ನವದೆಹಲಿ: ನೂತನ ಕೃಷಿ ಕಾಯ್ದೆಗಳ ಕುರಿತು ವಿವಿಧ ರೈತ ಸಂಘಟನೆಗಳು ಎತ್ತಿರುವ ಪ್ರಮುಖ ಅಂಶಗಳನ್ನಿಟ್ಟುಕೊಂಡು ಸರ್ಕಾರ ತಯಾರಿಸಿದ ‘ಕರಡು ಪ್ರಸ್ತಾವನೆ’ಯನ್ನು ಬುಧವಾರ ರೈತರ ಮುಖಂಡರಿಗೆ ತಲುಪಿಸಲಾಗಿದೆ.
ಭಾರತೀಯ ಕಿಸಾನ್ ಯೂನಿಯನ್ (ಏಕ್ತಾ ಉಗ್ರಹಾನ್) ಸಂಘದ ಜೋಗಿಂದರ್ ಸಿಂಗ್ ಉಗ್ರಾಹಾನ್ ಸೇರಿದಂತೆ ಪ್ರತಿಭಟನಾ ನಿರತ ಪ್ರಮುಖ 13 ವಿವಿಧ ರೈತ ಸಂಘಗಳ ನಾಯಕರಿಗೆ ಕರಡು ಪ್ರಸ್ತಾವನೆಯನ್ನು ಸರ್ಕಾರ ಕಳುಹಿಸಿಕೊಟ್ಟಿದೆ.
ಕೇಂದ್ರ ಕೃಷಿ ಇಲಾಖೆಯ ಜಂಟಿ ಕಾರ್ಯದರ್ಶಿ ವಿವೇಕ್ ಅಗರ್ವಾಲ್ ಅವರ ಮೂಲಕ ಸರ್ಕಾರ ಕರಡು ಪ್ರಸ್ತಾವನೆಯನ್ನು ರೈತ ಸಂಘಗಳ ಮುಖಂಡರಿಗೆ ತಲುಪಿಸಿತು.
‘ಸರ್ಕಾರ ಕಳುಹಿಸಿರುವ ಕರಡು ಪ್ರಸ್ತಾವನೆ ರೈತ ಸಂಘಟನೆಗಳನ್ನು ತಲುಪಿವೆ‘ ಎಂದು ಭಾರತೀಯ ಕಿಸಾನ್ ಯೂನಿಯನ್(ಬಿಕೆಯು) ರಾಷ್ಟ್ರೀಯ ವಕ್ತಾರ ರಾಕೇಶ್ ಟಿಕಾಯತ್ ತಿಳಿಸಿದ್ದಾರೆ. ಕೃಷಿ ಕಾಯ್ದೆಗಳ ಕುರಿತು ಸರ್ಕಾರದೊಂದಿಗೆ ಮಾತುಕತೆ ನಡೆಸಲು ಮಂದಾಗುವ ವಿವಿಧ ರೈತ ಸಂಘಗಳ ಮುಖಂಡರಲ್ಲಿ ರಾಖೇಶ್ ಕೂಡ ಪ್ರಮುಖರು.
ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಮಂಗಳವಾರ ರಾತ್ರಿ 13 ಯೂನಿಯನ್ ನಾಯಕರೊಂದಿಗೆ ನಡೆಸಿದ ಸಭೆಯಲ್ಲಿ, ಮೂರು ಕೃಷಿ ಕಾನೂನುಗಳಿಗೆ ಸಂಬಂಧಿಸಿದಂತೆ ರೈತರು ಎತ್ತಿರುವ ಪ್ರಮುಖ ವಿಷಯಗಳನ್ನು ಸೇರಿಸಿ ಸಿದ್ಧಪಡಿಸಿದ್ದ ಕರಡು ಪ್ರಸ್ತಾವನೆಯನ್ನು, ರೈತ ನಾಯಕರಿಗೆ ತಲುಪಿಸುವುದಾಗಿ ಹೇಳಿದ್ದರು.
ಕೃಷಿ ಕಾಯ್ದೆಗಳ ರದ್ಧತಿ ಕುರಿತು ಪ್ರತಿಭಟನಾ ನಿರತ ರೈತ ಮುಖಂಡರು ಮತ್ತು ಸರ್ಕಾರದ ನಡುವೆ ಬುಧವಾರ ಬೆಳಿಗ್ಗೆ ನಿಗದಿಯಾಗಿದ್ದ ಆರನೇ ಸುತ್ತಿನ ಮಾತುಕತೆ ರದ್ದಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.