರು ಕೇಂದ್ರಿತ ಅಭಿವೃದ್ಧಿ ಮಾಡುತ್ತಿರುವುದು ಹಾಗೂ ರಾಜ್ಯದ ಇತರೆ ನಗರಗಳಲ್ಲಿ ಹೂಡಿಕೆ ಆಗದೇ ಇರುವುದು.

7. ಸ್ಥಳೀಯ ಭಾಷೆಯಲ್ಲಿ ಬ್ಯಾಂಕ್ ಅರ್ಜಿಗಳನ್ನು ಮುದ್ರಿಸುವುದು.

8. ಅತಿವೃಷ್ಟಿ ಹಾಗೂ ಅನಾವೃಷ್ಟಿ ಪರಿಹಾರ ಇನ್ನೂ ಬಾಕಿಯಿರುವುದು.

9. ಕೃಷಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನಿಗದಿ ಪಡಿಸುವುದು.

10. ಸರ್ಕಾರಿ ನೌಕರರ ನೇಮಕಾತಿಯಲ್ಲಿ ಪಾರದರ್ಶಕತೆ ತರುವುದು.

11. ಬೆಂಗಳೂರು ಉಪನಗರ ಯೋಜನೆಯ ಕಾರ್ಯಾರಂಭ.

12. ಕಬ್ಬು ಬೆಳೆಗೆ ಪಂಜಾಬ್ ಮಾದರಿಯಲ್ಲಿ ₹3,800 ಕನಿಷ್ಠ ಬೆಲೆ ನಿಗದಿ ಪಡಿಸುವುದು.

13. ತೆಂಗಿನಕಾಯಿ ಕೊಬ್ಬರಿ, ಅಡಕೆ, ಕಾಳುಮೆಣಸು ಸೇರಿದಂತೆ ಕೃಷಿ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿಪಡಿಸುವುದು ಹಾಗೂ ತುರ್ತಾಗಿ ಖರೀದಿ ಕೇಂದ್ರ ತೆರೆಯುವುದು.

14. ಪಂಜಾಬ್‌ನಂತೆ ಕರ್ನಾಟಕದಲ್ಲೂ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೆ ತರುವುದು.

15. ಗುತ್ತಿಗೆ ನೌಕರರ ನೇಮಕಾತಿಯಲ್ಲಿನ ಗೊಂದಲಗಳನ್ನು ಬಗೆಹರಿಸುವುದು.

16. ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡುವುದು.

17. ರಾಜ್ಯದಲ್ಲಿ ಖಾಲಿಯಿರುವ 25 ಲಕ್ಷ ಸರ್ಕಾರಿ ಉದ್ಯೋಗಗಳನ್ನು ಶೀಘ್ರವೇ ಭರ್ತಿ ಮಾಡುವುದು.

18. ಬೀದಿಬದಿ ವ್ಯಾಪಾರಿಗಳ ಶೋಷಣೆ ತಪ್ಪಿಸಲು ಸೂಕ್ತ ನೀತಿ ರೂಪಿಸುವುದು.

19. ಬಿಬಿಎಂಪಿ ವ್ಯಾಪ್ತಿಯ 27 ಕ್ಷೇತ್ರಗಳ ಅಭಿವೃದ್ಧಿ ಹಾಗೂ ರಸ್ತೆ ಸುಧಾರಣೆಗೆ ಸಂಬಂಧಿಸಿ ಶ್ವೇತಪತ್ರ ಹೊರಡಿಸುವುದು.

20. ಮಹಿಳೆಯರ ಸುರಕ್ಷತೆಗೆ ನಿರ್ಭಯ ನಿಧಿ ಸಮರ್ಪಕವಾಗಿ ಸದ್ಬಳಕೆ ಆಗುತ್ತಿಲ್ಲ.

21. ರಾಜ್ಯ ರಾಜಧಾನಿ ಬೆಂಗಳೂರಿನ ಸಂಚಾರ ನಿರ್ವಹಣೆ.

22. ಕೆಪಿಎಸ್‌ಸಿಯಲ್ಲಿನ ಬಾಕಿಯಿರುವ ಎಲ್ಲ ಉದ್ಯೋಗಗಳ ನೇಮಕಾತಿ.

23. ವಸತಿರಹಿತರಿಗೆ ವಸತಿ ನೀಡುವುದರಲ್ಲಿ ವಸತಿ ಇಲಾಖೆ ಸಂಪೂರ್ಣ ವಿಫಲವಾಗಿರುವುದು.

24. ವಕೀಲರ ಸಂರಕ್ಷಣಾ ಕಾಯಿದೆಯ ಶೀಘ್ರ ಜಾರಿ.

ಈ ಎಲ್ಲ ಅಂಶಗಳನ್ನು ವಿಧಾನಮಂಡಳ ಅಧಿವೇಶನದ ಉಭಯ ಸದನಗಳಲ್ಲಿ ಚರ್ಚೆ ಮಾಡಬೇಕು ಎಂದು ಎಎಪಿ ಒತ್ತಾಯಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.