ADVERTISEMENT

ಅಚ್ಛೇ ದಿನ, 15 ಲಕ್ಷ ಬ್ಯಾಂಕ್ ಖಾತೆಗೆ ಜಮೆ: ಏಪ್ರಿಲ್ ಫೂಲ್ ತಮಾಷೆಯಷ್ಟೆ; ರಾವುತ್

ಪಿಟಿಐ
Published 1 ಏಪ್ರಿಲ್ 2022, 9:57 IST
Last Updated 1 ಏಪ್ರಿಲ್ 2022, 9:57 IST
ಸಂಜಯ್ ರಾವುತ್
ಸಂಜಯ್ ರಾವುತ್   

ಮುಂಬೈ: ಏರಿಕೆಯಾಗುತ್ತಿರುವ ಇಂಧನ ಬೆಲೆ ಮತ್ತು ಇತರೆ ವಿಚಾರಗಳ ಬಗ್ಗೆ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಶಿವಸೇನೆ ಸಂಸದ ಸಂಜಯ್ ರಾವುತ್, 'ಅಚ್ಛೇ ದಿನ' ಮತ್ತು ಜನರ ಬ್ಯಾಂಕ್ ಖಾತೆಗಳಿಗೆ 15 ಲಕ್ಷ ಜಮೆ ಮಾಡುವ ಭರವಸೆಗಳು 'ಏಪ್ರಿಲ್ ಫೂಲ್' ದಿನದ ಹಾಸ್ಯಗಳು ಎಂದು ಕಿಡಿಕಾರಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಚ್ಛೇ ದಿನ, ನಾಗರಿಕರ ಬ್ಯಾಂಕ್ ಖಾತೆಗಳಿಗೆ 15 ಲಕ್ಷ ಜಮೆ ಮಾಡುವುದು, ಪಾಕ್ ಆಕ್ರಮಿಕ ಕಾಶ್ಮೀರವನ್ನು (ಪಿಒಕೆ) ಭಾರತದೊಂದಿಗೆ ಏಕೀಕರಿಸುವ ಮತ್ತು ಉದ್ಯೋಗಗಳನ್ನು ನೀಡುವ ಭರವಸೆಗಳು ಕೇವಲ ಏಪ್ರಿಲ್ ಫೂಲ್ ತಮಾಷೆಯಲ್ಲದೆ ಬೇರೇನೂ ಅಲ್ಲ ಎಂದಿದ್ದಾರೆ.

ಕಳೆದ ಏಳು ವರ್ಷಗಳಿಂದ ಸರ್ಕಾರ ಜನರನ್ನು ಮೂರ್ಖರನ್ನಾಗಿಸಿದೆ ಎಂದು ಆರೋಪಿಸಿದ ಅವರು, ಜನಸಾಮಾನ್ಯರಿಗೆ ಜೀವನ್ಮರಣದ ಸ್ಥಿತಿ ನಿರ್ಮಾಣವಾಗಿದ್ದು, ಸರ್ಕಾರ ಈಗ ಅವರ ಕಲ್ಯಾಣಕ್ಕಾಗಿ ಶ್ರಮಿಸಬೇಕು ಎಂದರು.

ADVERTISEMENT

ಸರ್ಕಾರವು ಸುಳ್ಳು ಹೇಳುವುದನ್ನು ನಿಲ್ಲಿಸಬೇಕು ಮತ್ತು ಕೂಡಲೇ ಜನರ ಕಲ್ಯಾಣಕ್ಕಾಗಿ ಕೆಲಸ ಮಾಡಬೇಕು. ಇದು ಸಾಮಾನ್ಯ ಜನರ ಜೀವನ್ಮರಣದ ವಿಚಾರ. ನಾವು ಸೇಡಿನ ರಾಜಕೀಯದಲ್ಲಿ ತೊಡಗುವುದಿಲ್ಲ ಎಂದು ಹೇಳುವುದು ಕೂಡ ಕಳೆದ ಕೆಲವು ವರ್ಷಗಳಿಂದ ದೇಶದಲ್ಲಿ ನಡೆಯುತ್ತಿರುವ ಏಪ್ರಿಲ್ ಫೂಲ್ ಸರಣಿಯ ಭಾಗವಾಗಿದೆ' ಎಂದು ಅವರು ಬಿಜೆಪಿಯನ್ನು ಗುರಿಯಾಗಿಸಿಕೊಂಡು ಹೇಳಿದರು.

'ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರುತ್ತಲೇ ಇದೆ. ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವವರು ಯಾವಾಗಲು ಜನರನ್ನು ಮೂರ್ಖರನ್ನಾಗಿ ಮಾಡುತ್ತಲೇ ಇದ್ದಾರೆ. ಕಳೆದ ಏಳು ವರ್ಷಗಳಿಂದಲೂ ಸಾಮಾನ್ಯ ಜನರನ್ನು ಮೂರ್ಖರನ್ನಾಗಿ ಮಾಡಲಾಗಿದೆ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.