
ಕೋಲ್ಕತ್ತ: ‘ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಯ ಸಮಗ್ರ ವಿಶೇಷ ಪರಿಷ್ಕರಣೆ (ಎಸ್ಐಆರ್) ನಡೆಸಿ, ಹೊರಡಿಸಿದ ಕರಡು ಮತದಾರರ ಪಟ್ಟಿಯಲ್ಲಿ 58.02 ಲಕ್ಷ ಮಂದಿಯ ಹೆಸರು ಕೈಬಿಡಲಾಗಿತ್ತು. ಆ ಹೆಸರುಗಳ ಪೈಕಿ ಬಾಂಗ್ಲಾದೇಶದ ಅಕ್ರಮ ವಲಸಿಗರು, ರೋಹಿಂಗ್ಯಗಳ ಸಂಖ್ಯೆ ಎಷ್ಟಿತ್ತು ಎಂಬುದನ್ನು ಚುನಾವಣಾ ಆಯೋಗ ಬಹಿರಂಗ ಪಡಿಸಬೇಕು’ ಎಂದು ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಗುರುವಾರ ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದ ಜನಸಂಖ್ಯೆ 10.05 ಕೋಟಿ, ಮತದಾರ ಪಟ್ಟಿಯಿಂದ ತೆಗದುಹಾಕಿದ್ದು 58.20 ಲಕ್ಷ ಮಂದಿಯ ಹೆಸರು. ಇದು ಒಟ್ಟು ಜನಸಂಖ್ಯೆಯ ಶೇ 5.79 ಆಗಿರುತ್ತದೆ. ಎಸ್ಐಆರ್ ನಡೆದ ಎಲ್ಲಾ ರಾಜ್ಯಗಳ ಪೈಕಿ ಈ ಸಂಖ್ಯೆ ಅತ್ಯಂತ ಕಡಿಮೆ. ಹೀಗಾಗಿ ಹೆಸರು ಕೈಬಿಟ್ಟಿರುವ ಪೈಕಿ ಬಾಂಗ್ಲಾದೇಶಿ ಹಾಗೂ ರೋಹಿಂಗ್ಯಗಳ ಸಂಖ್ಯೆಯನ್ನು ಇ.ಸಿ. ಬಹಿರಂಗ ಪಡಿಸಬೇಕು’ ಎಂದಿದ್ದಾರೆ.
ಇದೇ ವೇಳೆ, 2021ರ ವಿಧಾನಸಭೆ ಚುನಾವಣೆಯಲ್ಲಿ ಟಿಎಂಸಿ ಗೆಲುವು ಸಾಧಿಸಿದ ಬಳಿಕ ಕೇಂದ್ರ ಸರ್ಕಾರವು ಪಶ್ಚಿಮ ಬಂಗಾಳವನ್ನು ಗುರಿಯಾಗಿಸಿಕೊಂಡಿದೆ. ರಾಜ್ಯದ ಜನರಿಗೆ ಕಿರುಕುಳ ನೀಡುವುದು ಅದರ ಕಾರ್ಯಸೂಚಿಯಾಗಿದೆ ಎಂದೂ ದೂರಿದ್ದಾರೆ.
ಇತ್ತ, ಬೇರೆ ರಾಜ್ಯಗಳಿಗೆ ಹೋಲಿಸಿದರೆ ಪಶ್ಚಿಮ ಬಂಗಾಳದಲ್ಲಿ ಎಸ್ಐಆರ್ ಪ್ರಕ್ರಿಯೆಯಲ್ಲಿ ವಿವಿಧ ನಿಯಮ, ನೀತಿಗಳನ್ನು ಅನುಸರಿಸಲಾಗಿದೆ ಎಂದು ಸಚಿವೆ ಚಂದ್ರಿಮಾ ಭಟ್ಟಾಚಾರ್ಯ, ಶಶಿ ಪಾಂಜ, ಅರೂಪ್ ಬಿಸ್ವಾಸ್ ಅವರನ್ನೊಳಗೊಂಡ ಟಿಎಂಸಿ ನಿಯೋಗ ಆರೋಪಿಸಿದೆ. ಜತೆಗೆ ಬಿಜೆಪಿಗೆ ಅನುಕೂಲ ಮಾಡಿಕೊಡಲು 58 ಲಕ್ಷ ನೈಜ ಮತದಾರರ ಹೆಸರನ್ನು ಕೈಬಿಡಲಾಗಿದೆ ಎಂದೂ ದೂರಿದೆ.
ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಅಗರ್ವಾಲ್ ಅವರನ್ನು ಭೇಟಿಯಾದ ನಿಯೋಗ ತಮ್ಮ ಕುಂದುಕೊರತೆ ಪರಿಹರಿಸುವಂತೆ ಮನವಿಯನ್ನೂ ಸಲ್ಲಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.