ಟಿವಿಕೆ ಪಕ್ಷದ ಸಂಸ್ಥಾಪಕ ವಿಜಯ್ ಅವರು ಇತ್ತೀಚೆಗೆ ಪ್ರೇಮಲತಾ ವಿಜಯಕಾಂತ್ ಅವರನ್ನು ಭೇಟಿ ಮಾಡಿದ ಸಂದರ್ಭ
ಎಕ್ಸ್ ಚಿತ್ರ
ಟ್ಯೂಟಿಕಾರ್ನ್: ‘ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಟಿವಿಕೆ ಪಕ್ಷ ಸಂಸ್ಥಾಪಕ ನಟ ವಿಜಯ್ ಅವರು ಸಾಕಷ್ಟು ಪರಿಣಾಮ ಬೀರಲಿದ್ದಾರೆ’ ಎಂದು ದೇಶೀಯ ಮುರ್ಪೊಕ್ಕು ದ್ರಾವಿಡರ್ ಕಳಗಂ (ಡಿಎಂಡಿಕೆ) ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರೇಮಲತಾ ವಿಜಯಕಾಂತ್ ಶುಕ್ರವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ‘ಇತರರು ಊಹಿಸಿದಷ್ಟು ಕಳಪೆ ಪ್ರದರ್ಶನ ನೀಡದಿರಬಹುದು. ಆದರೆ ನನ್ನ ಪತಿ ವಿಜಯಕಾಂತ್ ಅವರು ಡಿಎಂಡಿಕೆ ಪಕ್ಷ ಸ್ಥಾಪಿಸಿದ ಸಂದರ್ಭದಲ್ಲಿ 2006ರ ಚುನಾವಣೆಯಲ್ಲಿ ಒಬ್ಬರೇ ಸ್ಪರ್ಧಿಸಿ ರಾಜ್ಯದ ಗಮನ ಸೆಳೆದಿದ್ದರು. ವಿರುದ್ಧಾಚಲಂ ಕ್ಷೇತ್ರದಿಂದ ಅವರು ಗೆದ್ದಿದ್ದರು. ಯಾವುದೇ ಪಕ್ಷದ ಮೈತ್ರಿ ಇಲ್ಲದೆ ವಿಧಾನಸಭೆಯ ಎಲ್ಲಾ 234 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದೆವು. ನಾವೆಲ್ಲರೂ ಸೋತೆವು. ನಟ ವಿಜಯ್ ಅವರ ಪ್ರವೇಶವೂ 2026ರ ಚುನಾವಣೆಯಲ್ಲಿ ಪರಿಣಾಮ ಬೀರಲಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.
‘2011ರ ಚುನಾವಣೆಯಲ್ಲಿ ವಿಜಯಕಾಂತ್ ಅವರು ವಿರೋಧ ಪಕ್ಷದ ನಾಯಕರಾದರು. ಆ ಚುನಾವಣೆಯಲ್ಲಿ ಎಐಎಡಿಎಂಕೆ ಜತೆ ಮೈತ್ರಿ ಮಾಡಿಕೊಂಡಿದ್ದ ಡಿಎಂಡಿಕೆ ತನಗೆ ಲಭ್ಯವಾದ 40 ಕ್ಷೇತ್ರಗಳಲ್ಲಿ 29 ಅನ್ನು ಗೆದ್ದುಕೊಂಡಿತ್ತು’ ಎಂದು ನೆನಪಿಸಿಕೊಂಡಿದ್ದಾರೆ.
ಡಿಎಂಡಿಕೆ ಯಾರೊಂದಿಗೆ ಮೈತ್ರಿ ಮಾಡಿಕೊಳ್ಳಲಿದೆ ಎಂಬ ಪ್ರಶ್ನೆಗೆ ಸಿಡುಕಿನಿಂದಲೇ ಉತ್ತರಿಸಿದ ಪ್ರೇಮಲತಾ, ‘ಚುನಾವಣೆ ಹತ್ತಿರವಾಗುತ್ತಿದ್ದಂತೆ ನಿರ್ಧರಿಸಲಾಗುವುದು. ವರದಿಗಾರರಿಗೆ ಮೈತ್ರಿ ಮತ್ತು ವಿಜಯ್ ಕುರಿತ ಪ್ರಶ್ನೆಯಷ್ಟೇ ಏಕೆ ಕೇಳಬೇಕೆನಿಸುತ್ತದೆ. ಕೇಳಲು ಜನರ ಸಮಸ್ಯೆಗಳು ಇಲ್ಲವೇ’ ಎಂದು ಪ್ರಶ್ನಿಸಿದ್ದಾರೆ.
'ರಾಜಕೀಯ ಎನ್ನುವುದು ಜನರ ಸಮಸ್ಯೆಗಳನ್ನು ಪರಿಹರಿಸಬೇಕು. ರಾಜಕೀಯ ಪಕ್ಷವಾಗಿ ಡಿಎಂಡಿಕೆಯು ಸಾಮಾನ್ಯ ಜನರ ಸಮಸ್ಯೆಗಳನ್ನು ಪರಿಹರಿಸುವ ಧ್ಯೇಯ ಹೊಂದಿದೆ’ ಎಂದು ಪ್ರೇಮಲತಾ ಹೇಳಿದ್ದಾರೆ.
ನಟ ವಿಜಯ್ ಅವರು ಇತ್ತೀಚೆಗೆ ವಿಜಯಕಾಂತ್ ಅವರ ಮನೆಗೆ ಭೇಟಿ, ಅವರ ಭಾವಚಿತ್ರಕ್ಕೆ ಗೌರವ ಸಲ್ಲಿಸಿದ್ದು ಸುದ್ದಿಯಾಗಿತ್ತು. ಈ ಸಂದರ್ಭದಲ್ಲಿ ಪ್ರೇಮಲತಾ ಹಾಗೂ ಕುಟುಂಬದವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.