ಪಟ್ನಾ: ಚುನಾವಣಾ ಹೊಸ್ತಿಲಿನಲ್ಲಿರುವ ಬಿಹಾರದಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ರಾಜಕೀಯ ಪಕ್ಷಗಳ ನಡುವೆ ಕಾಳಗ ಶುರುವಾಗಿದೆ. ಆಡಳಿತಾರೂಢ ಎನ್ಡಿಎ ಹಾಗೂ ಪ್ರತಿಪಕ್ಷ ಆರ್ಜೆಡಿ ನಾಯಕರು ಆ್ಯನಿಮೇಷನ್ ವಿಡಿಯೊಗಳ ಮೂಲಕ ಒಬ್ಬರ ಮೇಲೊಬ್ಬರು ಟೀಕಾಪ್ರಹಾರ ನಡೆಸಿದ್ದಾರೆ.
ಜೆಡಿಯು ಪಕ್ಷದ ಮುಖ್ಯಸ್ಥ, ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ವ್ಯಂಗ್ಯ ಮಾಡುವಂತಹ ಆ್ಯನಿಮೇಷನ್ ವಿಡಿಯೊವನ್ನು ಆರ್ಜೆಡಿ ಪಕ್ಷದ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಅದರಲ್ಲಿ ನಿತೀಶ್ ಅವರನ್ನು ಉದ್ದೇಶಿಸಿ, ಪದೇ ಪದೇ ಮೈತ್ರಿ ಬದಲಿಸುವವರ ಮಾತುಗಳೆಲ್ಲವೂ ಅಸಂಬದ್ಧ ಎಂದು ಟೀಕಿಸಲಾಗಿದೆ.
ಇತ್ತ ಬಿಜೆಪಿ ಕೂಡ ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಹಾಗೂ ಅವರ ಪುತ್ರರಾದ ತೇಜಸ್ವಿ ಮತ್ತು ತೇಜ್ ಪ್ರತಾಪ್ ಯಾದವ್ ಅವರನ್ನು ಅಪಹಾಸ್ಯ ಮಾಡುವಂಥ ವಿಡಿಯೊಗಳನ್ನು ಅಪ್ಲೋಡ್ ಮಾಡಿದೆ.
ಲಾಲು, ತೇಜಸ್ವಿ ಮತ್ತು ತೇಜ್ ಪ್ರತಾಪ್ ಆಟೊವೊಂದರಲ್ಲಿ ಪ್ರಯಾಣಿಸುತ್ತಿದ್ದು, ಆಟೊ ಚಾಲಕ ಆ ಮೂವರಿಗೂ ಕಳೆದ 10 ವರ್ಷದಲ್ಲಿ ನಡೆದಿರುವ ಅಭಿವೃದ್ಧಿಯನ್ನು ತೋರಿಸಿದ ತಕ್ಷಣ ಮೂವರು ಮುಜುಗರಕ್ಕೊಳಗಾಗಿ ಆಟೊದಿಂದ ಕೆಳಗೆ ಇಳಿಯುವಂತೆ ವಿಡಿಯೊದಲ್ಲಿ ತೋರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.