ADVERTISEMENT

ಬಿಜೆಪಿಯ ಮತಗಳು ಚದುರ‌ದಂತೆ ತಡೆಯಲು ಅಡ್ವಾಣಿಗೆ ಭಾರತ ರತ್ನ– ಅಖಿಲೇಶ್‌ ಯಾದವ್‌

ಪಿಟಿಐ
Published 4 ಫೆಬ್ರುವರಿ 2024, 3:05 IST
Last Updated 4 ಫೆಬ್ರುವರಿ 2024, 3:05 IST
ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್‌ ಯಾದವ್‌
ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್‌ ಯಾದವ್‌   

ಬಲರಾಮ್‌ಪುರ (ಉತ್ತರ ಪ್ರದೇಶ): ಪಕ್ಷದ ಮತಗಳು ಚದುರದಂತೆ ತಡೆಯಲು ಬಿಜೆಪಿ ಸರ್ಕಾರ ಎಲ್‌. ಕೆ. ಅಡ್ವಾಣಿ ಅವರಿಗೆ ಭಾರತ ರತ್ನ ಘೋಷಣೆ ಮಾಡಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಹೇಳಿದ್ದಾರೆ.

ಬಲರಾಮ್‌ಪುರ ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿಜೆಪಿಯು ಕೇಂದ್ರದಲ್ಲಿ ತನ್ನ ಅಧಿಕಾರಾವಧಿ ಮುಗಿಯುವ ಮೊದಲು, ತನ್ನ ಮತಗಳನ್ನು ಕ್ರೋಢೀಕರಿಸಲು ಈ ಭಾರತ ರತ್ನ ನೀಡುತ್ತಿದೆಯೇ ಹೊರತು ಗೌರವದಿಂದ ನೀಡುತ್ತಿಲ್ಲ’ ಎಂದಿದ್ದಾರೆ.

ಬಿಜೆಪಿ ಅತಿದೊಡ್ಡ ಭೂ ಮಾಫಿಯಾ ಪಕ್ಷವಾಗಿ ಮಾರ್ಪಟ್ಟಿದೆ. ಭೂ ಮಾಫಿಯಾಗಳು ನಡೆಯದ ಜಿಲ್ಲೆಯೇ ಉಳಿದಿಲ್ಲ. ಬಿಜೆಪಿ ಸರ್ಕಾರದ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆ ಶೂನ್ಯವಾದಂತಿದೆ ಎಂದು ಕಿಡಿಕಾರಿದರು.

ADVERTISEMENT

ಇದೇ ವೇಳೆ, ವಿರೋಧ ಪಕ್ಷವಾದ ‘ಇಂಡಿಯಾ’ ಬಣದಲ್ಲಿ ಸೀಟು ಹಂಚಿಕೆ ಕುರಿತು ಬಹುತೇಕ ಒಮ್ಮತವಿದೆ ಎಂದಿದ್ದಾರೆ.

ಇರುವ ಸೀಟು ಮತ್ತು ಜಯದ ಆಧಾರದ ಮೇಲೆ ಸೀಟು ಹಂಚಿಕೆ ಮಾಡಲಾಗಿದೆ ಎಂದ ಅವರು, ಈಗಾಗಲೇ ಕಾಂಗ್ರೆಸ್ ನಾಯಕತ್ವದ ಜತೆ ಮಾತುಕತೆ ನಡೆಸಿದ್ದು, ಸೀಟು ಹಂಚಿಕೆ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.