ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಗೆ ಇನ್ನೊಂದು ವಾರ ಬಾಕಿಯಿದೆ. ಈ ನಡುವೆ ಎಎಪಿಯ ಏಳು ಜನ ಶಾಸಕರು ಪಕ್ಷ ತೊರೆದಿದ್ದಾರೆ.
ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನಿರಾಕರಿಸಿದ ಕಾರಣ ಏಳು ಜನ ಅತೃಪ್ತ ಶಾಸಕರು ಇತರ ಪಕ್ಷದೊಂದಿಗೆ ಸಂಪರ್ಕದಲ್ಲಿದ್ದರು ಎಂದು ಮೂಲಗಳು ತಿಳಿಸಿವೆ.
ಬಹುತೇಕ ಶಾಸಕರು ಸಾಮಾಜಿಕ ಮಾಧ್ಯಮದಲ್ಲಿ ಪಕ್ಷಕ್ಕೆ ರಾಜೀನಾಮೆ ನೀಡಿರುವ ಪತ್ರವನ್ನು ಹಂಚಿಕೊಂಡಿದ್ದು, ಎಎಪಿಯ ಭ್ರಷ್ಟಾಚಾರ ಸೇರಿದಂತೆ ಇತರ ವಿಚಾರಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕಸ್ತೂರ್ಬಾ ನಗರದ ಶಾಸಕ ಮದನ್ ಲಾಲ್, ‘ತಾವೂ ಸೇರಿ ಆರು ಶಾಸಕರು ಎಎಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇವೆ. ರಾಜೀನಾಮೆ ಪತ್ರವನ್ನು ವಿಧಾನಸಭಾ ಸ್ಪೀಕರ್ ರಾಮ್ ನಿವಾಸ್ ಅವರಿಗೂ ನೀಡಿದ್ದೇವೆ’ ಎಂದು ಹೇಳಿದ್ದಾರೆ.
ಪಲಮ್ ಕ್ಷೇತ್ರದ ಭವನ ಗೌರ್, ಮೆಹರೌಲಿ ಕ್ಷೇತ್ರದ ನರೇಶ್ ಯಾದವ್, ತ್ರಿಲೋಕಪುರಿ ಕ್ಷೇತ್ರದ ರೋಹಿತ್ ಮೆಹ್ರುಲಿಯಾ ಮತ್ತು ಆದರ್ಶ್ನಗರ ಕ್ಷೇತ್ರದ ಪವನ್ ಶರ್ಮಾ ಕೂಡ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ಫೆ.5 ರಂದು ದೆಹಲಿಯ 70 ಮಂದಿ ಸದಸ್ಯ ಬಲದ ವಿಧಾನ ಸಭೆಗೆ ಚುನಾವಣೆ ನಡೆಯಲಿದ್ದು, ಫೆ.8 ರಂದು ಮತ ಎಣಿಕೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.