ADVERTISEMENT

ವಿಪಕ್ಷ ಸದಸ್ಯರಿಗೆ ಅವಕಾಶ ಕೊಡುತ್ತಿಲ್ಲ: ಸ್ಪೀಕರ್ ಬಿರ್ಲಾ ವಿರುದ್ಧ ಮಹುವಾ ಕಿಡಿ

ಪ್ರಜಾಪ್ರಭುತ್ವ ಅಪಾಯದಲ್ಲಿದೆ, ಸ್ಪೀಕರ್‌ ನಾಯಕತ್ವ ವಹಿಸಿದ್ದಾರೆ ಎಂದ ಮಹುವಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಮಾರ್ಚ್ 2023, 5:31 IST
Last Updated 16 ಮಾರ್ಚ್ 2023, 5:31 IST
ಮಹುವಾ ಮೊಯಿತ್ರಾ (ಕಡತ ಚಿತ್ರ)
ಮಹುವಾ ಮೊಯಿತ್ರಾ (ಕಡತ ಚಿತ್ರ)   

ಬೆಂಗಳೂರು: ಲೋಕಸಭೆಯಲ್ಲಿ ವಿರೋಧ ‍ಪಕ್ಷಗಳ ಸದಸ್ಯರಿಗೆ ಮಾತನಾಡಲು ಸ್ಪೀಕರ್ ಓಂ ಬಿರ್ಲಾ ಅವರು ಅವಕಾಶ ನೀಡುತ್ತಿಲ್ಲ ಎಂದು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು ದೂರಿದ್ದಾರೆ.

ಟ್ವೀಟ್‌ ಮೂಲಕ ಸ್ಪೀಕರ್‌ ಓಂ ಬಿರ್ಲಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಅವರು, ಈ ಟ್ವೀಟ್‌ಗಾಗಿ ತಾವು ಜೈಲಿಗೆ ಹೋಗಲು ಸಿದ್ಧ ಎಂದು ಬರೆದುಕೊಂಡಿದ್ದಾರೆ.

‘ಕಳೆದ ಮೂರು ದಿನಗಳಿಂದ ಸ್ಪೀಕರ್ ಓಂ ಬಿರ್ಲಾ ಅವರು ಬಿಜೆಪಿ ಸಚಿವರಿಗೆ ಮಾತ್ರ ಮೈಕ್‌ನಲ್ಲಿ ಮಾತನಾಡಲು ಅವಕಾಶ ಕೊಡುತ್ತಿದ್ದಾರೆ. ವಿರೋಧ ಪಕ್ಷಗಳ ಒಬ್ಬನೇ ಒಬ್ಬ ಸದಸ್ಯರಿಗೆ ಮಾತನಾಡಲು ಅವಕಾಶ ನೀಡದೆ ಸದನವನ್ನು ಮುಂದೂಡುತ್ತಿದ್ದಾರೆ‘ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಇದಕ್ಕೆ ಸ್ಪೀಕರ್‌ ನಾಯಕತ್ವ ವಹಿಸಿದ್ದಾರೆ. ಈ ಟ್ವೀಟ್‌ ಮಾಡಿದ್ದಕ್ಕಾಗಿ ನಾನು ಜೈಲಿಗೆ ಹೋಗಲೂ ಸಿದ್ಧ‘ ಎಂದು ಅವರು ಬರೆದುಕೊಂಡಿದ್ದಾರೆ.

ಈ ಹಿಂದೆ ಕೂಡ ಮೊಯಿತ್ರಾ ಅವರು ಮಾಧ್ಯಮಗಳ ಎದುರು ಸ್ಪೀಕರ್‌ ವಿರುದ್ಧ ಬಹಿರಂಗ ಅಸಮಾಧಾನ ತೋಡಿಕೊಂಡಿದ್ದರು.

ಉಭಯ ಸದನಗಳಲ್ಲಿ ಅದಾನಿ ವಿವಾದ ಸಂಬಂಧ ಆಡಳಿತ ಪಕ್ಷ ಹಾಗೂ ವಿಪಕ್ಷಗಳ ನಡುವೆ ಮಾತಿನ ಸಮರವೇ ನಡೆಯುತ್ತಿದೆ. ವಿವಾದ ಸಂಬಂಧ ತಮಗೆ ಮಾತನಾಡಲು ಅವಕಾಶ ಸಿಗುತ್ತಿಲ್ಲ ಎನ್ನುವುದು ಪ್ರತಿಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.