
ನವದೆಹಲಿ: ದೆಹಲಿ ರಾಷ್ಟ್ರೀಯ ಜೈವಿಕ ಉದ್ಯಾನದಲ್ಲಿದ್ದ ಆಫ್ರಿಕನ್ ಆನೆ ಶಂಕರ್ ವೈರಾಣು ಸೋಂಕಿನಿಂದ ಮೃತಪಟ್ಟಿದೆ. ಹೃದಯಕ್ಕೆ ಸೋಂಕು ತಗುಲಿದ ಪರಿಣಾಮ ಆನೆ ಮೃತಪಟ್ಟಿದೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ದೃಢಪಟ್ಟಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಇಎಂಸಿವಿ ಎನ್ನುವ ಸೋಂಕು ಹೃದಯ ಸ್ನಾಯುಗಳ ಉರಿಯೂತಕ್ಕೆ ಕಾರಣವಾಗಿದೆ. ಇದರಿಂದ ಆನೆ ಮೃತಪಟ್ಟಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಸೆಪ್ಟೆಂಬರ್ 17 ರಂದು ಆನೆ ಮೃತಪಟ್ಟಿತ್ತು.
ಈ ಹಿಂದೆ ಹೃದಯ ವೈಫಲ್ಯದಿಂದ ಆನೆ ಮೃತಪಟ್ಟಿರುವುದಾಗಿ ಉದ್ಯಾನದ ಅಧಿಕಾರಿಗಳು ಹೇಳಿದ್ದರು.
ಇಎಂಸಿವಿ ಸೋಂಕು ಇಲಿಗಳಿಂದ ಹರಡುತ್ತವೆ. ಸೋಂಕು ಹೃದಯ ಸ್ನಾಯುಗಳ ಉರಿಯೂತಕ್ಕೆ ಕಾರಣವಾಗುತ್ತದೆ ಮತ್ತು ಹೃದಯ ವೈಫಲ್ಯಕ್ಕೆ ಕಾರಣವಾಗುತ್ತದೆ ಎಂದು ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆ ಹೇಳಿದೆ.
ಆಫ್ರಿಕನ್ ಆನೆಯನ್ನು 1998 ರಲ್ಲಿ ಜಿಂಬಾಬ್ವೆ ಭಾರತಕ್ಕೆ ಉಡುಗೊರೆಯಾಗಿ ನೀಡಿತ್ತು. ಅದಕ್ಕೆ ಮಾಜಿ ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮಾ ಅವರ ಹೆಸರನ್ನು ಇಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.